ಏಪ್ರಿಲ್ ಅಂತ್ಯಕ್ಕೆ ಕಲ್ಭುರ್ಗಿ, ಚಿತ್ತಾಪೂರಕ್ಕೆ ನೀರು
ಗುಲಬರ್ಗಾ,ಜ.30:ಜಿಲ್ಲೆಯ ಗಂಡೋರಿನಾಲಾ ಮಧ್ಯಮ ನೀರಾವರಿ ಯೋಜನೆಯ ಸಂಪೂರ್ಣ ಕಾಮಗಾರಿಗಳು 2009 ಏಪ್ರಿಲ್ ಮಾಹೆಯ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಪಶುಸಂಗೋಪನಾ ಸಚಿವ ರೇವುನಾಯಕ ಬೆಳಮಗಿ ಅವರು ತಿಳಿಸಿದರು.
ಅವರು ಗುರುವಾರ ಗಂಡೋರಿನಾಲಾ ಜಲಾನಯನ ಪ್ರದೇಶದ ವೀಕ್ಷಣೆ ಕೈಗೊಂಡು ಪತ್ರಕರ್ತರೊಂದಿಗೆ ಮಾತನಾಡಿದರು. ಗಂಡೋರಿನಾಲಾ ಯೋಜನೆಗೆ ಈವರೆಗೆ ಒಟ್ಟು 216 ಕೋಟಿ ರೂ. ಖರ್ಚಾಗಿದ್ದು, ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 30 ಕೋಟಿ ರೂ. ಬೇಕಾಗುತ್ತವೆ. ಇದರಿಂದ ಈ ಯೋಜನೆಯ ಒಟ್ಟು ಮೊತ್ತ 246 ಕೋಟಿ ರೂ. ಆಗಲಿದೆ. ಕಾಮಗಾರಿ ಪೂರ್ಣಗೊಂಡ ನಂತರ ಗುಲಬರ್ಗಾ ತಾಲೂಕಿನ 12 ಗ್ರಾಮಗಳ ಸುಮಾರು 5000 ಹೆಕ್ಟೇರ್ ಹಾಗೂ ಚಿತ್ತಾಪೂರ ತಾಲೂಕಿನ 12 ಗ್ರಾಮಗಳ ಸುಮಾರು 3000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯ ಎಂದು ತಿಳಿಸಿದರು.
ಗಂಡೋರಿನಾಲಾ ಯೋಜನೆಯ ಎಡದಂಡೆ ಕಾಲುವೆಯಿಂದ ಈಗಾಗಲೇ ನೀರನ್ನು ಹರಿಬಿಡಲಾಗಿದ್ದು, ಒಟ್ಟು 80 ಕಿ.ಮೀ ಉದ್ದದ ಈ ಕಾಲುವೆಯ ಅಂತ್ಯದವರೆಗೂ ನೀರು ತಲುಪಿದೆ. ಇದರಿಂದಾಗಿ ಗುಲಬರ್ಗಾ ತಾಲೂಕಿನ 3000 ಹೆಕ್ಟೇರ್ ಹಾಗೂ ಚಿತ್ತಾಪೂರ ತಾಲೂಕಿನ ಸುಮಾರು 3000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಕ್ಕಂತಾಗಿದೆ ಎಂದರು.
ಬಚಾವತ್ ಐ-ತೀರ್ಪಿನ ಪರಿಷ್ಕೃತ ಒಪ್ಪಂದದಂತೆ ಈ ಯೋಜನೆಗೆ ಒಟ್ಟು 2.16 ಟಿ.ಎಂ.ಸಿ. ನೀರಿನ ಪ್ರಮಾಣವನ್ನು ನಿಗದಿಪಡಿಸಲಾಗಿದೆ.ಗಂಡೋರಿನಾಲಾ ಯೋಜನೆಯ ಎಡದಂಡೆ ಕಾಲುವೆಯಿಂದ ನೀರು ಸೋರಿಕೆಯಿಂದಾಗಿ ಕಾಲುವೆಯ ಪಕ್ಕದ ಕೃಷಿ ಭೂಮಿಯು ಹಾನಿಗೊಳಗಾಗಿದೆ ಹಾಗೂ ಕಾಲುವೆಯ ನಿರ್ಮಾಣಕ್ಕೆ ಕೃಷಿ ಭೂಮಿ ಭೂಸ್ವಾಧೀನ ಪಡಿಸಿಕೊಂಡ ಹಲವಾರು ರೈತರಿಗೆ ಪರಿಹಾರ ದೊರೆತಿಲ್ಲ. ಅವರಿಗೆ ಪರಿಹಾರ ನೀಡಲು ನೀರಾವರಿ ಇಲಾಖೆಯು 50 ಲಕ್ಷ ರೂ.ಗಳ ಅನುದಾನದ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶ್ರೀಧರ ರತ್ನಗಿರಿ, ಉದಯ ಪಾಟೀಲ್, ಮುಖಂಡರಾದ ಅಮರನಾಥ ಪಾಟೀಲ್, ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಬಿ.ಬಿ.ರಾಂಪುರೆ, ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಕಕ್ಕೇರಿ ಚಂದ್ರಶೇಖರ, ಮತ್ತಿತರ ಗಣ್ಯರು ಸಚಿವರೊಂದಿಗೆ ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications