ಕರ್ನಾಟಕದ ಅಮರನಾಥ ಯಾತ್ರಿಗಳಿಗೆ ನೆರವಾಗಲು ಪಾಸ್ ಸೌಲಭ್ಯ
ಮಂಗಳೂರು: ಪವಿತ್ರ ಅಮರನಾಥ ಯಾತ್ರೆ ಮಾಡಲು ಇಚ್ಛಿಸುವ ಯಾತ್ರಿಗಳಿಗೆ ಮೊದಲ ಬಾರಿಗೆ ಕರ್ನಾಟಕದಿಂದ ಪಾಸ್ ನೀಡುವ ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ ಎಂದು ಧರ್ಮಸ್ಥಳದ ಡಿ. ವಿರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಅಮರನಾಥ ಕ್ಷೇತ್ರದ ಆಡಳಿತ ಮಂಡಳಿ ಸದಸ್ಯರಾಗಿರುವ ವೀರೇಂದ್ರ ಹೆಗ್ಗಡೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಅಮರನಾಥಕ್ಕೆ ಯಾತ್ರೆ ಹೊರಡಲು ಇಚ್ಛಿಸುವವರು ಧರ್ಮ ಸ್ಥಳದಿಂದ ಪಾಸ್ಗಳನ್ನು ಪಡೆದುಕೊಳ್ಳಬಹುದು. ಜುಲೈ 22ರ ಹರ ಹುಣ್ಣಿಮೆಯಂದು ಯಾತ್ರೆ ಆರಂಭವಾಗುತ್ತದೆ. ಆಗಸ್ಟ್ 22ರ ರಕ್ಷಾ ಹುಣ್ಣಮೆಯವರೆಗೆ ಯಾತ್ರೆ ನಡೆಯಲಿದೆ. ದಿನಕ್ಕೆ ನಾಲ್ಕು ಸಾವಿರ ಯಾತ್ರಿಕರಿಗೆ ಅಮರನಾಥಕ್ಕೆ ಪ್ರವೇಶ ನೀಡುವ ಯೋಜನೆ ಕ್ಷೇತ್ರದ ಆಡಳಿತ ಮಂಡಳಿ ಮುಂದಿದೆ ಎಂದು ಹೆಗ್ಗಡೆ ಹೇಳಿದರು.
ಈಗಾಗಲೇ ಧರ್ಮ ಸ್ಥಳದಲ್ಲಿ 400 ಪಾಸ್ಗಳು ಲಭ್ಯವಿವೆ. ಇನ್ನಷ್ಟು ಪಾಸ್ಗಳು ಬೇಕಿದ್ದಲ್ಲಿ ತರಿಸಿಕೊಳ್ಳಲಾಗುವುದು. ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಜಮ್ಮು ಕಾಶ್ಮೀರ್ ಬ್ಯಾಂಕ್ ಮೂಲಕ ಅತಿ ಕಡಿಮೆ ಶುಲ್ಕದೊಂದಿಗೆ ಯಾತ್ರಾ ನೋಂದಣಿಗೆ ಅವಕಾಶವಿದೆ.
ಯಾತ್ರೆಯ ಸಂದರ್ಭದಲ್ಲಿ ಕೆಲವೆಡೆ ಭಕ್ತರಿಗೆ ಊಟ, ಚಪಾತಿ, ಚಹಾ, ಮುಂತಾದುವುಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆಯಿದೆ. ಈ ಬಗ್ಗೆ ಧರ್ಮಸ್ಥಳದಲ್ಲಿ ಸಮಗ್ರ ಮಾಹಿತಿ ಲಭ್ಯವಿದೆ. ಪಾಸ್ಗಳಿಗಾಗಿ ದೂರವಾಣಿ ಸಂಖ್ಯೆ: 08256-317144
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications