ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಹೋಮ್ ಐಸೋಲೇಷನ್ ಮಾರ್ಗಸೂಚಿ
ನವದೆಹಲಿ, ಜನವರಿ 5: ಭಾರತದಲ್ಲಿ ಕೊರೊನಾವೈರಸ್ ಸೋಂಕು ಲಕ್ಷಣರಹಿತ ಹಾಗೂ ಸೌಮ್ಯ ಲಕ್ಷಣಗಳನ್ನು ಹೊಂದಿರುವ ಸೋಂಕಿತರ ಗೃಹ ದಿಗ್ಬಂಧನಕ್ಕೆ (Home Isolation) ಕೇಂದ್ರ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಈಗಾಗಲೇ 50,000ದ ಗಡಿ ದಾಟಿದೆ. ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿನ ಹರಡುವಿಕೆ ತೀವ್ರತೆಯೇ ಮೂರನೇ ಅಲೆಯು ಹೆಚ್ಚಾಗುವುದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
"ಮುಂಬೈ, ದೆಹಲಿ, ಕೋಲ್ಕತ್ತಾದಂತಹ ಮಹಾನಗರಗಳಲ್ಲಿ ಇತ್ತೀಚಿಗೆ ವರದಿ ಆಗುತ್ತಿರುವ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಶೇ.75ರಷ್ಟು ಪ್ರಕರಣಗಳು ಓಮಿಕ್ರಾನ್ ರೂಪಾಂತರಿ ಆಗಿವೆ. ಕಳೆದ ನವೆಂಬರ್ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿರುವ ಈ ಓಮಿಕ್ರಾನ್ ಸೋಂಕು ಅತಿಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ," ಎಂದು ಕೊವಿಡ್-19 ಕಾರ್ಯಪಡೆ ಮುಖ್ಯಸ್ಥ ಡಾ. ಎನ್ ಕೆ ಅರೋರಾ ಹೇಳಿದ್ದಾರೆ. ಇದರ ಬೆನ್ನಲ್ಲೇ ಕೊವಿಡ್-19 ಲಕ್ಷಣಗಳೇ ಇಲ್ಲದ ಸೋಂಕಿತರು ಹಾಗೂ ಸೌಮ್ಯ ಲಕ್ಷಣಗಳನ್ನು ಹೊಂದಿರುವ ಸೋಂಕಿತರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲು ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳಲ್ಲಿ ಯಾವೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ಮುಂದೆ ಪಟ್ಟಿ ಮಾಡಲಾಗಿದೆ.

ಗೃಹ ದಿಗ್ಬಂಧನಕ್ಕೆ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ
* ಹೋಮ್ ಐಸೋಲೇಷನ್ ಅವಧಿಯು 10 ದಿನಗಳಿಂದ 7 ದಿನಗಳಿಗೆ ಕಡಿತಗೊಳಿಸಲಾಗಿದೆ
* ಒಂದು ವೇಳೆ ಜ್ವರದ ಲಕ್ಷಣಗಳನ್ನು ಹೊಂದಿರದ ವ್ಯಕ್ತಿಯಲ್ಲಿ ಕೊರೊನಾವೈರಸ್ ಸೋಂಕು ಪತ್ತೆಯಾದ ನಂತರದ ಏಳು ದಿನಗಳವರೆಗೂ ಹೋಮ್ ಐಸೋಲೇಷನ್ ನಲ್ಲಿ ಇರಬೇಕು.
* ಹೋಮ್ ಐಸೋಲೇಷನ್ ನಲ್ಲಿರುವ ಸೋಂಕಿತನು ನಿರಂತರವಾಗಿ ಮಾಸ್ಕ್ ಧರಿಸಿರಬೇಕು.
* ಏಳು ದಿನಗಳ ಹೋಮ್ ಐಲೋಷನ್ ಅವಧಿ ಪೂರ್ಣಗೊಂಡ ನಂತರದಲ್ಲಿ ಮತ್ತೊಮ್ಮೆ ಕೊವಿಡ್-19 ಪರೀಕ್ಷೆಗೊಳಗಾಗುವ ಅಗತ್ಯವಿಲ್ಲ
* ಹೊಸ ರೂಪಾಂತರಿ ಪತ್ತೆಯಾದ ನಂತರದಲ್ಲಿ ಅದರ ತೀವ್ರತೆ ಮತ್ತು ಲಕ್ಷಣಗಳನ್ನು ತಿಳಿದುಕೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣಾ ಕೇಂದ್ರ ತಿಳಿಸಿದೆ. ಈ ಹಿನ್ನೆಲೆ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ತಗುಲಿದ ಪ್ರತಿಯೊಬ್ಬರು ಆಸ್ಪತ್ರೆಗೆ ದಾಖಲಾಗಬೇಕು.
* ಲಕ್ಷಣರಹಿತ ರೋಗಿಗಳು ಪ್ರಯೋಗಾಲಯದ ದೃಢಪಡಿಸಿದ ಪ್ರಕರಣಗಳಾಗಿದ್ದು, ಅವರು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ ಹಾಗೂ ಶೇಕಡಾ 93ಕ್ಕಿಂತ ಹೆಚ್ಚು ಆಮ್ಲಜನಕದ ಶುದ್ಧತ್ವವನ್ನು ಹೊಂದಿರುತ್ತಾರೆ.

ಸೌಮ್ಯ ಲಕ್ಷಣ ಉಳ್ಳವರಲ್ಲಿ ಶೇ.93ರಷ್ಟು ಆಮ್ಲಜನಕ ಶುದ್ಧತ್ವ
ವೈದ್ಯಕೀಯ ಪರೀಕ್ಷೆಯಲ್ಲಿ ಸೌಮ್ಯ ಲಕ್ಷಣಗಳನ್ನು ಹೊಂದಿರುವವರನ್ನೂ ಸೋಂಕಿತರು ಎಂದು ಪರಿಗಣಿಸಲಾಗುತ್ತದೆ. ಶ್ವಾಸಕೋಶ ಸಮಸ್ಯೆ, ಜ್ವರ ಹಾಗೂ ಉಸಿರಾಟ ಸಮಸ್ಯೆಯನ್ನು ಹೊಂದಿರುವ ಸೋಂಕಿತರಲ್ಲಿ ಶೇ.93ರಷ್ಟು ಆಮ್ಲಜನಕ ಶುದ್ಧತ್ವ ಇರುತ್ತದೆ. ಕಳೆದ ಎರಡು ವರ್ಷಗಳಲ್ಲಿ ಭಾರತ ಸೇರಿದಂತೆ ಜಗತ್ತಿನ ಬಹುಪಾಲು ರಾಷ್ಟ್ರಗಳಲ್ಲಿ ಕೊವಿಡ್-19 ಸೋಂಕಿತರು ಲಕ್ಷಣರಹಿತರು ಹಾಗೂ ಸೌಮ್ಯ ಲಕ್ಷಣಗಳನ್ನು ಹೊಂದಿರುವವರೇ ಆಗಿದ್ದಾರೆ.

ದೇಶದಲ್ಲಿ ಒಂದೇ ದಿನ 58,000ಕ್ಕೂ ಹೆಚ್ಚು ಮಂದಿಗೆ ಕೊವಿಡ್-19
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ನಡುವೆ ಭಾರತದಲ್ಲಿ ಒಂದೇ ದಿನ 58,000ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 58,097 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 534 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 15,389 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಈವರೆಗೂ 3,43,21,803 ಸೋಂಕಿತರು ಗುಣಮುಖರಾಗಿದ್ದರೆ, 4,82,551 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 2,14,004 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಮೆಟ್ರೋ ಸಿಟಿಗಳಲ್ಲಿ ಹೆಚ್ಚಿದ ಓಮಿಕ್ರಾನ್ ಭೀತಿ
"ಭಾರತದ ಮಟ್ಟಿಗೆ ಹೇಳುವುದಾದರೆ ಮೆಟ್ರೋ ಸಿಟಿಗಳಲ್ಲಿ ಅತಿಹೆಚ್ಚು ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗುತ್ತಿದೆ. ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ನಗರಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ನವದೆಹಲಿಯಲ್ಲಿ ಪತ್ತೆಯಾಗುವ ಒಟ್ಟು ಪ್ರಕರಣಗಳ ಪೈಕಿ ಶೇ.75ರಷ್ಟು ಜನರಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದ್ದು, ಎಲ್ಲರನ್ನೂ ಐಸೋಲೇಟ್ ಮಾಡಲಾಗಿದೆ," ಎಂದು ಡಾ. ಎನ್ ಕೆ ಅರೋರಾ ತಿಳಿಸಿದ್ದಾರೆ.












Click it and Unblock the Notifications