ಸಿಓಡಿ ಕಸ್ಟಡಿಗೆ ಸಿಮಿ ಮುಖಂಡ ಮೊಹಮ್ಮದ್ ಕಮ್ಮಕುಟ್ಟಿ
ಹುಬ್ಬಳ್ಳಿ, ಫೆ.23 : ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ಬಂಧಿತನಾಗಿದ್ದ ಉಗ್ರಗಾಮಿ ಸಿಮಿ ಮುಖಂಡ ಮೊಹಮ್ಮದ್ ಕಮ್ಮಕುಟ್ಟಿಯನ್ನು ಹುಬ್ಬಳ್ಳಿಯ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ಮಾರ್ಚ್ 6ರವರೆಗೆ ಸಿಓಡಿ ಕಸ್ಟಡಿಗೆ ಒಪ್ಪಿಸಿದ್ದಾರೆ.
ಶನಿವಾರ ಬೆಳಗಿನ ಜಾವ ಕುಟ್ಟಿಯನ್ನು ನಗರಕ್ಕೆ ಕರೆತಂದ ಸಿಓಡಿ ತಂಡ 3.40ಕ್ಕೆ ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಹಾಜರುಪಡಿಸಿದರು. ನಂತರ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದರೆಂದು ತಿಳಿದುಬಂದಿದೆ.
ಹೆಚ್ಚಿನ ವಿಚಾರಣೆ ಮತ್ತು ಸಿಮಿ ಸಂಘಟನೆಯ ಕರ್ನಾಟಕದ ಕಾರ್ಯಚಟುವಟಿಕೆಗಳನ್ನು ಅರಿಯಲು ಕರ್ನಾಟಕ ಮತ್ತು ಗೋವಾ ಗಡಿಯಲ್ಲಿರುವ ಕ್ಯಾಸಲ್ರಾಕ್ ಎಂಬ ಪ್ರದೇಶಕ್ಕೆ ಸಿಓಡಿ ತಂಡ ಮೊಹಮ್ಮದ್ ಕಮ್ಮಕುಟ್ಟಿಯನ್ನು ಕರೆದೊಯ್ಯಲಿದೆ.
ಇತ್ತೀಚೆಗೆ ಬಂಧಿತನಾಗಿ ಸುಳ್ಳುಪರೀಕ್ಷೆಯಲ್ಲಿ ಕಮ್ಮಕುಟ್ಟಿಯ ಚಟುವಟಿಕೆ ಬಗ್ಗೆ ಇನ್ನೊಬ್ಬ ಸಿಮಿ ಕಾರ್ಯಕರ್ತ ಅಸೀಫ್ ಹೇಳಿಕೆ ನೀಡಿದ್ದ. ಆತನ ಹೇಳಿಕೆಯ ಆಧಾರದ ಮೇಲೆ ಕಮ್ಮಕುಟ್ಟಿಯನ್ನು ಬಂಧಿಸಲಾಗಿದೆ. ಕೇರಳ ಮೂಲದ ಕಮ್ಮಕುಟ್ಟಿ ಇಡೀ ಕರ್ನಾಟಕದ ಸಿಮಿ ಚಟುವಟಿಕೆಯ ಮುಖಂಡತ್ವ ವಹಿಸಿದ್ದಾನೆ.
ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡಿರುವ ಈತ ಇತ್ತೀಚೆಗೆ ಹುಬ್ಬಳ್ಳಿ ಬಳಿಯಲ್ಲಿ ಹಲವಾರು ಸಭೆಗಳನ್ನು ನಡೆಸಿ ಕರ್ನಾಟಕದಲ್ಲಿ ಭಯೋತ್ಪಾದನೆ ಹಬ್ಬುವ ಬಗ್ಗೆ ಕಾರ್ಯಕರ್ತರಿಗೆ ಉಪನ್ಯಾಸ ನೀಡಿದ್ದ. ಆ ಸಭೆಗಳಲ್ಲಿ ಬೇರೆ ರಾಜ್ಯಗಳಿಂದಲೂ ಬಂದ ಸುಮಾರು 25 ಜನ ಭಾಗವಹಿಸಿದ್ದರೆಂದು ತಿಳಿದುಬಂದಿದೆ.
ಗುರುಪ್ಪನಪಾಳ್ಯದಲ್ಲಿ ಅತಿ ಸಂಭಾವಿತನಂತೆ ವಾಸವಾಗಿದ್ದ ಕಮ್ಮಕುಟ್ಟಿ ಕಳೆದ ಎಂಟು ವರ್ಷಗಳಿಂದ ಸಿಮಿ ಚಟುವಟಿಕೆಯನ್ನು ನಡೆಸುತ್ತಿದ್ದ. ಆತ ನಾಲ್ವರು ಸಹಚರರು ತಲೆಮರೆಸಿಕೊಂಡಿದ್ದು ಪೊಲೀಸರು ತೀವ್ರ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಜಮಾತ್-ಇ-ಇಸ್ಲಾಮಿ ಸಕ್ರಿಯ ಕಾರ್ಯಕರ್ತ : ಕಮ್ಮಕುಟ್ಟಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗ ಮತ್ತೊಂದು ಸಂಘಟನೆ ಜಮಾತ್-ಇ-ಇಸ್ಲಾಂನ ಸಕ್ರಿಯ ಕಾರ್ಯಕರ್ತನಾಗಿದ್ದ ಎಂದು ಕೋಳಿಕ್ಕೋಡ್ ಪೊಲೀಸರು ತಿಳಿಸಿದ್ದಾರೆ.
ಆತ ಬಂಧಿತನಾಗಿರುವ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಕಮ್ಮಕುಟ್ಟಿಯ ಜನ್ಮಸ್ಥಳವಾದ ನೆಲ್ಲಿಕಾಂಪರಂಬಾದಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ. ಕ್ಯಾಲಿಕಟ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಯಾಗಿದ್ದ ಕಮ್ಮಕುಟ್ಟಿಯ ಬಂಧನದ ಬಗ್ಗೆ ಬೆಂಗಳೂರು ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ ಎಂದು ಕೇರಳ ಪೊಲೀಸರು ದೂರಿದ್ದಾರೆ.
(ಯುಎನ್ಐ)
ಪೂರಕ
ಓದಿಗೆ
ಮೈಕೋಲೇಔಟ್
ನಲ್ಲಿ
ಶಂಕಿತ
ಉಗ್ರನ
ಬಂಧನ