ಡಿ. 25ರಂದು ಚಿತ್ಪಾವನ ಸಮುದಾಯದವರ ವಾರ್ಷಿಕ ಸಮ್ಮಿಲನ
*ಶ್ರೀವತ್ಸ ಜೋಶಿ (ಕ್ಯಾಂಪ್- ಬೆಂಗಳೂರು)
ಚಿತ್ಪಾವನ ಬ್ರಾಹ್ಮಣ ಸಮುದಾಯದವರು ಮೂಲತಃ ಮಹಾರಾಷ್ಟ್ರದವರಾದರೂ ತಲೆಮಾರುಗಳಿಂದ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ, ಮುಖ್ಯವಾಗಿ ಕರಾವಳಿಯ ಎರಡು ಜಿಲ್ಲೆಗಳಲ್ಲಿ ಸಾಂದ್ರವಾಗಿ ನೆಲೆಸಿದ್ದಾರೆ. ಶಿಕ್ಷಣ, ಉದ್ಯೋಗ, ವ್ಯಾಪಾರ ಹೀಗೆ ವಿವಿಧ ಕಾರಣಗಳಿಂದ ಬೆಂಗಳೂರಿಗೆ ಬಂದ ಈ ಸಮುದಾಯದ ಸುಮಾರು ಮುನ್ನೂರಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ತಮ್ಮದೇ ಒಂದು ಸಮಾಜವನ್ನೂ ಕಟ್ಟಿಕೊಂಡಿವೆ. ಯುಗಾದಿ, ಪರಶುರಾಮ ಜಯಂತಿ, ಉಪಾಕರ್ಮ, ಗಣೇಶೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲದೆ ವರ್ಷಕ್ಕೊಮ್ಮೆ, ಹೆಚ್ಚಾಗಿ ಡಿಸೆಂಬರ್ ತಿಂಗಳ ಕೊನೇ ವಾರದಲ್ಲಿ, ಸ್ನೇಹ ಸಮ್ಮಿಲನ ಕಾರ್ಯಕ್ರಮವೊಂದನ್ನೂ ಹಮ್ಮಿಕೊಳ್ಳುತ್ತಾರೆ. ಸಮಾಜ ಬಾಂಧವರೆಲ್ಲ ಒಂದೆಡೆ ಬೆರೆತು ಸ್ಪರ್ಧೆಗಳು, ಸಂಗೀತ-ನೃತ್ಯ ಕಲಾ ಪ್ರದರ್ಶನ - ಹೀಗೆ ದಿನವಿಡೀ ವಿವಿಧ ಕಾರ್ಯಕ್ರಮಗಳ ಒಂದು ‘ಗೆಟ್ ಟುಗೆದರ್’. ಈ ವರ್ಷದ ಕಾರ್ಯಕ್ರಮ ಡಿಸೆಂಬರ್ 25ರಂದು ಬುಧವಾರ, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆಯಲಿದೆ. (ಸ್ಥಳ: ನಂ. 101, 11ನೇ ಅಡ್ಡರಸ್ತೆ, 8ನೇ ಮುಖ್ಯ ರಸ್ತೆ, ಮಲ್ಲೇಶ್ವರಂ, ಬೆಂಗಳೂರು - 3. ದೂರವಾಣಿ 3348193).
