ಎಲ್ಲದಕು ಕಾರಣನು ವಾಸ್ತು ಪುರುಷ !
*ದಟ್ಸ್ಕನ್ನಡ ಬ್ಯೂರೊ
‘ಏನು ತಪ್ಪು ಮಾಡದೇನೆ ಈಚಿನ ದಿನಗಳಲ್ಲಿ ನನ್ನ ವರ್ಚಸ್ಸು ಕಡಿಮೆಯಾಗಿದೆ!’
ಸುಪ್ರಿಂಕೋರ್ಟ್ ಬೈಗುಳಕ್ಕೆ ಹೆದರಿ ತಮಿಳುನಾಡಿಗೆ ಕಾವೇರಿ ಹರಿಸಿದ ಮುಖ್ಯಮಂತ್ರಿ ಕೃಷ್ಣ ಒಂದೆರಡು ವಾರದ ಕೆಳಗೆ ತಮ್ಮ ಮಂಕಾದ ವರ್ಚಸ್ಸಿನ ಕುರಿತು ಪತ್ರಕರ್ತರೊಂದಿಗೆ ತಣ್ಣನೆ ದನಿಯಲ್ಲಿ ಹೇಳಿಕೊಂಡಿದ್ದರು. ಮೊನ್ನೆ ಮೊನ್ನೆಯಷ್ಟೇ ದೇಶದ ನಂಬರ್ 1 ಮುಖ್ಯಮಂತ್ರಿ ಅಂತ ಕರೆಸಿಕೊಂಡು ಬೀಗುತ್ತಿದ್ದ ಎಸ್. ಎಂ. ಕೃಷ್ಣರಿಗೆ ಇದ್ದಕ್ಕಿದ್ದ ಹಾಗೆ ಇದೇನಾಯ್ತು ?
ಕಾವೇರಿ ವಿವಾದ ಮತ್ತು ಮಾಜಿ ಸಚಿವ ನಾಗಪ್ಪ ಅವರ ದಾರುಣ ಹತ್ಯೆ ಕೃಷ್ಣ ಅವರನ್ನು ಹಣ್ಣು ಮಾಡಿವೆ, ಈವರೆಗೆ ಅವರು ಗಳಿಸಿದ್ದ ಸಾಧನೆಯನ್ನೆಲ್ಲ ಮಣ್ಣು ಮಾಡಿವೆ. ಬಹುಶಃ ರಾಜ್ಯದಲ್ಲಿ ಇಷ್ಟರವರೆಗೆ ಆಗಿ ಹೋಗಿರುವ ಯಾವ ಮುಖ್ಯಮಂತ್ರಿಯೂ ಇಂಥಾ ಪರಿ ಸಾಲು ಅವಮಾನಗಳನ್ನು ಒಂದೇ ಬಾರಿಗೆ ಎದುರಿಸಿರಲಾರ.
ಶನಿಕಾಟವಾ ?
ಕೃಷ್ಣರ ದೆಸೆ ಪೂರಾ ಕೆಟ್ಟಿದೆ. ಜಾತಕದಲ್ಲೇನೋ ಸಂಧಿ ದೋಷವಿರಬೇಕು... ಹೀಗೆ ಮಾತುಗಳು ತೇಲುತ್ತಲೇ ಇವೆ. ಹೈಟೆಕ್ ಕೃಷ್ಣ ಇದನ್ನೆಲ್ಲಾ ನಂಬುತ್ತಾರಾ? ಗ್ರಹಚಾರ, ಶನಿಕಾಟವನ್ನು ನಂಬುತ್ತಾರೊ ಇಲ್ಲವೋ ವಾಸ್ತುವನ್ನಂತೂ ಕೃಷ್ಣ ನಂಬುತ್ತಾರೆ. ಅವರು ಕಟ್ಟಾ ವಾಸ್ತು ವಾದಿ. ಮುಖ್ಯಮಂತ್ರಿ ಪಟ್ಟವೇರುತ್ತಲೇ ವಾಸ್ತುವಿನ ಮೂಲಕ ಸುದ್ದಿ ಮಾಡಿದವರು. ಪ್ರಸ್ತುತ ಅವರ ದುಸ್ಥಿತಿ ಕುರಿತು, ಅಂತಃಪುರದ ವಾಸ್ತು ಸಲಹೆಗಾರ ಸೋಮಯಾಜಿ ಏನನ್ನಬಹುದು....
