ಮಾತಿನ ಮಲ್ಲ ಸದನಶೂರರನ್ನು ಮೂಲೆಗಿಟ್ಟ ಮತದಾರ
ಬೆಂಗಳೂರು, ಮೇ 28: ವಿಧಾನಸಭೆಯ ಮಾತಿನ ಮಲ್ಲರಿಗೆ ಈ ಸಲ ಮತದಾರರು ಪಾಠ ಕಲಿಸಿದ್ದಾರೆ. ವಿಧಾನಸಭೆ ಒಳಗೆ ಹೊರಗೆ ವಿನೂತನ ಪ್ರತಿಭಟನೆ, ಮುಷ್ಕರ ಹಾಗೂ ಸಭಾತ್ಯಾಗಗಳ ಮೂಲಕ ಬಾರಿ ಪ್ರಚಾರ ಗಿಟ್ಟಿಸುತ್ತಿದ್ದ ಶಾಸಕರನ್ನು ಮತದಾರ ಮತಗಳ ಮೂಲಕ ಬಡಿದು ಮೂಲೆಗಿಟ್ಟಿದ್ದಾನೆ. ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸದ ಶಾಸಕರಿಗೆ ಸ್ಥಾನವಿಲ್ಲ ಎಂಬುದನ್ನ ಸಾಬೀತುಪಡಿಸಿದ್ದಾನೆ.
ವಿಧಾನಸಭೆ ಮೂದಲ ಸ್ಥಾನದಲ್ಲಿ ಕುಳಿತುಕೊಂಡು ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆ ತಗೆದುಕೊಳ್ಳುತ್ತಿದ್ದ ಸದನ ಶೂರರು ಎಂದು ಬಿರುದಾಂಕಿತ ಹೊಂದಿದ್ದ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್, ಜೆಡಿಯುನ ಮಾಧುಸ್ವಾಮಿ, ರಮೇಶ್ ಕುಮಾರ್, ಜಯಪ್ರಕಾಶ್ ಹೆಗಡೆ, ಆರ್ ಪಿಐನ ರಾಜೇಂದ್ರನ್, ಸಿಬಿಐಎಂನ ಶ್ರೀರಾಮರೆಡ್ಡಿ ಸೋಲುಂಡಿದ್ದಾರೆ. ಶಾಸಕರಾಗಿ ಆಯ್ಕೆಯಾದ ನಂತರ ಶಾಸನಸಭೆಯಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು, ತಮ್ಮ ವಾಗ್ಬಾಣಗಳಿಂದ ಆಡಳಿತ ನಾಯಕರ ಮೇಲೆ ಛಾವಟಿ ಬೀಸುತ್ತಿದ್ದು ಈ ನಾಯಕರು ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ್ದರು.
ವಿಧಾನಸಭೆಯಲ್ಲಿ ಗುಡುಗು ಹಾಕುತ್ತಿದ್ದ ಇವರು ಸ್ವಕ್ಷೇತ್ರದ ಕಡೆಗೆ ಕಿಂಚತ್ತು ಕಾಳಜಿ ಇರಲಿಲ್ಲ. ಆರಿಸಿ ಕಳಿಸಿದ ಮತದಾರರ ಕಷ್ಟ ಸುಖ ಎನೇಂಬುದನ್ನು ತಿಳಿದುಕೊಳ್ಳಲು ಎಂದೂ ಮನಸ್ಸು ಮಾಡಲಿಲ್ಲ. ಗಲಭೆಯಾದರೆ, ಪ್ರತಿಭಟನೆಗಳಾದರೆ, ಮೂಲಭೂತ ಸೌಕರ್ಯಗಳು ವಂಚಿತವಾಗಿರುವ ಕ್ಷೇತ್ರಗಳ ಬಗ್ಗೆ ಭರ್ಜರಿ ಭಾಷಣ ಬೀಗಿಯುತ್ತಿದ್ದರೆ ಹೊರತು, ತಮ್ಮ ಸ್ವ ಕ್ಷೇತ್ರದಲ್ಲಿ ಜನರ ಪರಿಸ್ಥಿತಿ ಹೇಗಿದೆ. ಮೂಲಭೂತ ಸೌಕರ್ಯಗಳು ದೊರೆಕಿವೆಯಾ, ಕ್ಷೇತ್ರ ಆಡಳಿತ ಯಂತ್ರ ಸುಗಮವಾಗಿ ಕೆಲಸ ಮಾಡುತ್ತಿದೆಯಾ ಇಂತಹ ಅನೇಕ ಸಮಸ್ಯೆಗಳ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳದ ಈ ಶಾಸಕರಿಗೆ ಮತದಾರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾನೆ.
ವಾಟಾಳ್ ನಾಗರಾಜ್ ಅವರನ್ನು ಉದಾಹರಿಸುವುದಾದರೆ, ಸದನದಲ್ಲಿ ಮಹಾಶೂರರಾಗಿದ್ದ ಇವರು, ತಮ್ಮ ಮೊನಚು ಮಾತಿನಿಂದ ಆಡಳಿತ ಪಕ್ಷವನ್ನು ಕ್ಷಣಕಾಲ ತಬ್ಬಿಬ್ಬು ಮಾಡಿ ಹಾಕುತ್ತಿದ್ದರು. ಆದರೆ ವಿಪರ್ಯಾಸವೆಂದರೆ ವಾಟಾಳ್ ನಾಗರಾಜ್, ಶಾಸಕನಾದ ನಂತರ ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು. ಕ್ಷೇತ್ರದಲ್ಲಿ ಶಾಸಕರ ಕಚೇರಿಯನ್ನು ಸ್ಥಾಪಿಸಲಿಲ್ಲ. ಬೆಂಗಳೂರಿನಲ್ಲಿ ಕುಳಿತು ತಾವಾಯಿತು ತಮ್ಮ ಬಗೆಬಗೆಯ ಪ್ರತಿಭಟನೆಗಳಾಯಿತು ಎಂದು ಕಾಲ ಕಳೆದರು. ಆದರಿಂದ ಈ ಚುನಾವಣೆಯಲ್ಲಿ ಅವರಿಗೆ ದೊರೆತ ಉತ್ತರ ಕಹಿಯಾಗಿತ್ತು. ಮತದಾರರ ಅವರಿಗೆ ಠೇವಣಿಯನ್ನು ನೀಡಲಿಲ್ಲ. ಆದ್ದರಿಂದ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದರೆ ಮತದಾರ ಬೆಲೆ ನೀಡುವುದಿಲ್ಲ ಎನ್ನುವುದಕ್ಕೆ ಇದು ತಾಜಾ ಸಾಕ್ಷಿ.
(ದಟ್ಸ್ ಕನ್ನಡ ವಾರ್ತೆ)