ಲಾಹೋರ್ ಗುಂಡಿನ ದಾಳಿ, ಭಯೋತ್ಪಾದಕರ ಕೃತ್ಯ
ಲಾಹೋರ್, ಮಾ. 3 : ಶ್ರೀಲಂಕಾ ಆಟಗಾರರ ಮೇಲೆ ನಡೆದ ಗುಂಡಿನ ದಾಳಿ ಪೂರ್ವ ನಿಯೋಜಿತ ಕೃತ್ಯ. ಭಯೋತ್ಪಾದನೆ ಸಂಘಟನೆಗೆ ಸೇರಿದ 12 ಮಂದಿ ತರಬೇತಿ ಪಡೆದಿರುವ ಉಗ್ರರು ಆಟಗಾರರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಪಾಕಿಸ್ತಾನದ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಲಾಹೋರ್ ನಗರದಲ್ಲಿ ಭಯೋತ್ಪಾದಕರು ಕೆಲ ದಿನಗಳಿಂದ ಬೀಡುಬಿಟ್ಟಿದ್ದರು. ಇಂದು ಬೆಳಗ್ಗೆ ಅಟೋ ದಲ್ಲಿ ಬಂದಿಳಿದ ಮುಸುಕುಧಾರಿ ವ್ಯಕ್ತಿಗಳು ಆಟಗಾರರ ಮೇಲೆ ಸುಮಾರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ರಾಕೆಟ್ ಗಳು, ಗ್ರೈನೇಡ್ ಗಳು ಹಾಗೂ ಕಲಾಷ್ನಿಕೋವ್ ಗನ್ ಗಳನ್ನು ಹೊಂದಿದ್ದ ಉಗ್ರರು ನಿಯೋಜಿತ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ವಕ್ತಾರ ಹಬೀಬ್ ಉರ್ ರೆಹಮಾನ್ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಆಟಗಾರರಿಗೆ ಕೇವಲ 5 ಮಂದಿ ಭದ್ರತೆ ಒದಗಿಸಿದ್ದು, ಅನೇಕ ಸಂಶಯಗಳಿಗೆ ಕಾರಣವಾಗಿದೆ. ಗುಂಡಿನ ದಾಳಿಯಲ್ಲಿ ಈ 5 ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಅಂಪೈರ್ ಎಹಸಾನ್ ರಾಜಾ ತೀವ್ರ ಗಾಯಗೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅತ್ತ ಶ್ರೀಲಂಕಾ ಸರ್ಕಾರ, ತಮ್ಮ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ತೀವ್ರ ಆತಂಕ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟಗಾರರಿಗೆ ಸೂಕ್ತ ಭದ್ರತೆ ಒದಗಿಸುವುದು ಅಲ್ಲಿನ ಸರ್ಕಾರದ ಕರ್ತವ್ಯ. ಆದರೆ, ಭದ್ರತಾ ಲೋಪ ಎದ್ದು ಕಂಡಿದೆ. ಇದಕ್ಕೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಶ್ರೀಲಂಕಾದಲ್ಲಿ ಕ್ರಿಕೆಟ್ ಪ್ರಿಯರು ಪ್ರತಿಭಟನೆ ನಡೆಸುತ್ತಿರುವ ವರದಿ ಬಂದಿದೆ. ಪಾಕ್ ಪ್ರವಾಸ ರದ್ದುಗೊಳಿಸಿ ತವರಿಗೆ ಮರಳಲು ಅಲ್ಲಿನ ಜನತೆ ಸರ್ಕಾರವನ್ನು ಒತ್ತಾಯಿಸಿದೆ.
(ಏಜನ್ಸೀಸ್)
ಪೂರಕ ಓದಿಗೆ:
ಶ್ರೀಲಂಕಾ ಆಟಗಾರ ಸಮರವೀರ ಎದೆಯಲ್ಲಿ ಗುಂಡು
ಲಾಹೋರ್ : ಶ್ರೀಲಂಕಾದ ಎಂಟು ಆಟಗಾರರಿಗೆ ಗಾಯ
ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಗುಂಡಿನ ದಾಳಿ












Click it and Unblock the Notifications