‘ನರಹಂತಕನ ಜೊತೆ ಮಾತಾಡಿದ್ದು ವಿರೋಧ ಪಕ್ಷ, ನಾವಲ್ಲ’
ಬೆಂಗಳೂರು : ‘ನಾಗಪ್ಪನವರ ಅಪಹರಣದ ನಂತರ ವೀರಪ್ಪನ್ ಜೊತೆ ಪರ್ಯಾಯ ಸಂಧಾನಕ್ಕೆ ಹೋದವರು ವಿರೋಧ ಪಕ್ಷದವರು, ನಾವಲ್ಲ’ ಎಂದು ಸಹಕಾರಿ ಸಚಿವ ಎಚ್.ವಿಶ್ವನಾಥ್ ಕೆಂಡ ಕಾರಿದ್ದಾರೆ.
ನಾಗಪ್ಪ ಹತ್ಯೆಯ ನಂತರ ಮೊದಲ ಬಾರಿಗೆ ಶುಕ್ರವಾರ ವಿರೋಧ ಪಕ್ಷಗಳ ಮೇಲೆ ಕಿಡಿ ತೂರಿದ ಸಚಿವರು, ಇಡೀ ಪ್ರಕರಣವನ್ನು ಜಾತಿ ರಾಜಕೀಯವನ್ನಾಗಿ ಪರಿವರ್ತಿಸುತ್ತಿರುವುದನ್ನು ಖಂಡಿಸಿದರು. ಯಾವತ್ತೂ ಜಾತಿ ರಾಜಕಾರಣ ಮಾಡದ, ಸುಸಂಸ್ಕೃತರಾಗಿದ್ದವರು ನಾಗಪ್ಪ. ಅವರ ಸಾವನ್ನು ಮುಂದಿಟ್ಟುಕೊಂಡು ಜಾತಿ ರಾಜಕಾರಣ ಮಾಡುವುದರಿಂದ ಅಂಥ ಒಳ್ಳೆ ರಾಜಕಾರಣಿಯ ವ್ಯಕ್ತಿತ್ವವನ್ನು ಕೆಳಗಿಳಿಸಿದಂತಾಗುತ್ತದೆ ಎಂದರು.
ಕೊಳ್ಳೇಗಾಲದ ಸಂಯುಕ್ತ ಜನತಾ ದಳದ ನಾಯಕ ಪೊನ್ನಾಚಿ ಮಹದೇವ ಸ್ವಾಮಿ ವೀರಪ್ಪನ್ ಜೊತೆ ಎರಡು ಬಾರಿ ಸಂಧಾನ ನಡೆಸಿದ್ದರೂ, ಅಲ್ಲಿ ಏನು ಮಾತಾಯಿತು ಅನ್ನೋದನ್ನ ಸರ್ಕಾರಕ್ಕೆ ಹೇಳಲೇ ಇಲ್ಲ. ನಾಗಪ್ಪನವರ ಅಪಹರಣವನ್ನು ವಿರೋಧ ಪಕ್ಷದವರೇ ಹೈಜಾಕ್ ಮಾಡಿ, ಪರ್ಯಾಯ ಮಾತುಕತೆ ನಡೆಸಿ, ಈಗ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿವೆ ಎಂದು ವಿಶ್ವನಾಥ್ ತರಾಟೆಗೆ ತೆಗೆದುಕೊಂಡರು.
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿರೋಧ ಪಕ್ಷಗಳು ಮಠಾಧೀಶರನ್ನೂ ದಿಕ್ಕು ತಪ್ಪಿಸುತ್ತಿವೆ. ವೀರಪ್ಪನ್ ತೆಕ್ಕೆಯಿಂದ ನಾಗಪ್ಪನವರನ್ನು ಬಿಡಿಸುವ ಎಲ್ಲಾ ಯತ್ನಗಳನ್ನು ಸರ್ಕಾರ ಮಾಡುತ್ತಿತ್ತು. ಆದರೆ ಎಸ್ಟಿಎಫ್ ಕಾರ್ಯಾಚರಣೆ ನಿಲ್ಲಿಸಿ ಅಂತ ಒತ್ತಡ ತಂದಿದ್ದೇ ವಿರೋಧ ಪಕ್ಷಗಳು. ಈಗ ಅವಕಾಶವಾದಿಗಳ ತರಹ ಮಾತಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಬಾಲಂಗೋಚಿ : ಒಂದೊಮ್ಮೆ ಇದೇ ಪೊನ್ನಾಚಿಯನ್ನು ಸಂಧಾನಕ್ಕೆ ಹೋಗುವಂತೆ ತಲೆ ನೇವರಿಸಿ ಕೇಳಿಕೊಂಡಿದ್ದ ಸರ್ಕಾರ ಈಗ ಉಲ್ಟಾ ಬಾಣ ಬಿಡುತ್ತಿದೆ. ಯಾವುದಕ್ಕೂ ಪೊನ್ನಾಚಿ ಬಾಯಿಬಿಡಬೇಕು. ಆಗ ಮಾತ್ರ ಸತ್ಯ ಬಯಲಾದೀತು. ಇಷ್ಟಕ್ಕೂ ಪೊನ್ನಾಚಿ ಬಾಯಿ ಮುಚ್ಚಿದ್ದಾರೋ ಅಥವಾ ಮುಚ್ಚಿಸಲಾಗಿದೆಯೋ?! ನಿಮಗೇನನ್ನಿಸುತ್ತೆ.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