ರಜನಿ ಕ್ಷಮೆಯಾಚನೆ ನಂತರ ಕುಸೇಲನ್ ಬಿಡುಗಡೆ
ಬೆಂಗಳೂರು, ಜು. 31 : ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ ಕನ್ನಡಿಗ ರಜನಿಕಾಂತ್ ಅವರು ಹೊಗೇನಕಲ್ ವಿಷಯದಲ್ಲಿ ಕರ್ನಾಟಕದ ವಿರುದ್ಧ ಮಾತನಾಡಿದ್ದಾರೆ, ಈ ಮೂಲಕ ಕನ್ನಡಿಗರ ಭಾವನೆಯನ್ನು ಕೆರಳಿಸಿದ್ದಾರೆ ಎನ್ನುವ ಆರೋಪದ ಮೇಲೆ ಕನ್ನಡಪರ ಸಂಘಟನೆಗಳು ಕನ್ನಡಿಗರ ಕ್ಷಮೆಯಾಚಿಸುವವರೆಗೂ ಅವರು ನಟಿಸಿದ ಕುಸೇಲನ್ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಕಚೇರಿ ಮಂಡಳಿ ಎದುರು ಪ್ರತಿಭಟನೆ ಆರಂಭಿಸಿದ್ದಾರೆ.
ಕನ್ನಡಿಗರಾದ ರಜನಿಕಾಂತ್ ಇದೀಗ ತಮಿಳುನಾಡಿನಲ್ಲಿ ನೆಲೆಸಿದ್ದು, ಹೋಗೇನಕಲ್ ವಿಷಯದಲ್ಲಿ ರಾಜ್ಯದ ಹಿತಾಶಕ್ತಿಯನ್ನು ಮರೆತಿದ್ದಾರೆ. ರಾಜ್ಯಕ್ಕೆ ಅನ್ಯಾಯವಾಗುವ ಹಾಗೆ ನಡೆದುಕೊಂಡಿದ್ದಾರೆ. ಅದು ಅಲ್ಲದೇ, ಹೋಗೇನಕಲ್ ವಿಷಯಕ್ಕೆ ಕರ್ನಾಟಕದವರು ತಂಟೆ ತಗೆದಲ್ಲಿ ಅಂಥವರನ್ನು ಒದ್ದೋಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ರಜನಿಕಾಂತ್ ಅವರ ಹೇಳಿಕೆ ಕನ್ನಡಿಗರ ಮನಸ್ಸಿಗೆ ಭಾರಿ ಆಘಾತ ನೀಡಿತ್ತು. ಕನ್ನಡಿಗರಾದ ಅವರು ಕರ್ನಾಟಕದ ವಿರುದ್ಧ ಮಾತನಾಡುವುದು ಸಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಹೋಗೇನಕಲ್ ವಿಷಯದಲ್ಲಿ ಕನ್ನಡಗರನ್ನು ಒದೆಯಬೇಕೆ ಬೇಡವೇ ಎಂದು ಹೇಳಿದ್ದ ಅವರು, ನನ್ನ ಚಿತ್ರಗಳನ್ನು ಕರ್ನಾಟದಲ್ಲಿ ಬಿಡುಗಡೆ ಮಾಡದಿದ್ದರೆ ನನಗೇನೂ ನಷ್ಟವಾಗುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು.
ಆದರೆ ಇದೀಗ ಅವರು ನಟಿಸಿದ ಚಿತ್ರ ಕುಸೇಲನ್ ಬಿಡುಗಡೆ ಸಿದ್ಧವಾಗಿದ್ದು. ರಾಜ್ಯದ ಅನೇಕ ಕಡೆಗಳಲ್ಲಿ ತೆರೆ ಮೇಲೆ ಬರಲು ರೆಡಿಯಾಗಿದೆ. ಆದರೆ ಕನ್ನಡ ವಿರೋಧಿಯಾಗಿರುವ, ಕನ್ನಡಿಗರ ಭಾವನೆಯನ್ನು ಕೆರಳಿಸುವಂತ ಮಾತನ್ನಾಡಿರುವ ರಜನಿಕಾಂತ್ ಅವರ ಚಿತ್ರವನ್ನು ಬಿಡುಗಡೆಮಾಡಬಾರದು ಎಂದು ಕನ್ನಡಪರ ಸಂಘಟನೆಗಳ ಒತ್ತಾಯವಾಗಿದೆ. ಆದ್ದರಿಂದ ವಾಣಿಜ್ಯ ಮಂಡಳಿಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಕನ್ನಡಗರ ಕ್ಷಮೆ ಕೇಳಿದರೆ ಮಾತ್ರ ಚಿತ್ರ ಬಿಡುಗಡೆಗೆ ಸಹಕರಿಸುವುದಾಗಿ ಅವರು ಪಟ್ಟು ಹಿಡಿದಿದ್ದಾರೆ. ಆದರೆ ರಜನಿಕಾಂತ್ ಕುಸೇಲನ್ ಚಿತ್ರ ಬಿಡುಗಡೆಗೆ ಸಹಕರಿಸಿ ಎಂದು ವಾಣಿಜ್ಯ ಮಂಡಳಿಗೆ ಕನ್ನಡದಲ್ಲಿಪತ್ರ ಬರೆದಿದ್ದಾರೆ. ಆ ಹಿನ್ನೆಲೆಯಲ್ಲಿ ಮಂಡಲಿಗೆ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಜಯಮಾಲಾ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.(ದಟ್ಸ್ ಕನ್ನಡ ವಾರ್ತೆ)