ನಾಗಪ್ಪನ ಹಿನ್ನೆಲೆಯೂ, ರಾಜ್ ಬಿಡುಗಡೆಯ ಮುನ್ನೋಟವೂ....
ಬೆಂಗಳೂರು : ರಾಜ್ ಸೇರಿದಂತೆ ನಾಲ್ವರನ್ನು ವೀರಪ್ಪನ್ ಅಪಹರಿಸಿದ್ದಾನೆ ಎನ್ನುವ ಸುದ್ದಿ ಹೊರಬಿದ್ದಾಗ ಅನೇಕರು ಕೇಳಿಕೊಂಡ ಪ್ರಶ್ನೆ ಇದೇನೆ. ಈತ ರಾಜ್ ನೆಂಟನೇ ಅಥವಾ ಆಪ್ತನೇ?
ಧಾರವಾಡ ಜಿಲ್ಲೆಯ ಕಾರಡಗಿ ಎಂಬ ಹಳ್ಳಿಯ ನಾಗಪ್ಪ ಚಿಕ್ಕಂದಿನಿಂದ ರಾಜ್ ಭಕ್ತ. ಒಂದಲ್ಲ ಒಂದು ದಿನ ನಾನು ರಾಜ್ಕುಮಾರ್ ಜೊತೆ ಕೆಲಸ ಮಾಡಿಯೇ ಮಾಡುತ್ತೇನೆ ಎಂಬ ಕನಸನ್ನು ಕಟ್ಟಿಕೊಂಡವ. 14 ವರ್ಷಗಳ ಹಿಂದೆ ಅದು ಈಡೇರಿತು. ರಾಜ್ಕುಮಾರ್ ತಮ್ಮ ಗೋದಾಮಿನ ಉಸ್ತುವಾರಿ ನೋಡಿಕೊಳ್ಳಲು ಈತನನ್ನು ನೇಮಿಸಿಕೊಂಡರು. ಈತನ ಒಳ್ಳೆತನ ರಾಜ್ ಮನಸ್ಸನ್ನು ಗೆದ್ದಿತು. ಬೆಂಗಳೂರಿನಲ್ಲಿ ಈತನಿಗೆ ಮದುವೆ ಮಾಡಿಸಿ, ಗಾಜನೂರಿನಲ್ಲಿ ನೆಲೆಯೂರುವಂತೆ ಮಾಡಿದರು. ಈಗ ಈತ ರಾಜ್ಕುಮಾರ್ ತಂಡದಲ್ಲಿ ಸಹ ನಿರ್ದೇಶಕ. ಈತನ ತಮ್ಮ ಮಲ್ಲಿಕಾರ್ಜುನ ಕೂಡ ರಾಜ್ ತಂಡದಲ್ಲಿ ಕೆಲಸ ಮಾಡುತ್ತಿದ್ದಾನೆ.
ವೀರಪ್ಪನ್ ಕೈಗೆ ಸಿಕ್ಕವರನ್ನೆಲ್ಲಾ ಅಪಹರಿಸಿಲ್ಲ. ಯಾರ್ಯಾರನ್ನು ಒತ್ತೆಯಲ್ಲಿ ಇಟ್ಟುಕೊಳ್ಳಬೇಕೋ ಅವರನ್ನು ಎಚ್ಚರಿಕೆಯಿಂದ ಆರಿಸಿಕೊಂಡಿದ್ದಾನೆ. ವೀರಪ್ಪನ್ ಪಟ್ಟಿಯಲ್ಲಿ ನಾಗಪ್ಪ ಇರಲಿಲ್ಲ. ಆದರೆ, ರಾಜ್ ವೀರಪ್ಪನ್ ಹಿಂದೆ ಕಾಡಿಗೆ ಹೊರಟ ಮೇಲೆ ತಾನು ಊರಿನಲ್ಲಿರುವುದು ಸಾಧ್ಯವೇ ಎಂದು ರಾಜ್ ಪರಮಭಕ್ತರಾದ ನಾಗಪ್ಪ ಸ್ವತಃ ಅಣ್ಣಾವ್ರ ಹಿಂದೆ ಹೋದವರು. ಆದರೆ, ಈ ಹೊತ್ತು ರಾಜ್ ಅವರನ್ನು ಕಾಡಿನಲ್ಲಿಯೇ ಬಿಟ್ಟು ನಾಡಿಗೆ ಓಡಿ ಬಂದ ನಾಗಪ್ಪ ಅವರಿಗೆ ವನವಾಸ ಸಾಕಾಯಿತೇ? ಜೀವಭಯ ಬಂತೆ ? ವೀರಪ್ಪನ್ ಸಹಚರರು ಮಲಗಿದ್ದ ಸಮಯ ಕಾದು ಊರಿನತ್ತ ಓಟ ಕಿತ್ತ ನಾಗಪ್ಪ ಬಹುಮುಖ್ಯವಾದ ವಿಚಾರ ಹೊತ್ತು ನಾಡಿಗೆ ಬಂದಿರಬಹುದೇ ? ಇರಲಿ . ಪೂರ್ಣ ವರದಿಗೆ ಕಾಯೋಣ.
ವನವಾಸ ಸಾಕಾಯಿತೇ ? ರಾಜ್ ಹಿಂದೆ ಸ್ವಯಂ ಪ್ರೇರಿತರಾಗಿ ಹೊರಟ ನಾಗಪ್ಪನಿಗೆ ಖಂಡಿತಾ ಇಷ್ಟು ದಿನ ವೀರಪ್ಪನ್ ವಶದಲ್ಲಿರ ಬೇಕಾಗುತ್ತದೆ ಎಂಬ ಅರಿವಿರಲಿಲ್ಲವೇನೋ. ಒಂದೆರಡು ದಿನದಲ್ಲೇ ಬಿಡುಗಡೆಯಾಗಬಹುದು ಎಂದು ಅವರು ಆಗ ಎಣಿಸಿರಲೂ ಸಾಕು. ಈ ಮಧ್ಯೆ ನಾಗಪ್ಪ ಅವರನ್ನು ಕನ್ನಡ ಚಿತ್ರ ರಂಗ ಸಂಭ್ರಮದಿಂದಂತೂ ಸ್ವಾಗತಿಸುವುದಿಲ್ಲ. ಅವರು ಓಡಿ ಬಂದಿರುವುದರಿಂದ ರಾಜ್ ಬಿಡುಗಡೆ ಮೇಲೆ ವ್ಯತಿರಿಕ್ತ ಪರಿಣಾಮ ಆದೀತೆಂಬ ಪರಿವೆ ಅವನಿಗಿಲ್ಲವೇ ಎನ್ನುತ್ತಿದ್ದಾರೆ ಕನ್ನಡ ಚಿತ್ರೋದ್ಯಮದ ಮಂದಿ.
ನಾಗಪ್ಪ ಕಣ್ಮರೆಯಾದಾಗಿನಿಂದ ಅವರ, ತಂದೆ ರುದ್ರಪ್ಪ, ತಾಯಿ ಮಾಳವ್ವ ಹಾಗೂ ನಾಲ್ವರು ಸಹೋದರಿಯರು ಕಂಗಾಲಾಗಿದ್ದರು. 65 ವರ್ಷದ ರುದ್ರಪ್ಪ ತಮ್ಮ ಮಗನನ್ನು ಬಿಡಿಸುವಂತೆ ಪೊಲೀಸರಿಗೆ ದೂರು ಕೊಟ್ಟಿದ್ದರು. ಧಾರವಾಡ ಜಿಲ್ಲಾಧಿಕಾರಿ ವಂದನಾ ಗುರ್ನಾನಿ ಅವರಲ್ಲೂ ತಮ್ಮ ಅಳಲು ತೋಡಿಕೊಂಡಿದ್ದರು. ವೀರಪ್ಪನ್ ಬೇಕಾದ್ರೆ ನನ್ನ ಜೀವ ತಗೊಳ್ಲಿ, ನನ್ನ ಮಗನ್ನ ಮತ್ತೆ ಅಣ್ಣಾವ್ರನ್ನ ಬಿಟ್ಟು ಬಿಡಲಿ ಎಂಬುದು ರುದ್ರಪ್ಪನವರ ಮೊರೆಯಾಗಿತ್ತು. ನಾಗಪ್ಪನ ಮತ್ತೊಬ್ಬ ಅಂಗವಿಕಲ ತಮ್ಮ ರಾಜ್ಕುಮಾರ್ ತಂಡದಲ್ಲಿ ಕೆಲಸಕ್ಕೆ ಸೇರುವ ಆಸೆ ಹೊತ್ತು
ಶನಿವಾರವಷ್ಟೇ ಬೆಂಗಳೂರಿಗೆ ಹೋಗಿದ್ದ ಎಂದು ರುದ್ರಪ್ಪ ಕಣ್ಣೀರಿಡುತ್ತಾ ಅಂದು ಹೇಳಿದ್ದರು. ಭಗವಂತ ತಮ್ಮ ಮಗ ಹಾಗೂ ರಾಜ್ ಅವರನ್ನು ಬೇಗ ಬಿಡುವ ಬುದ್ಧಿಯನ್ನು ವೀರಪ್ಪನ್ಗೆ ಕೊಡಲಿ ಎಂದು ರುದ್ರಪ್ಪ ದಂಪತಿಗಳು ಕಂಡ ಕಂಡ ದೇವರಿಗೆಲ್ಲಾ ಮೊರೆ ಇಟ್ಟಿದ್ದರು.












Click it and Unblock the Notifications