ಅಕ್ರಮ-ಸಕ್ರಮದ ದಂಡ ಶುಲ್ಕದಲ್ಲಿ ಭಾರಿ ಇಳಿಕೆ
ಬೆಂಗಳೂರು, ಫೆ.23: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮ ಯೋಜನೆಗೆ ಸಂಬಂಧಪಟ್ಟಂತೆ ಮೂಲ ಯೋಜನೆಯಲ್ಲಿ ವಿಧಿಸಲಾಗಿದ್ದ ದಂಡ ಶುಲ್ಕ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಇಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕಾರ್ಯಕಾರಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಈ ಪರಿಷ್ಕೃತ ಸಕ್ರಮ ಯೋಜನೆ ಕುರಿತು ಮುಂದಿನ ಎರಡು ದಿನದಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ತಿಳಿಸಿದ್ದಾರೆ. ಅಧಿಸೂಚನೆ ಹೊರಡಿಸಿದ ನಂತರ ಮನವಿ ಹಾಗೂ ಸಲಹೆಗಳನ್ನು ನೀಡಲು ಸಾರ್ವಜನಿಕರಿಗೆ 30 ದಿನಗಳ ಕಾಲಾವಕಾಶ ನೀಡಲಾಗುವುದು.
20X30 ನಿವೇಶನ ಸಕ್ರಮಗೊಳಿಸಲು ಈ ಹಿಂದೆ ವಿಧಿಸಲಾಗುತ್ತಿದ್ದ ಶುಲ್ಕದಲ್ಲಿ ಶೇ.80ರಷ್ಟು ಕಡಿಮೆ ಮಾಡಲಾಗಿದೆ. ಈ ಹಿಂದೆ 12,000 ರೂ. ಇತ್ತು. ಈಗ 2400 ರೂ.ಗಳಿಗೆ ಇಳಿಕೆಯಾಗಿದೆ. ಪ್ರತಿ ಅಡಿಗೆ 4 ರೂ. ಪಾವತಿಸಬೇಕು. 30X40 ನಿವೇಶನಕ್ಕ್ಕೆ ಇನ್ನು ಮುಂದೆ 48,000 ರೂ. ಶುಲ್ಕದ ಬದಲು 19,200 ರೂ. ಪಾವತಿಸಬೇಕಾಗುತ್ತದೆ. ಅಂದರೆ ಪ್ರತಿ ಅಡಿಗೆ 16 ರೂ. ನಿಗದಿ ಮಾಡಲಾಗಿದೆ. 30X40ಕ್ಕಿಂತ ದೊಡ್ಡದಾದ ನಿವೇಶನಗಳ ಶುಲ್ಕದಲ್ಲಿ ಬದಲಾವಣೆಯಾಗಿಲ್ಲ.
ಗ್ರಾಮ ಪಂಚಾಯತಿ ಹಾಗೂ ಮುನ್ಸಿಪಾಲಿಟಿಗೆ ಅಭಿವೃದ್ಧಿ ಶುಲ್ಕ ಸಲ್ಲಿಸಿದವರು ಈ ಹಿಂದೆ ಸಲ್ಲಿಸಿದ ಶುಲ್ಕವನ್ನು ಕಳೆದು ಹೆಚ್ಚುವರಿ ಶುಲ್ಕವನ್ನು ಮಾತ್ರ ಸಲ್ಲಿಸಬೇಕು. ಬಿಬಿಎಂಪಿ ವ್ಯಾಪ್ತಿಗೆ 118 ಗ್ರಾಮಗಳು ಬರುತ್ತವೆ. ಗ್ರಾಮ ಠಾಣಾ ಪ್ರದೇಶಗಳ ನಿವಾಸಿಗಳಿಗೆ ಸಕ್ರಮ ಯೋಜನೆಯಿಂದ ರಿಯಾಯ್ತಿ ನೀಡಲಾಗಿದೆ.ಅದೇ ರೀತಿ ಆಶ್ರಯ, ನಗರ ಆಶ್ರಯ, ಗೃಹ ನಿರ್ಮಾಣ ಮಂಡಳಿ, ಕೊಳಚೆ ನಿರ್ಮೂಲನ ಮಂಡಳಿ ಮತ್ತಿತರ ಸಂಸ್ಥೆಗಳು ನಿರ್ಮಿಸಿದ ಕಾಲನಿಗಳಿಗೆ ಇದು ಅನ್ವಯವಾಗುವುದಿಲ್ಲ.
(ದಟ್ಸ್ಕನ್ನಡ ವಾರ್ತೆ)