ನಾರಾಯಣಮೂರ್ತಿ ಏನಂದರು? : ಸರ್ಕಾರಕ್ಕೆ ವರದಿ
ಮೈಸೂರು : ಇನ್ಫೋಸಿಸ್ ಆವರಣದಲ್ಲಿ ನಡೆದ ರಾಷ್ಟ್ರಗೀತೆ ವಿವಾದದ ಕುರಿತು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ರಾಜ್ಯ ಸರ್ಕಾರಕ್ಕೆ ವರದಿ ಒಪ್ಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಅಬ್ದುಲ್ ಕಲಾಂ ಏಪ್ರಿಲ್ 8ರಂದು ಇನ್ಫೋಸಿಸ್ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಸಂಸ್ಥೆಯ ನಿರ್ವಾಹಕೇತರ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ ನಡೆಸಿದ ಸುದ್ದಿಗೋಷ್ಠಿ ಸೇರಿದಂತೆ ಹಲವು ವಿವರಗಳನ್ನು ವರದಿ ಒಳಗೊಂಡಿದೆ. ಗೃಹ ಇಲಾಖೆಗೆ ವರದಿ ಸಲ್ಲಿಸಲಾಗಿದ್ದು, ಗೃಹಸಚಿವ ಎಂ.ಪಿ.ಪ್ರಕಾಶ್ ವಿಧಾನಸಭೆಯಲ್ಲಿ ಇದನ್ನು ಬಹಿರಂಗಪಡಿಸಲಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರಗೀತೆ ಕುರಿತು ಇನ್ಫೋಸಿಸ್ ನಾರಾಯಣಮೂರ್ತಿ ಆಡಿದ ಮಾತುಗಳು ಎಲ್ಲೆಡೆಯೂ ಖಂಡನೆಗೊಳಗಾಗಿದ್ದು, ವಿಧಾನಸೌಧದ ಎರಡೂ ಮನೆಗಳಲ್ಲೂ ಈ ವಿವಾದ ಪ್ರತಿಧ್ವನಿಸಿತ್ತು.
ಅಗತ್ಯ ಬಿದ್ದರೆ ನಾರಾಯಣಮೂರ್ತಿ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಈ ಸಂಬಂಧ ವರದಿ ಪಡೆಯಲಾಗುವುದು ಎಂದು ಸಚಿವ ಎಂ.ಪಿ.ಪ್ರಕಾಶ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಮುಂದಿನ ಹೆಜ್ಜೆ ಕುತೂಹಲ ಕೆರಳಿಸಿದೆ.
(ಯುಎನ್ಐ)