ವಿರೋಧ ಪಕ್ಷದ ನಾಯಕನ ಪಟ್ಟ ಮತ್ತೆ ಖರ್ಗೆ ಕೊರಳಿಗೆ
ಬೆಂಗಳೂರು, ಮೇ 28 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ಎರಡನೇ ಬಾರಿಗೆ ವಿರೋಧ ಪಕ್ಷದ ನಾಯಕರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ.
ಆದರೆ, ಈ ಆಯ್ಕೆಯಿಂದ ಸಿದ್ದರಾಮಯ್ಯ ತೀವ್ರ ಅಸಮಾಧಾನಗೊಂಡಿದ್ದಾರೆ. ಶಾಸಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಕೂಡ ಈ ಆಯ್ಕೆಯಿಂದ ಅಸಮಾಧಾನ ಭುಗಿಲೆದ್ದಿದ್ದು, ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರ ಗಳಿಸಲು ವಿಫಲವಾದಮೇಲೂ ನಾಯಕತ್ವವನ್ನು ಬದಲಾಯಿಸಬಹುದೆಂದು ನಿರೀಕ್ಷಿಸಿದ್ದು ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಈ ಸ್ಥಾನದ ಆಕಾಂಕ್ಷಿಗಳಲ್ಲಿ ಪ್ರಮುಖವಾಗಿ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ, ಜಿ.ಪರಮೇಶ್ವರ ಹಾಗೂ ವಿ.ಸೋಮಣ್ಣ ಅವರ ಹೆಸರುಗಳು ಬಲವಾಗಿ ಕೇಳಿ ಬಂದವು. ಯುವಕರಿಗೆ ಆಧ್ಯತೆ ಹಾಗೂ ಬಿಜೆಪಿ ಸರ್ಕಾರವನ್ನು ಸಮರ್ಥವಾಗಿ ಎದುರಿಸುವ ಅಕ್ರಮಣಕಾರ ನಾಯಕನನ್ನು ಆಯ್ಕೆ ಮಾಡಬೇಕು ಎನ್ನುವ ಕೂಗು ಕೇಳಿ ಬಂದ ಹಿನ್ನಲೆಯಲ್ಲಿ ಆಯ್ಕೆಯಾದ ಎಲ್ಲ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಡಿಕೆಶಿ ಮತ್ತು ಸಿದ್ಧರಾಮಯ್ಯ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನುವ ಸುದ್ದಿಯಿದೆ.
ಶಾಸಕರು ನಮೂದಿಸಿದ್ದ ವ್ಯಕ್ತಿಯ ಹೆಸರೇ ಒಂದು ಆಯ್ಕೆ ಮಾಡಿದ ವ್ಯಕ್ತಿಯ ಹೆಸರೇ ಮತ್ತೊಂದು ಆಗಿರುವುದರಿಂದ ಶಾಸಕರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮತಗಳ ಮೂಲಕ ನೂತನ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿರುವ ಪಕ್ಷದ ಮುಖಂಡರು, ಯಾವುದೇ ವಿವಾದಕ್ಕೆ ಆಸ್ಪದ ಕೊಡದೇ ವಿಪಕ್ಷ ನಾಯಕನ ಆಯ್ಕೆಯನ್ನು ಹೈಕಮಾಂಡ್ ಗೆ ವಹಿಸಿ ಕೈತೊಳೆದುಕೊಂಡರು. ಇನ್ನೊಂದು ಮೂಲಗಳ ಪ್ರಕಾರ, ಬಿಜೆಪಿ ಸರ್ಕಾರವನ್ನು ಕಟ್ಟಿ ಹಾಕುವಂತ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ವರಿಷ್ಠರ ಮೇಲೆ ಹೇರಲಾಗಿತ್ತು.
ಸೋಲಿಗೆ ಸಾಮೂಹಿಕವಾಗಿ ಎಲ್ಲರೂ ಹೊಣೆಗಾರರು ಎಂದಿರುವ ಮುಖಂಡರು, ತೆರೆಮರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತಲೆದಂಡಕ್ಕೆ ವೇದಿಕೆ ರೂಪಿಸುತ್ತಿದ್ದರು. ಖರ್ಗೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಾಯಿಸಿದಲ್ಲಿ ದಲಿತರ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ದಲಿತರಾದ ಜಿ.ಪರಮೇಶ್ವರ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ವರಿಷ್ಠರು ಚಿಂತನೆ ನಡೆಸುತ್ತಿದ್ದರು. ಹಿಂದುಳಿದ ವರ್ಗಗಳ ಸಿದ್ಧರಾಮಯ್ಯ, ಒಕ್ಕಲಿಗ ಡಿಕೆಶಿ ಮತ್ತು ಲಿಂಗಾಯತ ಬಣಕ್ಕೆ ಸೇರಿರುವ ಸೋಮಣ್ಣ ವಿಪಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಕುಳಿತಿದ್ದರು.
ಉತ್ತರ ಕರ್ನಾಟಕದಲ್ಲಿ ಪಕ್ಷ ದಯನೀಯ ಸ್ಥಿತಿಯಲ್ಲಿದೆ. ಲಿಂಗಾಯತರ ಮತಗಳನ್ನು ಸಾರಾಸಗಟು ಬಿಜೆಪಿ ಸೆಳೆದುಕೊಂಡಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ತನ್ನ ನೆಲೆಯನ್ನು ಕಂಡುಕೊಳ್ಳಬೇಕಾದರೆ ಲಿಂಗಾಯತ ಸಮುದಾಯಕ್ಕೆ ಸೇರಿದ ಮುಖಂಡರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಬೇಕಾಗಿದೆ ಎನ್ನುವ ಮಾತು ಗಟ್ಟಿಯಾಗತೊಡಗಿತ್ತು.
ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಹೊತ್ತಿರುವ ಪೃಥ್ವಿರಾಜ ಚೌಹಾಣ್ ಹಾಗೂ ಮಧ್ಯಪ್ರದೇಶದ ಮಾಜಿಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಪಕ್ಷ ಸೋಲಿಗೆ ಕಾರಣಗಳೇನು ಹಾಗೂ ಪಕ್ಷಕ್ಕೆ ಅಧಿಕ ಮತಗಳು ದೊರೆತರೂ ಕೂಡಾ ಸೀಟುಗಳ ಕಡಿಮೆಯಾಗಿರುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಾಯಿತು.
(ದಟ್ಸ್ ಕನ್ನಡ ವಾರ್ತೆ)