ಇಂದಿನ ಕೆಲವೊಂದು ರೋಚಕ ಸುದ್ದಿ ತುಣುಕುಗಳು
ಬಿಜಾಪುರದ ಕೆಎಸ್ಆರ್ಟಿಸಿ ಚಾಲಕ ಭೀಮರಾಯ್ ಗಾಯಕವಾಡ್ ನೇಣು ಬಿಗಿದುಕೊಂಡು ಶುಕ್ರವಾರ ಮಧ್ಯರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕರ್ತವ್ಯ ಮುಗಿಸಿಕೊಂಡು ಬಂದ ನಂತರ ಬಸ್ ಡಿಪೋದಲ್ಲಿ ನೇಣು ಹಾಕಿಕೊಂಡಿದ್ದಾನೆ. ಆತ್ಮಹತ್ಯೆಗೆ ಮೇಲಾಧಿಕಾರಿಗಳ ಕಿರುಕುಳವೇ ಕಾರಣ ಎನ್ನಲಾಗಿದೆ. ಈ ಸಂಬಂಧ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮೇಲೆ ಹಲ್ಲೆ ಪ್ರಯತ್ನ ನಡೆದಿದೆ. ಬಿಜಾಪುರದಲ್ಲಿ ಸ್ವಲ್ಪ ಕಾಲ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ.
ಪತ್ರಕರ್ತ ರವಿಬೆಳಗೆರೆ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ಹಾಸನದ ನ್ಯಾಯಲಯವು ಫೆ. 23ಕ್ಕೆ ಮುಂದೂಡಿದೆ. ವಿಚಾರಣೆಗೆ ಸಂಬಂಧಪಟ್ಟಂತೆ ಬುಧವಾರ(13) ಅರ್ಜಿಯನ್ನು ಹಾಕಬೇಕಿದ್ದ ರವಿಬೆಳಗೆರೆ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾದ ಕಾರಣ 10 ದಿನಗಳ ಕಾಲಾವಕಾಶವನ್ನು ನೀಡಬೇಕೆಂದು ಬೆಳಗೆರೆ ಪರ ವಕೀಲ ರಾಜ್ ಕುಮಾರ್ ಅವರು ನ್ಯಾಯಾಲಯವನ್ನು ಕೋರಿದ್ದರು.
ಬೆಳಗಾವಿಯಲ್ಲಿ 'ಅಜಾದ್ ಹಿಂದ್ ಸೇನೆ' ಎಂಬ ವಿಶಿಷ್ಟ ಸಂಘಟನೆಯೊಂದು ಅಸ್ತಿತ್ವಕ್ಕೆ ಬಂದಿದೆ. ಈ ನೂತನ ಸಂಘಟನೆ ಗೋವಿನ ರಕ್ಷಣೆಗೆ ಪಣ ತೊಟ್ಟಿದೆ. ಗೋವಿನ ಮಾರಾಟ, ಗೋವಧೆಯನ್ನು ನಿಷೇಧಿಸಲು ಆಗ್ರಹಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬ ಲಂಚ ಸ್ವೀಕರಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಗುರು ಎಂಬ ರೈತನಿಂದ ಬೀರೂರು ಪೊಲೀಸ್ ಠಾಣೆಯ ಎಸ್. ವೀರಭದ್ರಪ್ಪ ಎಂಬ ಪೊಲೀಸ್ ಇನ್ಸ್ಪೆಕ್ಟರ್ 10,000 ರೂ. ಲಂಚ ಸ್ವೀಕರಿಸುತ್ತಿರಬೇಕಾದರೆ ಲೋಕಾಯುಕ್ತರು ಬಂಧಿಸಿದ್ದಾರೆ. ಪೊಲೀಸ್ ಅಧಿಕಾರಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಧೀಶರ ಆಜ್ಞೆಯ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications