ಸರ್ಕಾರಿ ಸೌಲಭ್ಯಗಳು ಅರ್ಹರಿಗೆ ತಲುಪಲಿ, ಶೋಭಾ
ಬೆಂಗಳೂರು, ಫೆ. 23 : ಮನೆ ಮನೆಗೆ ತೆರಳಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ-ಸವಲತ್ತುಗಳ ಲಾಭವನ್ನು ಅವರಿಗೆ ದೊರಕಿಸಿ ಕೊಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಸೂಲಿಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1.55 ಕೋಟಿ ರೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಎಲ್ಲಾ ಯೋಜನೆಗಳ ಪ್ರಯೋಜನವೂ ಅರ್ಹ ಫಲಾನುಭವಿಗಳಿಗೆ ದೊರೆಯಬೇಕು ಎಂಬುದು ರಾಜ್ಯ ಸರ್ಕಾರದ ಆಶಯವಾಗಿದೆ. ಅದಕ್ಕಾಗಿ ಅರ್ಹರ ಅನ್ವೇಷಣೆ ಅತ್ಯಾವಶ್ಯಕ ಎಂದ ಅವರು, ಸರ್ಕಾರದ ಎಲ್ಲಾ ಕಾರ್ಯಚಟುವಟಿಕೆಗಳಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜನೋಪಯೋಗಿ ಕಾರ್ಯಗಳಿಗೆ ಸರ್ಕಾರಿ ಜಮೀನು ಮೀಸಲಿರಿಸಿ :
ಗೃಹ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ ಮತ್ತಿತರ ಚಟುವಟಿಕೆಗಳಿಗೆ ಈ ಹಿಂದೆ ಸರ್ಕಾರಿ ಜಮೀನುಗಳನ್ನು ಖಾಸಗಿಯವರಿಗೆ ಅವ್ಯಾಹತವಾಗಿ ಮಾರಾಟ ಮಾಡಲಾಗಿದೆ. ಇದರಿಂದ ಆಸ್ಪತ್ರೆಗಳ ಸ್ಥಾಪನೆ, ಶಾಲಾ-ಕಾಲೇಜುಗಳ ಕಟ್ಟಡಗಳ ನಿರ್ಮಾಣದಂತಹ ಜನಪರ ಕಾರ್ಯಗಳಿಗೆ ಸರ್ಕಾರವೇ ಜಮೀನು ಖರೀದಿಸಲು ಪರದಾಡುವಂತಾಗಿದೆ ಎಂದ ಸಚಿವರು, ಸರ್ಕಾರಿ ಜಮೀನುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಬೇಡಿ. ಸರ್ಕಾರಿ ಜಮೀನುಗಳನ್ನು ಸರ್ಕಾರದ ಜನೋಪಯೋಗಿ ಕಾರ್ಯಗಳಿಗೆ ಮೀಸಲಿರಿಸಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ತಾವು ಪ್ರತಿನಿಧಿಸುತ್ತಿರುವ ಯಶವಂತಪುರ ವಿಧಾನಸಭಾ ಕ್ಷೇತ್ರ ರಾಜ್ಯದ ರಾಜಧಾನಿಗೆ ಹೊಂದಿಕೊಂಡಿದ್ದರೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದು ಕಳವಳದ ಸಂಗತಿ ಎಂದ ಶೋಭಾ ಕರಂದ್ಲಾಜೆ ಅವರು, ಸಮಸ್ಯೆಗಳ ಸಾಗರದಲ್ಲಿ ಮುಳುಗಿರುವ ಈ ಕ್ಷೇತ್ರವನ್ನು ಇನ್ನು ಮೂರು ವರ್ಷಗಳೊಳಗೆ ಸಕಲ ಸೌಲಭ್ಯಗಳಿರುವ ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಪಣತೊಟ್ಟಿರುವುದಾಗಿ ಪ್ರಕಟಿಸಿದರು.
ಸೂಲಿಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಚಿಕ್ಕಬಸ್ತಿಯಿಂದ ರಾಮಸಂದ್ರದವರೆಗೆ, ರಾಮಸಂದ್ರದಿಂದ ಕೆಂಚನಪುರ ಅಡ್ಡರಸ್ತೆಯವರೆಗೆ ಹಾಗೂ ರಾಮಸಂದ್ರದಿಂದ ಧನನಾಯಕನಹಳ್ಳಿ ಮಾರ್ಗವಾಗಿ ದೊಡ್ಡ ಬಸ್ತಿಯವರೆಗೆ ತಲಾ 35 ಲಕ್ಷ ರೂ ವೆಚ್ಚದಲ್ಲಿ ತಲಾ ಎರಡು ಕಿ. ಮೀ ರಸ್ತೆ ಅಭಿವೃದ್ಧಿ ಮತ್ತು ನಿರ್ಮಾಣವೂ ಸೇರಿದಂತೆ ಒಟ್ಟಾರೆ 1.55 ಕೋಟಿ ರೂ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)