ಲೋಕಸಭೆ ಚುನಾವಣೆ, ವಿವಿಧ ಪಕ್ಷಗಳ ಸಭೆ ಇಂದು
ನವದೆಹಲಿ, ಫೆ. 3 : ಏಪ್ರಿಲ್- ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಸಲು ಉದ್ದೇಶಿಸಿರುವ ಕೇಂದ್ರ ಚುನಾವಣೆ ಆಯೋಗವು ಇಂದು ದೇಶದ ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಮಹತ್ವದ ಚರ್ಚೆ ಆರಂಭಿಸಿದೆ. ಚುನಾವಣಾ ಆಯೋಗದ ಮುಖ್ಯ ಆಯುಕ್ತ ಎಲ್ ಗೋಪಾಲಸ್ವಾಮಿ ಹಾಗೂ ಆಯುಕ್ತ ನವೀನ ಚಾವ್ಲಾ ನಡುವೆ ವೈಮನಸ್ಸು ಉಂಟಾಗಿರುವ ಬೆನ್ನಲ್ಲೇ ಇಂದು ಸಭೆ ಕರೆದಿರುವುದು ಎಲ್ಲರ ಕಣ್ಣು ಅತ್ತ ನೆಟ್ಟಿದೆ. ಸಭೆಯಲ್ಲಿ ಗೋಪಾಲಸ್ವಾಮಿ, ನವೀನ ಚಾವ್ಲಾ ಹಾಗೂ ಮೊಹ್ಮದ್ ಖುರೇಶಿ ಸೇರಿ ಮೂವರು ಆಯುಕ್ತರು ಪಾಲ್ಗೊಳ್ಳಲಿದ್ದಾರೆ.
ದೇಶದ ರಾಷ್ಟ್ರೀಯ ಪಕ್ಷಗಳು ಸೇರಿ ಸುಮಾರು 47 ಪಕ್ಷಗಳು ಸಭೆಯಲ್ಲಿ ಭಾಗವಹಿಸಿವೆ. ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಪಕ್ಷಗಳ ಮುಖಂಡರಿಂದ ಸಲಹೆ ಸೂಚನೆ, ಪೂರ್ವ ತಯಾರಿ, ಶಾಂತಿಯುತವಾಗಿ ನಡೆಸಲು ಬೇಕಾಗುವ ಎಲ್ಲ ಸಿದ್ದತೆಗಳ ಕುರಿತು ಸಭೆಯಲ್ಲಿ ಚರ್ಚೆಯಾಗಲಿವೆ.
ಕಳೆದ ವಾರ ಚುನಾವಣೆ ಮುಖ್ಯ ಆಯುಕ್ತ ಎನ್ ಗೋಪಾಲಸ್ವಾಮಿ ಹಾಗೂ ನವೀನ ಚಾವ್ಲಾ ನಡುವೆ ವಿರಸ ಉಂಟಾಗಿತ್ತು. ನವೀನ ಚಾವ್ಲಾ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಎಂದು ಗೋಪಾಲಸ್ವಾಮಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಕಾಂಗ್ರೆಸ್ ಪರ ಇರುವ ಚಾವ್ಲಾ ಅವರನ್ನು ವಜಾಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)
ಮುಂದಿನ ಮುಖ್ಯ ಚುನಾವಣಾ ಆಯುಕ್ತ ಚಾವ್ಲಾ?












Click it and Unblock the Notifications