ಸೋಮಯಾಜಿ ಅವರ ವಾಸ್ತು ವಿಜ್ಞಾನದ ಪ್ರಕಾರ ಎಸ್ಸೆಂ ಕೃಷ್ಣ ಅವರ ಅಧಿಕೃತ ನಿವಾಸ ಅನುಗ್ರಹ ಹಾಗೂ ಗೃಹ ಕಚೇರಿ ಕೃಷ್ಣಾದ ಬೆಡ್ರೂಂಗಳ ವಾಸ್ತು ಸರಿಯಾಗಿಲ್ಲ. ಅಂದರೆ, ಈ ಎಲ್ಲ ಅವಾಂತರಗಳಿಗೆ ತಪ್ಪು ವಾಸ್ತು ಇರುವ ಮಲಗುವ ಕೋಣೆಯೇ ಕಾರಣ.
ಸೋಮಯಾಜಿ ಹೇಳುತ್ತಾರೆ - ‘ಕೃಷ್ಣರ ಗೃಹ ಕಚೇರಿಯಲ್ಲಿ ನೆಗೆಟಿವ್ ಎನರ್ಜಿ ಉತ್ಪಾದನೆಯಾಗುತ್ತಿದೆ. ಅವರ ಗೃಹ ಕಚೇರಿಯು ಪಶ್ಚಿಮದ ಕಡೆಗೆ ತುಸು ಬಾಗಿದೆ. ಈ ಕಚೇರಿಯನ್ನು ಬಳಸುವವರಿಗೆ ಮೊದಲ 18 ತಿಂಗಳು ಯಶಸ್ಸು ದೊರೆಯುತ್ತದೆ. ಮತ್ತೆ ಒಂಭತ್ತು ತಿಂಗಳಲ್ಲಿ ಅವರ ಯಶಸ್ಸು ಉತ್ತುಂಗಕ್ಕೇರುತ್ತದೆ. ನಂತರ ಈ ವಾಸ್ತುವಿನ ಕೆಟ್ಟ ಪರಿಣಾಮಗಳು ಗೋಚರಿಸಲಾರಂಭಿಸುತ್ತದೆ. ಈಗ ಎಸ್ಸೆಂ ಕೃಷ್ಣರಿಗಾಗಿರುವುದು ಇದೇ ರೀತಿಯ ಪರಿಣಾಮ. ಅವರು ಇದೇ ಗೃಹ ಕಚೇರಿಯನ್ನೇ ಮುಂದೆಯೂ ಬಳಸಿದರೆ ಇಂತಹುದೇ ಋಣಾತ್ಮಕ ಪರಿಣಾಮಗಳು ಗ್ಯಾರಂಟಿ.’
ತಕ್ಷಣವೇ ಕೃಷ್ಣ ಏನು ಮಾಡಬೇಕು..
ತಮ್ಮ ಮನೆಯ ಮುಂಬಾಗಿಲನ್ನು ಬದಲಿಸಬೇಕು. ಗೃಹ ಕಚೇರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಇವೆರಡೂ ಬದಲಾವಣೆಗಳನ್ನು ಮಾಡಿದಲ್ಲಿ ಮುಂದಿನ 15ರಿಂದ 30 ವರ್ಷಗಳ ಕಾಲ ಯಾವುದೇ ಸಮಸ್ಯೆಗಳು ಬರುವುದಿಲ್ಲ. (ವಿಲೀನದ ಮೂಲಕ ಅಧಿಕಾರದ ಕನಸು ಕಾಣುತ್ತಿರುವ ದಳಗಳ ಗತಿ ಏನು?)
ವೀರಪ್ಪನ್ನನ್ನು ಯಾರು ಹಿಡಿಯಬಹುದು?
‘ನಾನು ಕೆಂಪಯ್ಯನವರ ಜಾತಕ ನೋಡಿದ್ದೇನೆ. ಅವರು ವೀರಪ್ಪನ್ನ್ನು ಹಿಡಿಯಬಲ್ಲರು. ಎಸ್ಸೆಂ ಕೃಷ್ಣ ಅವರು ವೀರಪ್ಪನ್ನ್ನು ಹಿಡಿಯುವ ಕಾರ್ಯಾಚರಣೆ ಪಡೆಯಲ್ಲಿ ಕೆಂಪಯ್ಯನವರನ್ನು ನೇಮಿಸಿಕೊಳ್ಳಬೇಕು ಎಂಬ ಅಮೂಲ್ಯ ಸಲಹೆಯನ್ನೂ ಸೋಮಯಾಜಿ ಮುಖ್ಯಮಂತ್ರಿಗಳಿಗೆ ಕೊಟ್ಟಿದ್ದಾರೆ’.
ಮುಖ್ಯಮಂತ್ರಿ ಕೃಷ್ಣ ಸೋಮಯಾಜಿಗಳ ಸಲಹೆ ಪಾಲಿಸುತ್ತಾರಾ? ಮಲೆ ಮಹದೇಶ್ವರನಿಗೇ ಗೊತ್ತು ?
ಮುಖಪುಟ / ಕೃಷ್ಣಗಾರುಡಿ












Click it and Unblock the Notifications