ದೆಹಲಿಯಲ್ಲಿ ಕಾಂಡೋಲೀಜಾ ಸುದ್ದಿಗೋಷ್ಠಿ
ನವದೆಹಲಿ, ಡಿ. 3 : ಕಳೆದ ಬುಧವಾರ ಮುಂಬೈಯಲ್ಲಿ ನಡೆದ ಭೀಕರ ಭಯೋತ್ಪಾದನೆಯಲ್ಲಿ ಅಲ್ ಖೈದಾ ಸಂಘಟನೆ ಕೈವಾಡವಿರವ ಸಾಧ್ಯತೆಗಳಿವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಜಾ ರೈಸ್ ಅನುಮಾನ ವ್ಯಕ್ತಪಡಿಸಿದ್ದಾರೆ. ಇಂತಹ ಕೃತ್ಯಗಳಲ್ಲಿ ವ್ಯವಸ್ಥಿತವಾಗಿ ಸಂಚು ರೂಪಿಸಿ ದಾಳಿ ನಡೆಸುವುದರಲ್ಲಿ ಅಲ್ ಖೈದಾ ಸಂಘಟನೆಯನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದರು.
ಒಂದು ದಿನದ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ರೈಸ್ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಮುಕ್ತ ಹಾಗೂ ಪಾರದರ್ಶಕವಾಗಿ ಭಾರತ ನಡೆಸುವ ತನಿಖೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ಸಹಕಾರ ನೀಡಬೇಕು ಎಂದು ರೈಸ್ ಪಾಕಿಸ್ತಾನಕ್ಕೆ ತಾಕೀತು ಮಾಡಿದರು. ಜಾಗತಿಕ ಪಿಡುಗಾಗಿರುವ ಭಯೋತ್ಪಾದನೆ ಹತ್ತಿಕ್ಕಲು ಎಲ್ಲರ ಒಗ್ಗೂಡಬೇಕಾಗಿದೆ ಎಂದರು. ಪಾಕಿಸ್ತಾನ ಈಗ ಭಾರತದ ಜತೆಗೆ ಕೈಜೋಡಿಸಬೇಕಾದ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಭಾರತಕ್ಕೆ ಸಂಪೂರ್ಣ ಸಹಾಯ, ಸಹಕಾರದ ಜತೆಗೆ ಧೈರ್ಯ ತುಂಬುವ ಕೆಲಸ ಮಾಡಲಿದೆ ಎಂದು ರೈಸ್ ಹೇಳಿದರು.
ಭಾರತದಲ್ಲಿ ಭಯೋತ್ಪಾದನಾ ಕೃತ್ಯ ಎಸಗಿ ಪಾಕಿಸ್ತಾನದಲ್ಲಿ ನೆಲೆ ಕಂಡುಕೊಂಡಿರುವ ಉಗ್ರರ ಹಸ್ತಾಂತರ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಅಧ್ಯಕ್ಷ ಹಾಗೂ ಪ್ರಧಾನಮಂತ್ರಿಯವರೊಂದಿಗೆ ಅಮೆರಿಕ ಮಾತುಕತೆ ನಡೆಸಲಿದೆ. ಮುಂಬೈ ಪ್ರಕರಣದಲ್ಲಿ ಭಾಗಿಯಾಗಿರುವ ಸಂಘಟನೆಗಳು ಪಾಕ್ ನಲ್ಲಿರುವುದು ತನಿಖೆಯಿಂದ ಸ್ಪಷ್ಟವಾದರೆ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಡ ತರಲಾಗುವುದು ಎಂದು ರೈಸ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications