ಬೆಳಗಾವಿ ಪ್ರವಾಸೋದ್ಯಮಕ್ಕೆ 50 ಕೋಟಿ ರು
ಬೆಳಗಾವಿ. ಜ . 25 : ಬೆಳಗಾವಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಂಪರ್ಕ ರಸ್ತೆ, ಸಾರಿಗೆ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು 50 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಮೂಲಭೂತಸೌಕರ್ಯಗಳ ಸಚಿವರಾದ ಬಿ.ಜನಾರ್ಧನ ರೆಡ್ಡಿ ಅವರು ಇಂದು ಇಲ್ಲಿ ತಿಳಿಸಿದರು.
ಮಾಧ್ಯಮಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬೆಳಗಾವಿ ಬಳಿಯ ರಾಜಹಂಸಗಡ ಕೋಟೆಯನ್ನು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜನ್ಮಸ್ಥಳವಾದ ಕಾಕತಿ ಗ್ರಾಮವನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಹಾಗೂ ಈ ಎರಡೂ ಸ್ಥಳಗಳಲ್ಲಿ ಇತಿಹಾಸ ಬಿಂಬಿಸುವ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮಗಳನ್ನು ಸಹ ನಡೆಸಲಾಗುವುದು. ಬೆಳಗಾವಿಯ ಇತಿಹಾಸ ಪ್ರಸಿದ್ದ ಕಿತ್ತೂರು ಕೋಟೆ, ಕಾಕತಿ, ಪ್ರೇಕ್ಷಣೀಯ ಸ್ಥಳಗಳಾದ ಗೋಕಾಕ್ ಜಲಪಾತ, ನವಿಲುತೀರ್ಥ, ಹಿಡಕಲ್ ಜಲಾಶಯಗಳಿಗೆ ಮತ್ತು ಗೊಡಚಿ ಹಾಗೂ ಸೌದತ್ತಿಯ ಧಾರ್ಮಿಕ ಕ್ಷೇತ್ರಗಳ ಭೇಟಿಗಾಗಿ ಕೆಎಸ್ಟಿಡಿಸಿ ಬಸ್ಗಳ ಪ್ರವಾಸವನ್ನು ಏರ್ಪಡಿಸಲಾವುದು ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಮೂರು ತಿಂಗಳೊಳಗಾಗಿ ಪ್ರವಾಸೋದ್ಯಮ ಇಲಾಖೆ ಕಚೇರಿಗೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಒದಗಿಸಿ, ಪೂರ್ಣ ಪ್ರಮಾಣದ ಕಚೇರಿ ಕಾರ್ಯಪ್ರವೃತ್ತವಾಗುವಂತೆ ನೋಡಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಇಲಾಖೆ ಕಚೇರಿ ಹಾಗೂ ಈ ಕಚೇರಿಗೆ ಅವಶ್ಯಕವಾದ ಅಧಿಕಾರಿ ಹಾಗೂ ಸಿಬ್ಬಂದಿವರ್ಗವನ್ನು ನೇಮಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ೪೧೨ ಜನ ಅಧಿಕಾರಿಗಳನ್ನು ನೇಮಕಮಾಡಲು ಸರ್ಕಾರ ಅನುಮತಿ ನೀಡಿದೆ ಎಂದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಹೆಲಿ ಪ್ರವಾಸೋದ್ಯಮ ( ಹೆಲಿ ಟೂರಿಸಂ) ಪ್ರಕ್ರಿಯೆ ಪ್ರಾರಂಭವಾಗಿದ್ದು, ಆನಂದ ಸಿಂಗ್ ಹಾಗೂ ಇಕ್ಬಾಲ್ ಅಹಮದ್ ಅವರು ೧೦ ಹೆಲಿಕಾಪ್ಟರ್ಗಳನ್ನು ಖರೀದಿಸಲು ಹಣವನ್ನು ತುಂಬಿದ್ದು, ಅದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕಿದೆ ಎಂದರು. ರಾಜ್ಯದ ಪ್ರವಾಸಿ ಹಾಗು ಪಾರಂಪರಿಕ ತಾಣಗಳಲ್ಲಿ ಜಮೀನು ಒತ್ತುವರಿಯಾಗಿದ್ದರೆ ಅದನ್ನು ಸ್ವಾಧೀನ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.
ಪ್ರತಿ ಜಿಲ್ಲೆಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹ ಕ್ರಮಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಕರಾವಳಿ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ಆರಂಭಗೊಂಡಿದೆ.
(ದಟ್ಸ್ ಕನ್ನಡ ವಾರ್ತೆ)
ಉತ್ತರ ಕರ್ನಾಟಕಕ್ಕೆ ಭರಪೂರ ಯೋಜನೆ












Click it and Unblock the Notifications