‘ವರ್ಡ್ಸ್ವರ್ತ್ ಕಾವ್ಯದಲ್ಲಿ ಭಗವದ್ಗೀತೆಯ ಪ್ರಭಾವವಿದೆ’
ನವದೆಹಲಿ : ವಿಲಿಯಂ ವರ್ಡ್ಸ್ವರ್ತ್ ಬರೆದಿರುವ ರೊಮ್ಯಾಂಟಿಕ್ ಕವನ Immortality Odeನಲ್ಲಿ ಹಿಂದೂ ಧರ್ಮದ ನಂಬಿಕೆಗಳ ಎಳೆಗಳು ಇಣುಕುತ್ತವೆ. ಕವನದಲ್ಲಿ ಹೊಮ್ಮಿರುವ ಪುನರ್ಜನ್ಮದ ತತ್ವ ಇದಕ್ಕೆ ಪುಷ್ಟಿ ಕೊಡುತ್ತದೆ ಎಂದು ಅಲಹಾಬಾದ್ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರೊಫೆಸರ್ ಕೃಷ್ಣ ಗೋಪಾಲ್ ಶ್ರೀವತ್ಸ ಅಭಿಪ್ರಾಯ ಪಟ್ಟಿದ್ದಾರೆ.
BhagavadGita and the English Romantic Movement ಕೃತಿಯ ಲೇಖಕರೂ ಆಗಿರುವ ಶ್ರೀವತ್ಸ ಹೇಳುತ್ತಾರೆ-
‘ಹಿಂದೂ ತತ್ವಶಾಸ್ತ್ರ ಮತ್ತು ಇಂಗ್ಲಿಷ್ ರೊಮ್ಯಾಂಟಿಕ್ ಚಳವಳಿ ಕುರಿತ ಪುಸ್ತಕವೊಂದು ವಡ್ಸ್ವರ್ತ್ ಹಿಂದೂ ಧರ್ಮವನ್ನು ಮೆಚ್ಚಿಕೊಂಡಿದ್ದ ಅನ್ನುವುದನ್ನು ಖಚಿತಪಡಿಸುತ್ತದೆ. ತನ್ನ ಕವನಗಳಲ್ಲಿ ಬಿಂಬಿತವಾಗಿರುವ ಪುನರ್ಜನ್ಮದ ವಿಷಯ ಕ್ರಿಶ್ಚಿಯನ್ ಸಂಪ್ರದಾಯವಾದಿಗಳ ಗಮನಕ್ಕೆ ಬಂದರೆ ಪರಿಸ್ಥಿತಿ ನೆಟ್ಟಗಿರೋಲ್ಲ ಎಂಬ ಕಾರಣಕ್ಕೆ, ಕವನದ ಮೂಲ ಪ್ರತಿಯಲ್ಲಿ ಹಿಂದೂ ತತ್ವವಿರುವ ಪಂಕ್ತಿಗಳನ್ನು ವರ್ಡ್ಸ್ವರ್ತ್ ಅಳಿಸಿದ್ದ.
ವರ್ಡ್ಸ್ವರ್ತ್ನ ಗಳಸ್ಯ ಕಂಠಸ್ಯ ಗೆಳೆಯ ಸ್ಯಾಮ್ಯುಯೆಲ್ ಟೇಲರ್ ಕಾಲರಿಜ್, ರೊಮ್ಯಾಂಟಿಕ್ ಕವಿಗಳಾದ ರಾಬರ್ಟ್ ಸೌಥಿ, ಪಿ.ಬಿ. ಶೆಲ್ಲಿ ಮತ್ತು ಜಾನ್ ಕೀಟ್ಸ್ - ಇವರೆಲ್ಲ ಭಗವದ್ಗೀತೆಯ ಆಧ್ಯಾತ್ಮಿಕ ತತ್ವಗಳಿಂದ ಪ್ರಭಾವಿತರಾಗಿದ್ದರು. ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯಿದ್ದಾಗ, ಬಂಗಾಳ ಪ್ರಾಂತದಲ್ಲಿ ಕಾರಕೂನನಾಗಿದ್ದ ಚಾರ್ಲ್ಸ್ ವಿಲ್ಕಿನ್ಸ್ ಗೀತೆಯ ಸಾರವನ್ನು 1785ರಲ್ಲಿ ಇಂಗ್ಲಿಷ್ಗೆ ತರ್ಜುಮೆ ಮಾಡಿದ್ದ. ಅದನ್ನು ಓದಿ, ಅನೇಕ ಪಾಶ್ಚಿಮಾತ್ಯ ರೊಮ್ಯಾಂಟಿಕ್ ಕವಿಗಳು ಪ್ರಭಾವಿತರಾಗಿದ್ದರು.
