ಕೊಕ್ಕರೆ ಬೆಳ್ಳೂರು ಉದ್ಧಾರಕ್ಕೆ ಕೇಂದ್ರದ 50 ಲಕ್ಷ ರು.
ಬೆಂಗಳೂರು : ಮಂಡ್ಯ ಜಿಲ್ಲೆಯ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ 50 ಲಕ್ಷ ರುಪಾಯಿ ಮಂಜೂರು ಮಾಡಿದೆ ಎಂದು ರಾಜ್ಯ ಪ್ರವಾಸ ಮತ್ತು ಐಟಿ ಸಚಿವ ಡಿ.ಬಿ.ಇನಾಂದಾರ್ ಶನಿವಾರ ಹೇಳಿದರು.
ಹೊಸ ಗಿಡಗಳನ್ನು ನೆಟ್ಟು, ಹೆಚ್ಚು ಹೆಚ್ಚು ಪಕ್ಷಿಗಳಿಗೆ ಮುಂದೆ ನೆಲೆಯಾಗುವಂಥಾ ಮರಗಳನ್ನಾಗಿ ಅವುಗಳನ್ನು ಕಾಪಿಡುವುದು ಯೋಜನೆಯ ಮುಖ್ಯ ಹೆಜ್ಜೆ. ಹೊಸ ಗಿಡಗಳನ್ನು ನೆಡುವ ಕೆಲಸ ಇನ್ನು 2 ತಿಂಗಳಲ್ಲಿ ಮುಗಿಯಲಿದೆ. ಕೊಕ್ಕರೆ ಬೆಳ್ಳೂರಿನ ಮೂರು ಕೊಳಗಳಲ್ಲಿ ಮೀನುಗಾರಿಕೆ ಮಾಡಲು ಈಗ ಅನುಮತಿ ಕೊಡಲಾಗುತ್ತಿದೆ. ಮುಂದೆ ಈ ಅನುಮತಿಯನ್ನೂ ಕೊಡದೆ, ನೀರಿನಲ್ಲಿ ಮೀನು ಯಥೇಚ್ಛವಾಗಿರುವಂತೆ ನೋಡಿಕೊಳ್ಳಲಾಗುವುದು ಎಂದು ಇನಾಂದಾರ್ ಹೇಳಿದರು.
ಪ್ರವಾಸಿ ತಾಣ ಕೊಕ್ಕರೆ ಬೆಳ್ಳೂರಿನಲ್ಲಿ ತಂಗಲು ವಿದೇಶೀಯರನ್ನೇ ವಿಶೇಷವಾಗಿ ದೃಷ್ಟಿಯಲ್ಲಿಟ್ಟುಕೊಂಡು ಎರಡು ಸುಸಜ್ಜಿತ ಕುಟೀರಗಳನ್ನು ನಿರ್ಮಿಸಲೂ ಸರ್ಕಾರ ನಿರ್ಧರಿಸಿದೆ. ಒಂದು ಬರಮಾಡಿಕೊಳ್ಳುವ ಕಿಂಡಿ (ರಿಸಪ್ಷನ್ ಕೌಂಟರ್) ಕೂಡ ತೆರೆಯಲಾಗುವುದು ಎಂದರು.
ಬೆಂಗಳೂರಿನಿಂದ 60 ಕಿಲೋ ಮೀಟರು ದೂರದಲ್ಲಿರುವ ನಂದಿ ಬೆಟ್ಟ ದ ಉಸ್ತುವಾರಿಯನ್ನು ಖಾಸಗಿಯವರ ಕೈಗೆ ಒಪ್ಪಿಸಲು ಚಿಂತಿಸುತ್ತಿದ್ದೇವೆ. ಹಗ್ಗದಾರಿ ನಿರ್ಮಾಣ, ಚಾರಣ ಸವಲತ್ತು ಮೊದಲಾದವನ್ನು ನಂದಿ ಬೆಟ್ಟದಲ್ಲಿ ಕಲ್ಪಿಸುವ ಕುರಿತೂ ಮಾತುಕತೆ ನಡೆಯುತ್ತಿವೆ ಎಂದು ಸಚಿವರು ಹೇಳಿದರು.
ಕರ್ನಾಟಕದ ವಿವಿಧ ಪ್ರವಾಸಿ ತಾಣಗಳ ನಡುವೆ 35 ಸೀಟುಗಳ ಮಿನಿ ವಿಮಾನಗಳನ್ನು ಹಾರಿಸಲು ಡೆಕ್ಕನ್ ವಿಮಾನ ಯಾನ ಸಂಸ್ಥೆ ಮುಂದೆ ಬಂದಿದೆ. ಹೆಲಿಕಾಪ್ಟರ್ ಮೂಲಕ ಜಾಗೆಗಳ ಸುತ್ತಿಸಲು ಕೂಡ ಕರ್ನಾಟಕ ಸರ್ಕಾರ ಯೋಚಿಸುತ್ತಿದೆ ಎಂದು ಇನಾಂದಾರ್ ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...