ಕೃಷ್ಣ ರಾಜೀನಾಮೆಗೆ ಡಿ.13ರಂದು ಬಿಜೆಪಿ ಪ್ರತಿಭಟನೆ
ಬೆಂಗಳೂರು : ನಾಗಪ್ಪನವರ ಹತ್ಯೆ ವಿಚಾರದಲ್ಲಿ ಕೈತೊಳೆದುಕೊಂಡು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ಬಿಜೆಪಿ ನಾಯಕರು, ಡಿಸೆಂಬರ್ 13ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್ ಮತ್ತು ಬಿ.ಎಸ್.ಯಡಿಯೂರಪ್ಪ ಮಂಗಳವಾರ ಸುದ್ದಿಗಾರರ ಜೊತೆ ಮಾತಾಡುತ್ತಿದ್ದರು. ನಾಗಪ್ಪನವರನ್ನು ಬಿಡಿಸುವ ವಿಷಯದಲ್ಲಿ ದಿವ್ಯ ನಿರ್ಲಕ್ಷ್ಯ ತಳೆದ ಮುಖ್ಯಮಂತ್ರಿಗಳು ಈಗ ಕೈತೊಳೆದುಕೊಳ್ಳುತ್ತಿದ್ದಾರೆ. ಪ್ರಕರಣದ ವಿಷಯದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಜೊತೆ ಕೃಷ್ಣ ಚರ್ಚಿಸಲೇ ಇಲ್ಲ . ಕಾಂಗ್ರೆಸ್ ಹೈಕಮಾಂಡ್ನ ಓಲೈಸುವುದೇ ಅವರಿಗೆ ಮುಖ್ಯವಾಯಿತು ಎಂದು ಶೆಟ್ಟರ್ ಹಾಗೂ ಯಡಿಯೂರಪ್ಪ ದೂರಿದರು.
ನಾಗಪ್ಪನವರ ಅಪಹರಣದ ನಂತರ ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಎಸ್ಟಿಎಫ್ ಕಾರ್ಯಾಚರಣೆ ನಿಲ್ಲಿಸಿದ್ದಾಗಿ ಮುಖ್ಯಮಂತ್ರಿಗಳು ಹೇಳಿದರು. ಆದರೆ, ರಾಜ್ಕುಮಾರ್ ಬಿಡುಗಡೆ ನಂತರ ಎರಡು ವರ್ಷಗಳಿಂದ ಕಾರ್ಯಾಚರಣೆ ಬಗ್ಗೆ ಅವರು ಗಂಭೀರ ಧೋರಣೆ ತಳೆಯದಿದ್ದುದು ಯಾಕೆ ಎಂದು ಪ್ರಶ್ನಿಸಿದರು.
ನಾಗಪ್ಪನವರ ಅಪಹರಣದ ನಂತರದ ಮೂರು ತಿಂಗಳು ತಣ್ಣಗಿದ್ದ ಸರ್ಕಾರ ಉಡಾಫೆಯಿಂದ ವರ್ತಿಸಿದೆ. ದೀರ್ಘ ಕಾಲ ಯೋಚಿಸಿ, ಹುನ್ನಾರ ಹೂಡಿ ವೀರಪ್ಪನ್ ನಾಗಪ್ಪನವರನ್ನು ಕೊಂದಿರುವುದಂತೂ ಸ್ಪಷ್ಟ. ಹಾಗಿದ್ದೂ ಸರ್ಕಾರ ಏನೇನೋ ಸಬೂಬು ಕೊಡುತ್ತಿದೆ. ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕು ಮುಖ್ಯಮಂತ್ರಿಗಳಿಗಿಲ್ಲ. ಅವರ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಡಿಸೆಂಬರ್ 13 ಇದಕ್ಕೆ ಮುನ್ನುಡಿ ಎಂದು ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪ ಜೋರು ದನಿಯಲ್ಲಿ ಕಿಡಿ ಕಾರಿದರು.
(ಪಿಟಿಐ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications