ಅಶೋಕ್ ಚೌಹಾಣ್ ಮಹಾರಾಷ್ಟ್ರ ಸಿಎಂ ?
ನವದೆಹಲಿ, ಡಿ. 4 : ವಿಲಾಸ್ ರಾವ್ ದೇಶಮುಖ್ ರಾಜೀನಾಮೆಯಿಂದ ಖಾಲಿಯಾಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯ ಕಸರತ್ತು ಮುಂದುವರೆದಿದೆ. ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಎಸ್ ಬಿ ಚವಾಣ್ ಪುತ್ರ ನಾಂದೇಡ್ ಕ್ಷೇತ್ರದ ಶಾಸಕ ಅಶೋಕ್ ಚವಾಣ್ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಹಿರಿಯ ನಾಯಕ ನಾರಾಯಣ ರಾಣೆ ಹೆಸರು ಬಲವಾಗಿ ಕೇಳಿಬರತೊಡಗಿದೆ.
ರಕ್ಷಣಾ ಸಚಿವ ಎ ಕೆ ಎಂಟನಿ ಹಾಗೂ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಶಾಸಕರ ಸಭೆ ಮುಖ್ಯಮಂತ್ರಿ ಆಯ್ಕೆ ಕುರಿತು ಭಾರಿ ಚರ್ಚೆ ನಡೆದಿದೆ. ಕರ್ನಾಟಕದ ಉಸ್ತುವಾರಿ ಹೊತ್ತಿರುವ ಪೃಥ್ವಿರಾಜ್ ಚೌಹಾಣ್ ಹಾಗೂ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಸಿಂಧೆ ಸಿಎಂ ಆಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ನಾಯಕರ ಕಡೆಗೆ ಕಾಂಗ್ರೆಸ್ ಹೈಕಮಾಂಡ್ ಮುಖ ಮಾಡಿದೆ.
ಮುಖ್ಯಮಂತ್ರಿ ಹುದ್ದೆಗೆ ಅಶೋಕ್ ಚೌಹಾಣ್, ನಾರಾಯಣ ರಾಣೆ ಹಾಗೂ ಬಾಳಾಸಾಹೇಬ್ ವಿಕೆ ಪಾಟೀಲ್ ಹೆಸರುಗಳು ಬಲ ಕೇಳಬರತೊಡಗಿವೆ. ಎರಡು ಅವಧಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಎಸ್ ಬಿ ಚವಾಣ್ ಪುತ್ರ ಅಶೋಕ್ ಚವಾಣ್ ಹೆಸರು ಮುಂಚೂಣಿಯಲ್ಲಿದೆ. ಹೈಕಮಾಂಡ್ ಕೂಡಾ ಚವಾಣ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಿಬೇಕೆಂದು ಒಲವು ತೋರಿಸಿದೆ ಎನ್ನಲಾಗಿದೆ. ನಾಂದೇಡ್ ಶಾಸಕರಾಗಿರುವ ಇವರು ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದಾರೆ.
ಮುಂಬೈ ಭಯೋತ್ಪಾದನೆ ನಂತರ ನೈತಿಕ ಹೊಣೆ ಹೊತ್ತು ವಿಲಾಸ್ ರಾವ್ ದೇಶಮುಖ್ ತಮ್ಮ ಸ್ಥಾನ ರಾಜೀನಾಮೆ ನೀಡಿ ಪತ್ರವನ್ನು ಹೈಕಮಾಂಡ್ ಗೆ ರವಾನಿಸಿದ್ದರು. ಹೈಕಮಾಂಡ್ ತೆಗೆದುಕೊಳ್ಳುವ ನಿಲುವಿಗೆ ತಾವು ಬದ್ದ ಎಂದು ಹೇಳಿದ್ದರು. ಬುಧವಾರ ರಾತ್ರಿ ದೇಶಮುಖ್ ರಾಜೀನಾಮೆ ಪತ್ರವನ್ನು ಅಂಗೀಕರಿಸಿದೆ.
(ದಟ್ಸ್ ಕನ್ನಡ ವಾರ್ತೆ)