ಗೀತೆಯ ತರ್ಜುಮೆ ಕೃತಿಗೆ ಇಂಗ್ಲೆಂಡಿನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಅಲ್ಲಿನ ಎರಡು ನಿಯತಕಾಲಿಕಗಳು ಕೃತಿಯನ್ನು ಹಾಗೂ ಅದರ ಸಾರವನ್ನು ಹೊಗಳಿ ಬರೆದಿದ್ದವು.
ಕೀಟ್ಸನ Ode to a Nightingale ಕವನವನ್ನು ಶ್ರೀವತ್ಸ ಅವರು ವಿಶ್ಲೇಷಿಸಿದ್ದು, ಅದನ್ನು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಪಾಶ್ಚಾತ್ಯ ರೊಮ್ಯಾಂಟಿಕ್ ಕವಿಗಳು ಹೇಗೆ ಹಿಂದೂ ತತ್ವಗಳಿಂದ ಪ್ರಭಾವಿತರಾಗಿದ್ದರು ಎಂಬುದನ್ನು ಕವನಗಳ ಸಾಲುಗಳಲ್ಲಿ ಅಡಕವಾಗಿರುವ ತತ್ವಗಳನ್ನು ಬಿಚ್ಚಿ ಹೇಳುವ ಶ್ರೀವತ್ಸ ಅವರ ಅಭಿಪ್ರಾಯದಲ್ಲಿ ಖಚಿತತೆಯಿದೆ. ಇದೊಂದು ಅಪರೂಪದ ಸಂಶೋಧನೆ ಎನ್ನುತ್ತಾರೆ ರೊಮ್ಯಾಂಟಿಕ್ ಕವಿಗಳನ್ನು ಆಳವಾಗಿ ಓದಿಕೊಂಡಿರುವ ದೆಹಲಿಯ ಅಧ್ಯಾಪಕಿ ಶಾಲಿನಿ ಸಿಕ್ಕ.
ಶ್ರೀವತ್ಸ ಅವರ ತರ್ಕವೇನೋ ಅರ್ಥಪೂರ್ಣವಾಗಿದೆ. ಆದರೆ, ವಡ್ಸ್ವರ್ತ್ ಭಗವದ್ಗೀತೆಯಿಂದ ನೇರವಾಗಿ ಪ್ರಭಾವಿತನಾಗಿದ್ದ ಎಂಬುದಕ್ಕೆ ಇದಮಿತ್ಥಂ ಎಂಬ ಸಿದ್ಧ ಪುರಾವೆ ಸಿಗುವುದಿಲ್ಲ.
ತೌಲನಿಕ ಅಧ್ಯಯನ ಕ್ಷೇತ್ರದಲ್ಲಿ ಶ್ರೀವತ್ಸ ಅವರ ಶೋಧ, ಸಂಚಲನೆಯನ್ನು ಹುಟ್ಟಿಸಿರುವುದಂತೂ ದಿಟ.
(ಏಜೆನ್ಸೀಸ್)
ಮುಖಪುಟ / ಲೋಕೋಭಿನ್ನರುಚಿ












Click it and Unblock the Notifications