ಯಾವುದೇ ಸ್ಥಾನಮಾನದ ಅಪೇಕ್ಷೆ ಇಲ್ಲ:ಪ್ರಕಾಶ್
ಬೆಂಗಳೂರು, ಮಾ.8: ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಶನಿವಾರ ತಮ್ಮ ಬೆಂಬಲಿಗರೊಂದಿಗೆ ವಿಧ್ಯುಕ್ತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಯಾವುದೇ ಷರತ್ತುಗಳಿಲ್ಲದೇ ಸ್ಥಾನಮಾನದ ಅಪೇಕ್ಷೆ ಇಲ್ಲದೇ ಕಾಂಗ್ರೆಸ್ ಸೇರುತ್ತಿರುವುದಾಗಿ ಪ್ರಕಾಶ್ ಹೇಳಿದರು.
ಶುಕ್ರವಾರ ರಾತ್ರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ನಡೆಸಿದ ಮಾತುಕತೆಗಳು ಫಲಪ್ರದವಾಗಿವೆ. ಕಾಂಗ್ರೆಸ್ ಪಕ್ಷದ ನಾಯಕತ್ವ, ಸಿದ್ಧಾಂತ, ಜಾತ್ಯಾತೀತ ನಿಲುವುಗಳನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿರುವುದಾಗಿ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಹೇಳಿದ್ದಾಗಿ ಪ್ರಕಾಶ್ ತಿಳಿಸಿದರು.
ಮಾಜಿ ಶಾಸಕರಾದ ಎಚ್.ಎಸ್.ಮಹದೇವ ಪ್ರಸಾದ್, ಎಚ್.ಆಂಜನೇಯ, ಅಮರೇಗೌಡ ಬಯ್ಯಾಪುರ, ಸಂತೋಷ್ ಲಾಡ್, ಬಿ.ಸಿ.ಪಾಟೀಲ್, ಶರಣಬಸಪ್ಪ ದರ್ಶನಾಪುರ್, ರಾಜುಗೌಡ, ಕೆ.ಎನ್.ರಾಜಣ್ಣ, ಮುನಿಸ್ವಾಮಪ್ಪ, ಎಚ್. ಏಕಾಂತಯ್ಯ, ವಸಂತ ಬಂಗೇರಾ,ಸೂರ್ಯನಾರಾಯಣ ರೆಡ್ಡಿ, ಸಂತೋಷ್ ಹಿರೇಕೆರೂರ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಗುರುದೇವ್, ಚಿದಾನಂದ, ಬಿ.ಟಿ.ಚೆನ್ನಬಸಪ್ಪ ಇನ್ನಿತರ ಮುಖಂಡರು ಖರ್ಗೆ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ಗೆ ಸೇರ್ಪಡೆಯಾದರು.
ಸೋನಿಯಾಗಾಂಧಿ ಅವರ ನಾಯಕತ್ವ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಆಗಮಿಸಿರುವ ಪ್ರಕಾಶ್ ಹಾಗೂ ಅವರ ಬೆಂಬಲಿಗರಿಗೆ ಯಾವುದೇ ಮುಜುಗರವಾಗದಂತೆ ನಡೆಸಿಕೊಳ್ಳಲಾಗುವುದು ಎಂದು ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮುಖಂಡರಾದ ಕೆ.ಸಿ.ಕೊಂಡಯ್ಯ, ಎಸ್.ಟಿ.ಸೋಮಶೇಖರ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
(ದಟ್ಸ್ಕನ್ನಡ ವಾರ್ತೆ)