ಉಗ್ರನ ಬಳಿ ಬೆಂಗಳೂರಿನ ಕಾಲೇಜ್ ಐಡಿ
ನವದೆಹಲಿ, ಡಿ. 3 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಬೆಂಗಳೂರು ಕಾಲೇಜೊಂದರ ವಿದ್ಯಾರ್ಥಿಯೇ ? ಮುಂಬೈ ಪೊಲೀಸರ ವಿಚಾರಣೆ ವೇಳೆ ಕಸಾಬ್ ಬಳಿ ಬೆಂಗಳೂರಿನ ಅರಣೋದಯ ಪಿಜಿ ಕಾಲೇಜು, ಟೀಚರ್ಸ್ ಕಾಲೋನಿ ಬೆಂಗಳೂರು ಎಂಬ ವಿಳಾಸದ ಗುರುತಿನ ಚೀಟಿ ಸಿಕ್ಕದ್ದರಿಂದ ಅನೇಕ ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಬೆಂಗಳೂರು ಪೊಲೀಸರಿಗೆ ವಿಷಯ ತಿಳಿಸಿ ಮಾಹಿತಿಯನ್ನು ಕಲೆ ಹಾಕುವಂತೆ ಸೂಚನೆ ನೀಡಿದೆ. ಕಾರ್ಯಾಚರಣೆಗೆ ಇಳಿದ ಬೆಂಗಳೂರು ಪೊಲೀಸರು, ಬೆಂಗಳೂರಿನಲ್ಲಿರುವ ಟೀಚರ್ಸ್ ಕಾಲೋನಿಯಲ್ಲಿ ಅರುಣೋದಯ ಪಿಜಿ ಕಾಲೇಜು ಹುಡುಕಿ ಸುಸ್ತಾಗಿ ಕೊನೆಗೂ ಅದೊಂದು ನಕಲಿ ಗುರುತಿನ ಚೀಟಿ ಎಂದು ಖಾತ್ರಿಪಡಿಸಿದರು.
ಬೆಂಗಳೂರಿನಲ್ಲಿ ಅರುಣೋದಯ ಎಂಬ ಹೆಸರಿನಲ್ಲಿ ಕಾಲೇಜು ಇದೆ, ಆದರೆ ಅರುಣೋದಯ ಪಿಜಿ ಕಾಲೇಜು ಎಂಬ ಹೆಸರಿನ ಕಾಲೇಜು ಇಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ. ಉಗ್ರ ಕಸಬ್, ಸಮೀರ್ ಚೌಧರಿ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದರೆ, ಮುಂಬೈನ ಚೌಪಟ್ಟಾ ಪ್ರದೇಶದಲ್ಲಿ ಪೊಲೀಸರ ಗುಂಡಿನ ಬಲಿಯಾದ ಇಸ್ಮಾಯಿಲ್ ಕೂಡಾ ನರೇಶ್ ವರ್ಮಾ ಎಂದು ನಕಲಿ ಗುರುತಿನ ಚೀಟಿ ಹೊಂದಿದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿರುವ ಕಸಬ್ ಬಳಿ ಅನೇಕ ಮಹತ್ವದ ಅಂಶಗಳು ಲಭ್ಯವಾಗತೊಡಗಿವೆ. ಬೆಂಗಳೂರಿನ ಐಐಎಸ್ಸ್ಸಿದಾಳಿಯ ಪ್ರಮುಖ ರೂವಾರಿಯಾಗಿರುವ ಲಷ್ಕರ್-ಇ-ತೊಯ್ಬಾ ಸಂಘಟನೆಯ ಅಬು ಹಮ್ಜಾ ಮುಂಬೈ ಭಯೋತ್ಪಾದನೆಗೆ ಸಂಚು ರೂಪಿಸಿದ್ದಾನೆ. ಭಯೋತ್ಪಾದನೆಯ ನಂತರ ಸುರಕ್ಷಿತವಾಗಿ ತವರಿಗೆ ಮರಳಲು ಎಲ್ಲ ವ್ಯವಸ್ಥೆಯನ್ನೂ ಮಾಡುವ ಭರವಸೆ ನೀಡಿದ್ದ. ಆದರೆ ದೆಹಲಿ ಸ್ಫೋಟವಾದ ಮೇಲೆ 4 ಮಂದಿ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಕಾರ್ಯಕರ್ತರು ಪೊಲೀಸರ ಬಲಿಬಿದ್ದು ಬಂಧಿಯಾದರು ಎಂದು ಕಸಬ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ನಾನು ತುಂಬಾ ಬಡತನ ಕುಟುಂಬದಿಂದ ಬಂದಿರುವ ಯುವಕ. ತಂದೆ ತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಜೀವನೋಪಾಯಕ್ಕೆ ನಗರಕ್ಕೆ ಬಂದೆ, ನಂತರ ಕೆಲ ಸಂಘಟನೆಗಳ ಪರಿಚಯವಾಯಿತು. ಲಷ್ಕರ್-ಇ-ತೊಯ್ಬಾ ಸಂಘಟನೆಯಲ್ಲಿ ತರಬೇತಿ ಪಡೆದೆ, ಬೋಟ್ ಮೂಲಕ ಮುಂಬೈಗೆ ಬಂದಿಳಿದಿದೆವು. ಈ ಸಂಘಟನೆಗೆ ಪಾಕಿಸ್ತಾನದ ಸಂಪೂರ್ಣ ಸಹಕಾರವಿದೆ ಎನ್ನುವುದನ್ನು ಕಸಬ್ ಸ್ಪಷ್ಟಪಡಿಸಿದ್ದಾನೆ. ನನ್ನನ್ನು ಕೊಂದು ಹಾಕಿ ಇಲ್ಲದಿದ್ದರೆ ಲಷ್ಕರ್ ಸಂಘಟನೆಯವರು ನನ್ನ ಕುಟುಂಬವನ್ನು ಕೊಂದು ಹಾಕುತ್ತಾರೆ ಎಂದು ಕಸಬ್ ಪೊಲೀಸರ ಬಳಿ ಅಲವತ್ತುಕೊಂಡಿದ್ದಾನೆ. ಮುಂಬೈ ಕೃತ್ಯ ಪಾಕಿಸ್ತಾನ ಕೃಪಾಪೋಷಿತ ಕೃತ್ಯ ಎನ್ನುವುದರಲ್ಲಿ ಅನುಮಾನವಿಲ್ಲ ಎನ್ನುವುದು ಪೊಲೀಸರ ಅಭಿಪ್ರಾಯವಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications