ಬ್ರಾಹ್ಮಣರಿಗೆ ನೆರವಾಗಲು ದೇಶಪಾಂಡೆ ಮುಂದು
ಬೆಂಗಳೂರು: ಬ್ರಾಹ್ಮಣ ಸಮೂದಾಯದಲ್ಲಿಯೂ ದುರ್ಬಲ ವರ್ಗದವರು ಹಾಗೂ ಅಸಹಾಯಕರು ಇದ್ದಾರೆ. ಅವರ ನೆರವಿಗಾಗಿ ಧಾರ್ಮಿಕ ಮುಖಂಡರು ನಿಧಿಯಾಂದನ್ನು ರೂಪಿಸಬೇಕು. ಆ ನಿಧಿಗೆ ತಾವೂ ಸಹಾಯ ಮಾಡಲು ಸಿದ್ಧವಿರುವುದಾಗಿ ಭಾರೀ ಕೈಗಾರಿಕೆ ಸಚಿವ ಆರ್. ವಿ. ದೇಶಪಾಂಡೆ ಭರವಸೆ ನೀಡಿದ್ದಾರೆ.
ಅವರು ಭಾನುವಾರ ಬಿಎನ್ವಿ ಷಷ್ಟ್ಯಬ್ದಿ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಬ್ರಾಹ್ಮಣರು ಒಗ್ಗಟ್ಟಿನಿಂದ ಇರಬೇಕು. ಆದರೆ ಅಷ್ಟು ಮಾತ್ರವಲ್ಲ, ಬೇರೆ ಬೇರೆ ಸಮುದಾಯದವರೊಂದಿಗೆ ಬೆರೆತು ಸಹಕಾರದಿಂದ ಬಾಳಬೇಕು ಎಂದು ಈ ಸಂದರ್ಭದಲ್ಲಿ ದೇಶಪಾಂಡೆ ಕರೆ ನೀಡಿದರು.
ಮಾಜಿ ಸಚಿವ ಹಾರನಹಳ್ಳಿ ರಾಮಸ್ವಾಮಿ ಕೂಡ ಬ್ರಾಹ್ಮಣ ಸಮಾಜ ಭಾರತೀಯ ಸಮಾಜದ ಒಂದು ಪ್ರಮುಖ ಅಂಗವಾಗಿದೆ. ಸಮುದಾಯ ಯಾವುದೇ ಆಗಿದ್ದರೂ ನಾವೆಲ್ಲರೂ ಭಾರತೀಯರು ಎಂಬ ಮನೋಭಾವ ಅಗತ್ಯ ಎಂಬ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಣ ಸಚಿವ ಬಿ. ಕೆ. ಚಂದ್ರಶೇಖರ್ ಷಷ್ಟ್ಯಬ್ದಿ ಆಚರಿಸಿಕೊಳ್ಳುತ್ತಿರುವ ಬಿಎನ್ವಿ ಸುಬ್ರಹ್ಮಣ್ಯ ದಂಪತಿಗಳನ್ನು ಶ್ಲಾಘಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...