ಬೆಳಿಗ್ಗೆ 9:30 ಕ್ಕೆ ಸತ್ಯನಾರಾಯಣ ಪೂಜೆಯಾಂದಿಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಸಂಗೀತ ವಿದುಷಿ ಶ್ಯಾಮಲಾ ಜಿ. ಭಾವೆಯವರ ನಿರ್ದೇಶನದಲ್ಲಿ ‘ಸಂತಗಾನ ಸೌರಭ’ವೆಂಬ ವಿಶೇಷ ಆಕರ್ಷಣೆಯೂ ಇದೆ. ನರಹರಿ ಖರೆ (ಅಧ್ಯಕ್ಷರು, ಚಿತ್ಪಾವನ ಸಮಾಜ, ಬೆಂಗಳೂರು) ಇವರ ಅಧ್ಯಕ್ಷತೆಯ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಎಚ್. ಎಸ್. ಲಕ್ಷ್ಮೀನಾರಾಯಣ ಭಟ್ (ಪ್ರಧಾನ ಕಾರ್ಯದರ್ಶಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ) ಮತ್ತು ಎಂ.ಬಾಲಚಂದ್ರ ಡೋಂಗ್ರೆ (ಅಧ್ಯಕ್ಷರು, ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಂಘ). ಈ ಕಾರ್ಯಕ್ರಮದಲ್ಲೇ, ವೈದಿಕ ಶಿರೋಮಣಿ ವೇದರತ್ನ ಕೇಶವ ಸೀತಾರಾಮ ಜೋಗಳೇಕರ್, ಗೋಕರ್ಣ ಇವರಿಗೆ ಸನ್ಮಾನ ಸಮಾರಂಭವಿದೆ. ಎಸೆಸ್ಸೆಲ್ಸಿ, ಪಿ.ಯೂ.ಸಿ, ಪದವಿ ಮತ್ತು ವೃತ್ತಿಪರ ಶಿಕ್ಷಣದಲ್ಲಿ ಉತ್ತಮ ಸಾಧನೆ ತೋರಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವೂ ನಡೆಯಲಿದೆ. ಜತೆಯಲ್ಲೇ ಮಕ್ಕಳಿಗೆ ರಸಪ್ರಶ್ನೆ, ಶ್ಲೋಕ ಕಂಠಪಾಠ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಇತ್ಯಾದಿ.
‘ದಾತೆ ಪಂಚಾಂಗ’ ಬೇಕಿತ್ತಾ ?
ಭೋಜನಾನಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಮಾಲೆಯಲ್ಲಿ ನೃತ್ಯ, ಹಾಡು, ಮಿಮಿಕ್ರಿ ಇವಿಷ್ಟೇ ಅಲ್ಲದೆ ಚಂದ್ರಶೇಖರ್ ನಡೆಸಿಕೊಡುವ ಜಾದೂ ಪ್ರದರ್ಶನ ವಿಶೇಷತಃ ಮಕ್ಕಳ ಮನಸೂರೆಗೊಳ್ಳಲಿದೆ. ಮೊನ್ನೆ ಡಿಸೆಂಬರ್ 15ರಂದು ಸಮಾಜದ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಕೊನೆಯಲ್ಲಿ ಸಂಜೆ ನಾಲ್ಕು ಗಂಟೆಗೆ ವಾರ್ಷಿಕ ಮಹಾಸಭೆಯಾಂದಿಗೆ ಒಂದುದಿನದ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಪರದೆ ಬೀಳುತ್ತದೆ.
ಈ ವರ್ಷದ ಕಾರ್ಯಕ್ರಮದಲ್ಲಿ, ‘ಚಿತ್ಪಾವನ ವಿಳಾಸ ದರ್ಶಿನಿ’ ಮತ್ತು ‘ಭಾರ್ಗವ ದಿನ ದರ್ಶಿನಿ - 2003’ ನೂತನ ಪ್ರಕಟಣೆಗಳ ಬಿಡುಗಡೆ ಮತ್ತು ಮಾರಾಟವೂ ಇರುತ್ತದೆ. ಹಾಗೆಯೇ ಮಹಾರಾಷ್ಟ್ರದ ಸೋಲಾಪುರದಿಂದ ಪ್ರಕಟವಾಗುವ ‘ದಾತೆ ಪಂಚಾಂಗ’ದ ಕನ್ನಡ ಆವೃತ್ತಿಯೂ ಮಾರಾಟಕ್ಕೆ ಲಭ್ಯವಿರುತ್ತದೆ.
ಒಂದು ಸಮುದಾಯದ ಸ್ನೇಹ ಸೌಹಾರ್ದತೆ ಸಂಪರ್ಕಗಳನ್ನು ಉಳಿಸಿ ಬೆಳೆಸುವ ಇಂತಹ ಸಮ್ಮಿಲನ ಕಾರ್ಯಕ್ರಮಗಳು ಯಾಂತ್ರೀಕೃತ ಜೀವನದ ಇಂದಿನ ದಿನಗಳಲ್ಲಿ ಹೆಚ್ಚು ಸಮಂಜಸವಾಗಿ ಸಾರ್ಥಕತೆಯನ್ನು ಪಡೆಯುತ್ತವೆ.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications