ಕುಣಿಗಲ್ ಬಳಿ ರಸ್ತೆ ಭೀಕರ ಅಪಘಾತ : 11 ಸಾವು
ಕುಣಿಗಲ್ : ಕೆ.ಆರ್.ಎಸ್. ಅಗ್ರಹಾರದಲ್ಲಿ ಬುಧವಾರ ಬೆಳಗ್ಗೆ ಪ್ರಯಾಣಿಕರಿಂದ ಖಚಾಖಚಿ ತುಂಬಿದ್ದ ಟೆಂಪೋ ಹಾಗೂ ಸಿಲಿಂಡರ್ ಲಾರಿ ಮುಖಾಮುಖಿ ಡಿಕ್ಕಿ ಹೊಡೆದು, 11 ಮಂದಿ ಮೃತ ಪಟ್ಟಿದ್ದಾರೆ. 11 ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.
ಬೆಳಗ್ಗೆ 6.30ರ ಸುಮಾರಿಗೆ ಆದ ಈ ಅವಘಡದಲ್ಲಿ ಸ್ಥಳದಲ್ಲೇ 9 ಮಂದಿ ಸತ್ತುಹೋದರು. ಒಬ್ಬಾತ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಕೊನೆಯುಸಿರೆಳೆದ. ತೀವ್ರ ಗಾಯಗೊಂಡಿದ್ದ ಇನ್ನೊಬ್ಬ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮೃತ ಪಟ್ಟವರ ಪೈಕಿ ಕೆಂಪಣ್ಣ, ಸುಬ್ಬಶೆಟ್ಟಿ, ಯೋಗೀಶ್, ಹುಚ್ಚಪ್ಪ, ಬೆಳಿಗೆಹಳ್ಳಿ, ಪ್ರಭಾಕರ್, ಗೋವಿಂದ, ಷರೀಫ್ ಹಾಗೂ ಗುರುರಾಜ್ ಎಂಬುವರನ್ನು ಗುರುತಿಸಲಾಗಿದೆ. ಉಳಿದಿಬ್ಬರ ಹೆಸರು, ವಿವರಗಳು ಗೊತ್ತಾಗಿಲ್ಲ. ಸಿಲಿಂಡರ್ ತುಂಬಿಕೊಂಡಿದ್ದ ಲಾರಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿತ್ತು. ಹಿರಿಸಾವೆಯಿಂದ ಕುಣಿಗಲ್ ಸಂತೆಗಾಗಿ ಟೆಂಪೋ ಜನರನ್ನು ಹೊತ್ತು ತರುತ್ತಿತ್ತು. ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಇತ್ತೀಚೆಗೆ ಸಂಭವಿಸಿರುವ ಭೀಕರ ಅಪಘಾತ ಇದಾಗಿದ್ದು, ಅನೇಕ ಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...