ಕನ್ನಡಿಗರನ್ನು ಕೊಳಕು ಜನ ಎಂದಿಲ್ಲ: ಲಾಲೂ ಪ್ರಸಾದ್
ಬೆಂಗಳೂರು, ಫೆ.16: ಕನ್ನಡಿಗರನ್ನು 'ಕೊಳಕು ಜನ' ಎಂದಿಲ್ಲ, ಕನ್ನಡಿಗರ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಕ್ಷುಲ್ಲಕ ರಾಜಕೀಯ ದುರುದ್ದೇಶದಿಂದಕೂಡಿವೆ ಎಂದು ರೈಲ್ವೆ ಸಚಿವ ಲಾಲೂ ಪ್ರಸಾದ್ ಹೇಳಿದ್ದಾರೆ.
ನೈರುತ್ಯ ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ ಎಂಬ ವಿಚಾರದ ಬಗ್ಗೆ ತಾವು ನೀಡಿದ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ. ಬೆಂಗಳೂರಿನ ಸಮಾರಂಭದಲ್ಲಿ ಭಾಗವಹಿಸಿ ಬರುವಾಗ ಖಾಸಗಿ ಟಿವಿ ವಾಹಿನಿಯ ವರದಿಗಾರರೊಬ್ಬರು ನೇಮಕಾತಿ ಬಗ್ಗೆ ಪ್ರಶ್ನಿಸಿದಾಗ '' ಅಂತಹ ಡರ್ಟಿ ವಿಷಯಗಳನ್ನು ನೀವ್ಯಾಕೆ ಎತ್ತುತ್ತೀರಿ'' ಎಂದನೇ ಹೊರತು ಕನ್ನಡಿಗರಿಗೆ ಅವಮಾನ ಮಾಡಲಿಲ್ಲ. ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿವೆ ಎಂದು ಲಾಲೂ ತಿಳಿಸಿದರು.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಲಾಗದು. ಸಂವಿಧಾನದ ರೀತ್ಯಾ ಯಾರು ಎಲ್ಲಿ ಬೇಕಾದರೂ ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಬಹುದು. ನನ್ನ ರಾಜಕೀಯ ವಿರೋಧಿಗಳು ಇದನ್ನು ಅಸ್ತ್ರವಾಗಿ ಬಳಸಿಕೊಂಡದ್ದು ನೋಡಿ ಬೇಸರವಾಯಿತು. ಕರ್ನಾಟಕದ, ಕನ್ನಡಿಗರ ಮೇಲೆ ಪ್ರೀತಿ ಇದ್ದದ್ದರಿಂದಲೇ ಪ್ರಧಾನಿ ಹುದ್ದೆಗೆ ದೇವೇಗೌಡರನ್ನು ಬೆಂಬಲಿಸಿದ್ದು ಎಂದರು ಲಾಲೂ.
ಕನ್ನಡಿಗರನ್ನು ಲಾಲೂ 'ಡರ್ಟಿ ಪೀಪಲ್' ಎಂದು ಕರೆದಿಲ್ಲ. ಪತ್ರಿಕೆಯವರು ತಪ್ಪಾಗಿ ವರದಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಹೇಳಿದ್ದಾರೆ. ಆದರೆ, ರಾಜ್ಯ ಸಂಸದರು ಲಾಲೂ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
(ದಟ್ಸ್ಕನ್ನಡ ವಾರ್ತೆ)












Click it and Unblock the Notifications