ಬೆಂಗಳೂರಿನಲ್ಲಿ ಭೂಕಂಪ ಆಗಿದ್ದಿದ್ದರೆ ಈ ಸನ್ಮಾನ ನಡೆಯುತ್ತಿರಲಿಲ್ಲ
ಬೆಂಗಳೂರು : ಮೃದಂಗ ವಾದಕ, ಡಾ. ಟಿ.ಕೆ. ಮೂರ್ತಿ, ನೃತ್ಯ ಕಲಾವಿದ ಕೆ. ಮುರಳೀಧರ ರಾವ್ ಮತ್ತು ನಾಟಕಕಾರ ಎಚ್. ಎನ್. ಹೂಗಾರ ಅವರಿಗೆ ಕ್ರಮವಾಗಿ ಈ ಸಾಲಿನ ಪಿಟೀಲು ಚೌಡಯ್ಯ, ಶಾಂತಲಾ ನಾಟ್ಯ, ಹಾಗೂ ಗುಬ್ಬಿ ವೀರಣ್ಣ ಪ್ರಶಸ್ತಿಗಳನ್ನು ಮಂಗಳವಾರ ಪ್ರದಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಇಲಾಖೆ ಸಚಿವೆ ರಾಣಿ ಸತೀಶ್ ಪ್ರಶಸ್ತಿ ವಿತರಿಸಿದರು. ಸಮಾರಂಭ ತೀರಾ ಸರಳವಾಗಿತ್ತು. ಕಾರ್ಯಕ್ರಮ ಆರಂಭಕ್ಕೆ ಮುನ್ನ -- ಪ್ರಶಸ್ತಿ ವಿತರಣಾ ಸಮಾರಂಭ ಅದ್ದೂರಿಯಾಗಿರಬೇಕಿತ್ತು. ಗಣ್ಯ ಸಚಿವರು ಭಾಗವಹಿಸಬೇಕಿತ್ತು ಎಂಬ ಆಕ್ಷೇಪಣೆ, ವಿರೋಧಗಳು ಕೇಳಿಬಂದದ್ದು ಸಮಾರಂಭದ ವಿಶೇಷ.
ನೆರೆ ರಾಜ್ಯ ಭೂಕಂಪ ದಿಂದ ತತ್ತರಿಸುವಾಗ ಅದ್ದೂರಿಯ ಅಗತ್ಯವಿಲ್ಲ ಎಂಬುದು ಆಕ್ಷೇಪಣೆ ಎತ್ತಿದವರಿಗೆ ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್ ಅವರ ಸಮಾಧಾನ. ಮುಖ್ಯ ಮಂತ್ರಿಗಳು ಈ ಸಮಾರಂಭದಲ್ಲಿ ಅನಿವಾರ್ಯ ಕಾರಣಗಳಿಂದ ಭಾಗವಹಿಸುತ್ತಿಲ್ಲ ಎಂದು ಸಚಿವೆ ಹೇಳಿದರು.
ಅಮರೇಶ್ ನುಗಡೋಣಿಗೆ ಕಾವ್ಯಾನಂದ ಪ್ರಶಸ್ತಿ : ಶನಿವಾರ, ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಕತೆಗಾರ ಅಮರೇಶ್ ನುಗಡೋಣಿ ಅವರಿಗೆ ಈ ಸಾಲಿನ ಕಾವ್ಯಾನಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ನೀಡಿದ ಈ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ವಿತರಿಸಿದರು. ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಶೇಷನಾರಾಯಣ್ಗೆ ತಮಿಳು ಪುರಸ್ಕಾರ: ಕನ್ನಡದ ಸಣ್ಣ ಕತೆಗಾರ ಮತ್ತು ಕಾದಂಬರಿಕಾರ ಶೇಷನಾರಾಯಣ್ ಅವರಿಗೆ (74) ತಮಿಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ತಮಿಳು ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿರುವುದನ್ನು ಗುರುತಿಸಿ, ಅನುವಾದ ಸಾಹಿತ್ಯ ಪ್ರಶಸ್ತಿಯನ್ನು ಮುಖ್ಯಮಂತ್ರಿ ಎಂ. ಕರುಣಾ ನಿಧಿ ಇತ್ತೀಚೆಗೆ ಚೆನ್ನೈನಲ್ಲಿ ನೀಡಿರು.
(ಇನ್ಫೋ ವಾರ್ತೆ)