ಹಿಂದುತ್ವ ಯುದ್ಧದಲ್ಲಿ ಸುದರ್ಶನ್ಗೆ ಮಹಾಭಾರತ ದರ್ಶನ
ನವದೆಹಲಿ : ಹಿಂದುತ್ವ ವಾದಿಗಳ ಮತ್ತು ವಿರೋಧಿಗಳ ನಡುವೆ ದೇಶದಲ್ಲಿ ಇನ್ನೊಂದು ‘ಮಹಾಭಾರತ’ ಯುದ್ಧ ಶುರುವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ದ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಅಭಿಪ್ರಾಯ ಪಟ್ಟಿದ್ದಾರೆ.
ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು ಹಿಂದುತ್ವದ ಬಗ್ಗೆ ಈ ಅಭಿಪ್ರಾಯ ಹೊರಹಾಕಿದ್ದಾರೆ. 5 ಸಾವಿರ ವರ್ಷಗಳ ಹಿಂದೆ ಕುರುಕ್ಷೇತ್ರ ಯುದ್ಧ ನಡೆದು, ಧರ್ಮಕ್ಕೆ ಜಯವಾಯಿತು. ಈಗಲೂ ಹಿಂದುತ್ವ ವಾದಿಗಳಿಗೆ ವಿಜಯವಾಗಿ, ಧರ್ಮ ವಿಶ್ವವ್ಯಾಪಿಯಾಗಲಿದೆ. ಹಿಂದುತ್ವ ವಿರೋಧಿಗಳ ಸೊಲ್ಲು ಅಡಗಲಿದೆ ಎಂದರು.
ಡಿಸೆಂಬರ್ 6, 1992ರಲ್ಲಿ ಬಾಬ್ರಿ ಮಸೀದಿ ಕೆಡಹುವ ಮೂಲಕ ಹೊಸ ಮಹಾಭಾರತ ಶುರುವಾಯಿತು. ಅಂದಿನಿಂದ ನಾವು ಹಿಂದುತ್ವದ ಪರ ಹೋರಾಟದಲ್ಲಿ ಮುನ್ನಡೆ ಸಾಧಿಸುತ್ತಲೇ ಬಂದಿದ್ದೇವೆ. ರಾಜಕೀಯ ಪಕ್ಷಗಳು ತಮ್ಮ ನಿಲುವು ಹಾಗೂ ಚಿಂತನೆಗಳ ಬಗ್ಗೆ ಮರು ಚಿಂತನೆ ನಡೆಸುವಂತೆ ಗುಜರಾತ್ ಚುನಾವಣೆ ಫಲಿತಾಂಶ ಬಂದಿದೆ. ದೇಶದ ಪ್ರತಿತ 85ರಷ್ಟು ಹಿಂದೂ ಜನರಿದ್ದಾರೆ ಅನ್ನುವುದನ್ನು ಯೋಚಿಸುವಂತೆ ಮಾಡಿದೆ ಎಂದು ಸುದರ್ಶನ್ ಹೇಳಿದ್ದಾರೆ.
ರಾಜಕೀಯವಷ್ಟೇ ಅಲ್ಲದೆ ಶಿಕ್ಷಣ, ಆರ್ಥಿಕ, ಆಡಳಿತ- ಮೊದಲಾದ ಕ್ಷೇತ್ರಗಳಿಗೂ ಹಿಂದುತ್ವ ಹೋರಾಟ ವ್ಯಾಪಿಸಲಿದೆ ಎಂದು ಹೇಳುವ ಮೂಲಕ ಸುದರ್ಶನ್ ಯುದ್ಧದ ಇನ್ನೊಂದು ಘಟ್ಟಕ್ಕೆ ಶಂಖ ಊದಿದ್ದಾರೆ !
ಸುದರ್ಶನ್ ನಿಲುವಿಗೆ ನೀವೇನು ಹೇಳುತ್ತೀರಿ?
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...