ಉಗ್ರ ಕಸಬ್ ಹತ್ಯೆಗೆ ದಾವೂದ್ಗೆ ಸುಪಾರಿ !!
ಮುಂಬೈ, ಫೆ. 10 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಹತ್ಯೆಗೆ ಪಾಕ್ ಐಎಸ್ಐ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸುಪಾರಿ ನೀಡಿರುವ ಆಘಾತಕಾರಿ ಅಂಶವನ್ನು ಭಾರತದ ಗುಪ್ತಚರ ಇಲಾಖೆ ಬಯಲಿಗೆಳೆದಿದೆ.
ಭಾರತದ ವಿದೇಶಾಂಗ ಗುಪ್ತಚರ ಇಲಾಖೆ ಹಾಗೂ 'ರಾ' (ರಿಸರ್ಚ್ ಆಂಡ್ ಅನಾಲಿಸೀಸ್ ವಿಂಗ್) ಈ ಮಾಹಿತಿಯನ್ನು ಹೊರಗೆಡವಿದ್ದು, ಅಂತರ್ಜಾಲದ ಮೂಲಕ ನಡೆಸುತ್ತಿದ್ದ ಸಂಭಾಷಣೆಯ ಮೂಲಕ ಈ ಆಘಾತಕಾರಿ ಅಂಶವನ್ನು ಪತ್ತೆಹಚ್ಚಿದೆ. ಐಎಸ್ಐನ ಈ ಸುಪಾರಿಯನ್ನು ಸ್ವೀಕರಿಸಿರುವ ದಾವೂದ್ ಈ ಕೆಲಸಕ್ಕೆ ತನ್ನ ತಮ್ಮ ಛೋಟಾ ಶಕೀಲ್ ಅವನನ್ನು ನೇಮಿಸಿದ್ದು, ಅವನಿಗೆ 15 ಶಾರ್ಪ್ ಶೂಟರ್ ಗಳ ತಂಡವೊಂದನ್ನು ನೇಮಿಸಿದ್ದಾನೆ ಎಂದು 'ರಾ'(RAW) ಬಹಿರಂಗಪಡಿಸಿದೆ.
ಉಗ್ರ ಕಸಬ್ನನ್ನು ಅರ್ಥರ್ ರೋಡ್ ಜೈಲಿನ ಮತ್ತೊಂದು ಸೆಲ್ಗೆ ಕರೆದೊಯ್ಯುವ ಸಮಯದಲ್ಲಿ ಹತ್ಯೆಗೈಯುವ ಸಂಚನ್ನು ದಾವೂದ್ ಬಣ ರೂಪಿಸಿರುವುದು 'ರಾ' ಬಯಲಿಗೆಳೆದ ನಂತರ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಇಡೀ ಜೈಲಿನಲ್ಲಿ ದಾವೂದ್ ಚೇಲಾಗಳು ಆರೋಪಿಗಳಾಗಿ ಇರುವುದು ಪೋಲಿಸ್ ಅಧಿಕಾರಿಗಳಿಗೆ ಆತಂಕ ಹೆಚ್ಚಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications