ರಾಜಕೀಯ ಪ್ರವೇಶ ಇಲ್ಲ, ಅಜರುದ್ದೀನ್
ಹೈದರಾಬಾದ್, ಜ. 20 : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮುಂಬರುವ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಆಂಧ್ರಪ್ರದೇಶದಾದ್ಯಂತ ಹರಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಜರುದ್ದೀನ್ ರಾಜಕಾರಣಕ್ಕೆ ಸೇರ್ಪಡೆಗೆ ಕುರಿತಂತೆ ಇನ್ನೂ ನಿರ್ಧರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಮೂಲಕ ಕಳೆದ ವಾರದಿಂದ ಹಬ್ಬಿದ್ದ ಗಾಳಿ ಸುದ್ದಿಗೆ ತಿಲಾಂಜಲಿ ನೀಡಿದ್ದಾರೆ.
ಅಜರುದ್ದೀನ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ ಸಂಬಂಧ ಅಜರುದ್ದೀನ್ ಶೀಘ್ರದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿತ್ತು. ಇದರಿಂದ ಕಾಂಗ್ರೆಸ್ ಮುಖಂಡರು ಕೂಡ ಅಜರುದ್ದೀನ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾದರೆ ಮುಕ್ತ ಸ್ವಾಗತವಿದೆ ಎಂದು ಹೇಳಿಕೆ ನೀಡಿದ್ದರು.
2004 ರ ವಿಧಾಮಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಅಜರುದ್ದೀನ್ ಸ್ಪರ್ಧಿಸಲಿದ್ದಾರೆ. ಹಾಗೂ ಕಳೆದ ವರ್ಷ ಫೆಬ್ರುವರಿಯಲ್ಲಿ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಅಜರುದ್ದೀನ್ ತೆಲಂಗಾಣಾ ರಾಷ್ಟ್ರೀಯ ಸಮಿತಿ ಸೇರಿಕೊಂಡು ಹೈದರಾಬಾದ್ ಮೇಯರ್ ಆಗಲಿದ್ದಾರೆ ಎಂದು ಸುದ್ದಿಯೊಂದು ಹುಟ್ಟಿಕೊಂಡಿತ್ತು. ಇಂದು ಕೂಡ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ರೆಕ್ಕೆಪುಕ್ಕ ಸಿಕ್ಕಿದೆ. ಇದನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಅಜರುದ್ಧೀನ್ ರಾಜಕೀಯ ಸೇರುವ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications