ಬೆಂಗಳೂರು :ಕಲ್ಲು ತೂರಾಟ, ಲಾಠಿಪ್ರಹಾರ, ಕೈಕೊಟ್ಟ ಮತ ಯಂತ್ರ
ಬೆಂಗಳೂರು :ಕಲ್ಲು ತೂರಾಟ, ಲಾಠಿಪ್ರಹಾರ, ಕೈಕೊಟ್ಟ ಮತ ಯಂತ್ರ
ಸಾಂಗ್ಲಿಯಾನ ಕಾರಿಗೆ ಕಲ್ಲು . ಅಹಿತಕರ ಘಟನೆಗಳ ನಡುವೆಯೂ ಉತ್ಸಾಹದ ಮತದಾನ
ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಕ ನಕಲಿ ಮತದಾನ ನಡೆಯುತ್ತಿದೆ ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು . ಘರ್ಷಣೆಯಲ್ಲಿ ತೊಡಗಿದ್ದ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು.
ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರದ ಜೆಜೆನಗರದಲ್ಲಿ ಅನೇಕ ಮತದಾರರ ಹೆಸರುಗಳು ಮತಪಟ್ಟಿಯಲ್ಲಿ ಬಿಟ್ಟುಹೋಗಿರುವ ಕಾರಣ ಆಕ್ರೋಶಗೊಂಡ ಮತದಾರರು, ಪೊಲೀಸ್ ಠಾಣೆ ಹಾಗೂ ಮತಗಟ್ಟೆಯ ಮುಂಭಾಗ ಧರಣಿ ನಡೆಸಿದರು.
ಸಾಂಗ್ಲಿಯಾನ ಕಾರಿಗೆ ಕಲ್ಲು : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ಟಿ.ಸಾಂಗ್ಲಿಯಾನ ಅವರ ಕಾರಿನ ಮೇಲೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಈ ಕಲ್ಲು ತೂರಾಟದಲ್ಲಿ ಕಾರಿನ ಗಾಜುಗಳು ಜಖಂಗೊಂಡಿವೆ. ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಾಂಗ್ಲಿಯಾನ, ಇದೊಂದು ದುರದೃಷ್ಟಕರ ಘಟನೆ ಎಂದಿದ್ದಾರೆ. ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ರಘು ಅವರ ಕಾರಿನ ಮೇಲೂ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತಪಟ್ಟಿಯ ಅಪೂರ್ಣತೆಯ ಬಗ್ಗೆ ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಕೈಕೊಟ್ಟ ಮತಯಂತ್ರ : ಪೂರ್ಣ ಪ್ರಮಾಣದ ಚುನಾವಣೆಗೆ ಇದೇ ಮೊದಲ ಬಾರಿಗೆ ಬಳಕೆಯಾಗುತ್ತಿರುವ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟ ಘಟನೆಗಳೂ ವಿವಿಧ ಮತಕ್ಷೇತ್ರಗಳಿಂದ ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರಿಷಿನಕುಂಟೆಯಲ್ಲಿ ಮತಯಂತ್ರಗಳು ಕೈಕೊಟ್ಟ ಕಾರಣ ಚುನಾವಣೆ ಒಂದು ಗಂಟೆಯಷ್ಟು ತಡವಾಗಿ ಪ್ರಾರಂಭವಾಯಿತು. ಬಸವನಗುಡಿ ಕ್ಷೇತ್ರದ ಕೆಲಮತಗಟ್ಟೆಗಳ ಯಂತ್ರಗಳಲ್ಲೂ ತಾಂತ್ರಿಕದೋಷ ಕಾಣಿಸಿಕೊಂಡು ಗೊಂದಲ ಉಂಟಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications