ಟಿಕೇಟು ಸಿಕ್ಕಿದ್ದರೆ ಮನೆಯಲ್ಲೇ ಕೂತಿದ್ದರೂ ಗೆದ್ದು ಬರುತ್ತಿದ್ದೆ- ಉಮಾದೇವಿ
ಬೆಂಗಳೂರು : ನನಗೇನಾದರೂ ಕಾಂಗ್ರೆಸ್ ಟಿಕೇಟು ಸಿಕ್ಕಿದ್ದರೆ, ಮನೆಯಲ್ಲಿ ಕೂತಿದ್ದರೂ ಗೆದ್ದು ಬರುತ್ತಿದ್ದೆ !
ಕಾಂಗ್ರೆಸ್ ಪಕ್ಷದ ಎಂ.ಪಿ.ಯಾಗಿದ್ದ ದಿವಂಗತ ಎಂ.ವಿ.ಚಂದ್ರಶೇಖರ ಮೂರ್ತಿ ಅವರ ಪತ್ನಿ ಉಮಾದೇವಿ ಆಡಿರುವ ಮಾತಿದು. ಅಂದಹಾಗೆ, ಟಿಕೇಟು ದಕ್ಕದ ಕಾರಣಕ್ಕೆ ಬೇಸರ ಪಟ್ಟುಕೊಂಡಿರುವ ಉಮಾದೇವಿ, ಕನಕಪುರ ಲೋಕಸಭಾ ಉಪ ಚುನಾವಣಾ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಅವರ ಪರ ಖುದ್ದು ಪ್ರಚಾರ ಮಾಡುತ್ತಿಲ್ಲ. ಹೈಕಮಾಂಡಿಗೆ ಗೌರವ ಕೊಡುವ ಸಲುವಾಗಿ ತಮ್ಮ ಪತಿಯ ಬೆಂಬಲಿಗರಿಗೆ ಪ್ರಚಾರ ಮಾಡುವಂತೆ ನಿರಾಸಕ್ತಿಯಿಂದಲೇ ಹೇಳಿ ಸುಮ್ಮನಾಗಿದ್ದಾರೆ.
ಉಮಾದೇವಿಯವರ ಹತಾಶೆಗೆ ಹಿಡಿದ ಕನ್ನಡಿ ಅವರ ಈ ಮಾತುಗಳು....
ನನ್ನ ಗಂಡ 34 ವರ್ಷಗಳಿಂದ ಈ ಕ್ಷೇತ್ರ ಪ್ರತಿನಿಧಿಸಿದವರು. ಕೆಂಗಲ್ ಹನುಮಂತಯ್ಯನವರ ಸಂಬಂಧಿಕರು ನಾವು. ಕ್ಷೇತ್ರದ ಪ್ರತಿ ಮತದಾರನಿಗೂ ನಮ್ಮ ಬಗ್ಗೆ ಗೊತ್ತು. 1999ರ ಚುನಾವಣೆಯಲ್ಲಿ ನಮ್ಮ ಯಜಮಾನರು ಪ್ರಚಾರ ಮಾಡಿದ್ದು 8 ದಿನ ಅಷ್ಟೆ. ಸಲೀಸಾಗಿ ಗೆದ್ದರು. ಈಗ ನೋಡಿ, ಗಲ್ಲಿ ಗಲ್ಲಿಗೂ ಹೋಗಿ ಮತ ಕೇಳುವ ಪರಿಸ್ಥಿತಿ.
1999ರಲ್ಲಿ ಕೂಡ ನಮ್ಮ ಯಜಮಾನರಿಗೆ ಟಿಕೇಟು ಕೊಡುವ ಬಗ್ಗೆ ಅಷ್ಟೇನೂ ಒಲವಿರಲಿಲ್ಲ. ಮುಖ್ಯಮಂತ್ರಿ ಕೃಷ್ಣ ಅವರನ್ನು ಭೇಟಿಯಾಗಿ, ಟಿಕೇಟು ಕೊಡದಿದ್ದರೆ ರಾಜ್ಯ ರಾಜಕೀಯದಿಂದ ಹೊರಗುಳಿವುದಾಗಿ ಯಜಮಾನರು ಹೇಳಿದರು. ಆದರೂ ಕೃಷ್ಣ ಇವರ ಅರ್ಜಿಯನ್ನು ಸುಮ್ಮನೆ ಇಟ್ಟುಕೊಂಡೇ ಇದ್ದರು. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ಆಸ್ಕರ್ ಫರ್ನಾಂಡಿಸ್ ಮಧ್ಯೆ ಪ್ರವೇಶಿಸಿ, ಇವರಿಗೇ ಟಿಕೇಟು ಸಿಕ್ಕುವಂತೆ ಮಾಡಿದರು.
ಅಭ್ಯರ್ಥಿ ಆಯ್ಕೆ ಬಗ್ಗೆ ಪಾರ್ಟಿ ವರ್ಕರ್ಸ್ನ ಭೇಟಿಯಾಗಲೂ ನನ್ನನ್ನು ಕರೆಯಲಿಲ್ಲ. ಪ್ರಾಯಶಃ ನಾನೇ ಕ್ಯಾಂಡಿಡೇಟ್ ಆಗಲಿ ಅಂತ ಹೇಳುತ್ತಾರೆ ಎಂಬ ಆತಂಕ ಇತ್ತೇನೋ? ಹೈಕಮಾಂಡ್ ಅವರನ್ನು ಗೌರವಿಸುತ್ತೇನೆ. ಆ ಕಾರಣಕ್ಕೆ ಸುಮ್ಮನಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಯೋಚನೆಯನ್ನೂ ಮಾಡಿದ್ದೆ. ಆಸ್ಕರ್ ಬೇಡ ಅಂದರು. ಸುಮ್ಮನಾದೆ. ಫೆಬ್ರವರಿ 24ರ ನಂತರ ಹೈಕಮಾಂಡ್ ಜೊತೆ ಮಾತಾಡುತ್ತೇನೆ. ಅವರಿಗೆ ನನ್ನ ನೋವು ಗೊತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ಕನಕಪುರವೆಂಬ ಕುರುಕ್ಷೇತ್ರ












Click it and Unblock the Notifications