ಜುಲೈ28ರಂದು ಮಂಗಳೂರಲ್ಲಿ ‘ಬ್ಯಾರಿ ಮೋಂದಿ’ ರಸ ಸಂಜೆ
ಮಂಗಳೂರು :‘ಬ್ಯಾರಿ ಮೋಂದಿ’ ಒಂದು ಅಪರೂಪದ ಕಾರ್ಯಕ್ರಮ. ಕರಾವಳಿಯಲ್ಲಿರುವ ಬ್ಯಾರಿ ಜನಾಂಗದ ಜನಪದ ಹಾಡುಗಳು, ಇತ್ತೀಚೆಗೆ ಬಿಡುಗಡೆಯಾಗಿರುವ ಕ್ಯಾಸೆಟ್ ಹಾಡುಗಳ ಸಂಗೀತ ರಸ ಸಂಜೆಯನ್ನು ಜುಲೈ 28ರಂದು ನಗರದಲ್ಲಿ ಆಯೋಜಿಸಲಾಗಿದೆ.
ಮಂಗಳೂರಿನ ಪುರಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ‘ಬ್ಯಾರಿ ಮೋಂದಿ’ ಎಂದು ಹೆಸರಿಡಲಾಗಿದೆ. ನ್ಯೂ ಮಂಗಳೂರು ಚಾನೆಲ್ನ ರೋಹಿತ್ರಾಜ್ ಹಾಗೂ ನಾಟಕದ ನಿರ್ದೇಶಕ ರಹೀಂ ಉಚ್ಚಿಲ್ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ.
ಪ್ರಸಿದ್ಧ ಬ್ಯಾರಿ ಸಾಹಿತಿಗಳು ರಚಿಸಿದ ಬ್ಯಾರಿ ಹಾಡುಗಳನ್ನು ಕಾರ್ಯಕ್ರಮದಲ್ಲಿ ಹಾಡಲಾಗುವುದು. ಸಂಗೀತ ರಸಸಂಜೆಯ ಜೊತೆಗೆ ಕುರ್ಫಾತ್ ಕಟ್ಟೆ ಎಂಬ ನಾಟಕ ಪ್ರದರ್ಶನವೂ ಇದೆ. ನಾಟಕದಲ್ಲಿ ಮಹಮದ್ ಅಲಿ ತಣ್ಣೀರುಬಾವಿ, ಅಬ್ದುರಹ್ಮಾನ್ ಕೂಳೂರು, ಇಬ್ರಾಹಿಂ ಮುಕ್ಕಚ್ಚೇರಿ, ರಹೀಂ ಉಚ್ಚಿಲ್,ವೀಣಾ ಎಂ. ಶಕ್ತಿನಗರ, ಭವ್ಯಾ, ಅಸಲ್ ಖ್ಯಾತಿಯ ಮಾಧವ ಶಕ್ತಿನಗರ ಮತ್ತಿತರರು ಭಾಗವಹಿಸುವರು.
ಸಂಜೆ ನಡೆಯುವ ಸನ್ಮಾನ ಸಮಾರಂಭದಲ್ಲಿ ಹಿರಿಯ ಬ್ಯಾರಿ ಸಾಹಿತಿ ಇಬ್ರಾಹಿಂ ತಣ್ಣೀರುಬಾವಿ ಹಾಗೂ ಪ್ರಸಿದ್ಧ ತುಳು ನಾಟಕಕಾರ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರನ್ನು ಸನ್ಮಾನಿಸಲಾಗುವುದು. ಕರ್ನಾಟಕ ಕರಾವಳಿಯಲ್ಲಿ ವಾಸಿಸುವ ಮುಸ್ಲಿಂ ಮತದವರಾದ ಬ್ಯಾರಿ ಜನಾಂಗದವರ ಸಾಹಿತ್ಯ ಬೆಳಕಿಗೆ ಬಂದಿರುವುದು ಬಹಳ ಕಡಿಮೆ. ಇತ್ತೀಚಿಗೆ ನಡೆಯುತ್ತಿರುವ ಸಾಹಿತ್ಯಿಕ ಪ್ರಯತ್ನಗಳಲ್ಲಿ ಹಾಡುಗಳ ಕ್ಯಾಸೆಟ್ಗಳು ಬಿಡುಗಡೆಯಾಗಿವೆ. ಕಥೆಗಳು ಪ್ರಕಟವಾಗಿವೆ. ಈ ಹಿನ್ನೆಲೆಯಲ್ಲಿ ಕುರ್ಫಾತ್ ಕಟ್ಟೆ ನಾಟಕ ಒಂದು ಉತ್ತಮ ಪ್ರಯೋಗವಾಗಲಿದೆ ಎಂದು ಸಂಘಟಕರು ಅಭಿಪ್ರಾಯಪಟ್ಟಿದ್ದಾರೆ.
(ಇನ್ಪೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications