ಸಿದ್ದರಾಮಯ್ಯ ಪ್ರಜಾರಾಜ್ಯಂಗೆ ಸೇರ್ಪಡೆ ಸಾಧ್ಯತೆ
ಬೆಂಗಳೂರು, ಜ. 5 : ಕಾಂಗ್ರೆಸ್ ತೊರೆಯಲು ನಿರ್ಧರಿಸಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ತೆಲುಗು ಚಿತ್ರರಂಗದ ಅನಭಿಷಕ್ತ ದೊರೆ ಚಿರಂಜೀವಿ ನೇತೃತ್ವದ ಪ್ರಜಾರಾಜ್ಯಂ ಪಕ್ಷಕ್ಕೆ ಸೇರುವುದು ಖಚಿತ ಎನ್ನಲಾಗಿದೆ. ಸಿದ್ದರಾಮಯ್ಯ ಅವರ ನಿಕಟವರ್ತಿಯೊಬ್ಬರ ಪ್ರಕಾರ, ಕರ್ನಾಟಕದಲ್ಲಿ ಪ್ರಜಾರಾಜ್ಯಂ ಪಕ್ಷದ ಉಸ್ತುವಾರಿಯನ್ನು ಸಿದ್ದರಾಮಯ್ಯ ಹೊರಲು ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ತಿರುಪತಿಯಲ್ಲಿ ನೂತನ ಪಕ್ಷವನ್ನು ಉದ್ಘಾಟಿಸಿದ ಮೆಗಾಸ್ಟಾರ್ ಗೆ ಆಂಧ್ರಪ್ರದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಚಿರಂಜೀವಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ನೂತನ ಪಕ್ಷದ ಉದ್ಘಾಟನೆಗೆ ಸಾಕ್ಷಿಯಾಗಿದ್ದರು. ಇದು ಆಂಧ್ರಪ್ರದೇಶದ ಕಾಂಗ್ರೆಸ್, ಟಿಡಿಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲಿ ನಡುಕ ಹುಟ್ಟಿಸಿರುವುದಂತೂ ಸ್ಪಷ್ಟವಾಗಿತ್ತು. ಮುಂಬರುವ ಲೋಕಸಭೆ ಚುನಾವಣೆಯ ಜೊತೆಗೆ ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಪ್ರಜಾರಾಜ್ಯಂ ವಿಸ್ತರಣೆ ಮಾಡುಬೇಕೆನ್ನುವ ಚಿರೂ ಆಸೆಗೆ ಸಿದ್ದು ಕೈಜೋಡಿಸುವ ಸಾಧ್ಯತೆಗಳಿವೆ.
ಸಿದ್ದರಾಮಯ್ಯ ನಿಕಟವರ್ತಿ ಬಿ ಎಸ್ ಶಿವಣ್ಣ ಹೇಳುವ ಪ್ರಕಾರ, ಚಿರಂಜೀವಿ ಆಂಧ್ರಪ್ರದೇಶದಲ್ಲಿ ಮೆಗಾಸ್ಟಾರ್ ಮ್ಯಾಜಿಕ್ ಮಾಡಿದರೆ, ರಿಯಲ್ ಸ್ಟಾರ್ ಹಾಗೂ ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಕರ್ನಾಟಕದಲ್ಲಿ ಪ್ರಜಾರಾಜ್ಯಂ ಪಕ್ಷದ ಮ್ಯಾಜಿಕ್ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನತ್ತಾರೆ. ಅಲ್ಲದೆ ಜನವರಿ 21 ರಂದು ಹೈದರಾಬಾದ್ ನಲ್ಲಿ ಪ್ರಜಾರಾಜ್ಯಂ ಪಕ್ಷ ಏರ್ಪಡಿಸಿರುವ ಅಹಿಂದ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಚಿರಂಜೀವಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಕಾಂಗ್ರೆಸ್ ಸಭೆಗೆ ಹಾಜರಾಗಲ್ಲ: ಸಿದ್ದರಾಮಯ್ಯ











Click it and Unblock the Notifications