ಸೋಮವಾರದಿಂದ ನಗರದಲ್ಲಿ ಮಕ್ಕಳ ಚಲನಚಿತ್ರೋತ್ಸವ
ಬೆಂಗಳೂರು : ಬೆಂಗಳೂರಿನಲ್ಲಿ ಜನವರಿ 28ರಿಂದ 31ರವರೆಗೆ ಮಕ್ಕಳ ಚಲನಚಿತ್ರೋತ್ಸವವನ್ನು ಚಿಲ್ಡ್ರನ್ ಇಂಡಿಯಾ ಸಂಸ್ಥೆ ಏರ್ಪಡಿಸಿದೆ.
ಜನವರಿ 27ರಂದು ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10ಗಂಟೆಗೆ ಚಿತ್ರೋತ್ಸವವನ್ನು ಮುಖ್ಯಮಂತ್ರಿ ಹೆಚ್. ಡಿ .ಕುಮಾರ ಸ್ವಾಮಿ ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಈ ಮುಂಚೆ ಬಾಲನಟರಾಗಿ ಹೆಸರು ಮಾಡಿದ್ದ ನಾಯಕನಟರಾದ ವಿಜಯ ರಾಘವೇಂದ್ರ, ಪುನೀತ್ ರಾಜ್ ಕುಮಾರ್ ಅರ್ಜುನ್ ಸರ್ಜಾ ಹಾಗೂ ಬಾಲಪ್ರತಿಭೆ ಮಾಸ್ಟರ್ ಕಿಶನ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಗುವುದು. ಮೈಸೂರಿನಲ್ಲೂ ಕೂಡ ಇದೇ ರೀತಿಯ ಉತ್ಸವ ಜನವರಿ 31ರಿಂದ ಫೆಬ್ರವರಿ 2 ರವರೆಗೂ ನಡೆಯಲಿದೆ ಎಂದು ಚಿಲ್ಡ್ರನ್ ಇಂಡಿಯಾ ಸಂಸ್ಥೆಯ ಅಧ್ಯಕ್ಷಎನ್. ಅರ್. ನಂಜುಡೇಗೌಡ ಸುದ್ದಿಗಾರರಿಗೆ ತಿಳಿಸಿದರು.
ಈ ಚಲನಚಿತ್ರೋತ್ಸವದಲ್ಲಿ 12 ರಾಷ್ಟ್ರಗಳ ಮಕ್ಕಳ ಪ್ರಸಿದ್ಧ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಇದರಲ್ಲಿ 12 ಚಿತ್ರಗಳು ವಿದೇಶದವು ಹಾಗೂ ಭಾರತೀಯ ಭಾಷೆಯ 10 ಚಿತ್ರಗಳು ಇವೆ. ಒಟ್ಟಾರೆ ಪ್ರದರ್ಶಿತವಾಗುವ 22 ಚಲನಚಿತ್ರಗಳಲ್ಲಿ ಕನ್ನಡದ 4 ಚಿತ್ರಗಳಿವೆ. ‘ತುತ್ತೂರಿ’, ‘ಕೇರ್ ಅಫ್ ಫುಟ್ ಪಾತ್’, ‘ಅ ಅ ಇ ಈ’ ಹಾಗೂ ‘ಮಸಣದ ಮಕ್ಕಳು’.
ಬೆಂಗಳೂರಿನ ಬಾಲಭವನ, ನವರಂಗ್ ಹಾಗೂ ತ್ರಿಭುವನ್ ಚಿತ್ರಮಂದಿರಗಳಲ್ಲಿ ಹಾಗೂ ಮೈಸೂರಿನ ಸರಸ್ವತಿ ಮತ್ತು ರೀಜೆನ್ಸಿ ಚಿತ್ರಮಂದಿರಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿದೆ.
ಯಾವುದೇ ಚಿತ್ರಗಳಿಗೆ ಪ್ರವೇಶ ಶುಲ್ಕ ವಿಧಿಸಿರುವುದಿಲ್ಲ. ಮಕ್ಕಳು ಉಚಿತವಾಗಿ ಚಿತ್ರಗಳನ್ನು ನೋಡಬಹುದು. ರಾಜ್ಯ ಸರ್ಕಾರ ಎರಡು ಚಿತ್ರಗಳಿಗೆ ತಲಾ 25 ಲಕ್ಷ ರೂ ನಂತೆ ಸಬ್ಸಿಡಿ ನೀಡುತ್ತಿದೆ. ಅದರೆ ಸಬ್ಸಿಡಿಯನ್ನು 4 ಚಿತ್ರಗಳಿಗೆ ಹೆಚ್ಚಿಸಿದರೆ ಒಳ್ಳೆಯದು. ಈ ಚಿತ್ರೋತ್ಸವಕ್ಕೆ ಬರುವವರಿಗೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಶಿಕ್ಷಣ ಇಲಾಖೆ ಕೂಡ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವಂತೆ ಸುತ್ತೋಲೆ ಹೊರಡಿಸಿದೆ ಎಂದು ನಂಜುಡೇ ಗೌಡ ಹೇಳಿದರು.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 94480 86161.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications