ಅಂತರಂಗದ ಅರಿವು ಬಹಿರಂಗದ ಕ್ರಿಯೆಯಾಗದ ಈ ದಿನಗಳಲ್ಲಿ
ಇದರ ಹಿಂದಿರುವ ಮೂರು ಕಾರಣಗಳನ್ನು ಹೇಳುವುದಾದರೆ....
ಮೊದಲನೆಯದಾಗಿ ನಮ್ಮ ಆದ್ಯತೆಗಳು ಬದಲಾಗಿವೆ. ಸಂಘಜೀವನಕ್ಕಿಂತ, ಕುಟುಂಬ ಜೀವನಕ್ಕಿಂತ ವ್ಯಕ್ತಿಗತ ಬದುಕು ಮುಖ್ಯವಾಗುತ್ತಿದೆ. ಒಂದು ಕಾಲಕ್ಕೆ ನಾವು ಹೀರೋಗಳನ್ನು ಮೆಚ್ಚುತ್ತಿದ್ದೆವು. ಅವರ ಸಾಧನೆಗಳಲ್ಲಿ ನಮ್ಮನ್ನು ಕಾಣುವ ಪ್ರಯತ್ನವನ್ನು ಮಾಡುತ್ತಿದ್ದೆವು. ಈಗ ಪ್ರತಿಯಾಬ್ಬನಿಗೂ ನಾಯಕನಾಗುವ ಚಪಲ. ಎಲ್ಲರೂ ನಾಯಕರೇ ಆದರೆ ಪ್ರೇಕ್ಷಕರು ಯಾರು ಎಂಬ ಹಳೆಯ ಪ್ರಶ್ನೆ ಇವತ್ತು ಯಾರಿಗೂ ಬೇಕಾಗಿಲ್ಲ. ಈ ಚಾಳಿಯನ್ನು ನಮಗೆ ಕಲಿಸಿದ್ದು ನಮ್ಮನ್ನು ಅತಿ ಕ್ರಮಿಸಿರುವ ಪರಕೀಯ ಸಂಸ್ಕೃತಿ. ಇವತ್ತು ರೇಮಂಡ್ಸ್ ಬಟ್ಟೆ ತೊಟ್ಟವನು ಕಂಪ್ಲೀಟ್ ಮ್ಯಾನ್ ! ಇನ್ನಾವುದೋ ಶೂ ತೊಟ್ಟವನು ರಿಯಲ್ ಹೀರೋ ! ಒಪೆಲ್ ಅಸ್ಟ್ರಾ ಕಾರು ಕೊಂಡರೆ ಆತನಿಗೆ ಸರಿಸಾಟಿಯೇ ಇಲ್ಲ ! ಕೊಳ್ಳು ಬಾಕ ಸಂಸ್ಕೃತಿ ಹೇಗೆ ನಮ್ಮ ಮನಸ್ಸುಗಳನ್ನು ನಿಧಾನವಾಗಿ ಘಾಸಿಗೊಳಿಸುತ್ತದೆ ಅನ್ನುವುದಕ್ಕಿದು ಸಾಕ್ಷಿ.
ನಮ್ಮ ಗುರಿಗಳು ಬದಲಾಗಿರುವುದು ಎರಡನೆಯ ಕಾರಣ. ಅಗತ್ಯವಿದ್ದಾಗಷ್ಟೇ ಮಾತಿಗಿಳಿ. ಹರಟೆ ಬೇಕಾಗಿಲ್ಲ. ಗೆಳೆಯರ ಜೊತೆ, ಮನೆಮಂದಿಯ ಜೊತೆ ವಿರಾಮವಾಗಿ ಕೂತು ಹರಟುವುದು ಲೊಳಲೊಟ್ಟೆ . ಹೆಂಡತಿ ಮಕ್ಕಳನ್ನೂ ಅಪಾಯಿಂಟ್ಮೆಟ್ ಇಲ್ಲದೆ ನೋಡಬೇಡ ಎನ್ನುವುದನ್ನೆಲ್ಲಾ ನಾವು ಕಲಿತಾಗಿದೆ. ಇದನ್ನು ಮಧ್ಯಮ ವರ್ಗವೇ ಎಲ್ಲರಿಗಿಂತ ಹೆಚ್ಚಾಗಿ ಅಳವಡಿಸಿಕೊಂಡಂತಿದೆ. ಕಂಕುಳಲ್ಲಿ ಮಗುವನ್ನೆತ್ತಿಕೊಂಡು ಮಲ್ಲೇಶ್ವರಂ ಮಾರ್ಕೆಟ್ನಲ್ಲಿ ಚೌಕಾಸಿ ಮಾಡುತ್ತಾ ಅಡ್ಡಾಡುತ್ತಿದ್ದ ಹೆಣ್ಣು ಇವತ್ತು ಫುಡ್ವರ್ಲ್ಡ್ನೊಳಗೆ ಮಗುವನ್ನು ತಳ್ಳುಗಾಡಿಯಲ್ಲಿ ಕೂರಿಸಿ ಸಾಮಾನು ಖರೀದಿಸುತ್ತಾಳೆ. ಸಂಜೆ ಗೆಳೆಯರೊಂದಿಗೆ ಕಂಡ ಕಂಡ ಬಾರ್ಗೆ ನುಗ್ಗುತ್ತಿದ್ದ ಸರಳ ಸಂಪ್ರದಾಯಸ್ಥನಿಗೆ ಇವತ್ತು ಕ್ಲಬ್ಗಳೋ, ಕ್ಯಾಸಿನೋಗಳೋ ಜೊತೆಯಾಗಿವೆ. ರಾಜ್ಕುಮಾರ್ ಸಿನಿಮಾ ನೋಡಿ ಸುಖಪಡುತ್ತಿದ್ದ ದಿನಗಳು ಮರೆಯಾಗಿ, ಮನೆಯಲ್ಲೇ ಕೂತು ವಿದೇಶದಿಂದ ತರಿಸಿದ ವಿಸಿಡಿಯಲ್ಲಿ ಗ್ಲಾಡಿಯೇಟರ್ ಸಿನಿಮಾ ನೋಡುವುದು ಸುಖವೆನಿಸುತ್ತದೆ. ಬಿಟಿಎಸ್ ಬಸ್ಸಿಗೆ ಕಾದು, ಸಹ ಪ್ರಯಾಣಿಕನ ಜೊತೆ ಎರಡು ಮಾತಾಡಿ ಆಫೀಸು-ಮನೆ ಸೇರುತ್ತಿದ್ದ ಸದ್ಗೃಹಸ್ತನ ಬಳಿ, ಎಡಗೈ ತಿರುವಿದರೆ ಸಾಕು ಮನೆ ತಲುಪಿಸುವ ಮೋಟಾರ್ ಬೈಕಿದೆ.
ಇವೆರಡಕ್ಕಿಂತ ಮುಖ್ಯವಾಗಿ ನಮ್ಮ ಆನಂದಗಳು ಬೇರೆಯಾಗಿವೆ. ಮೆಚ್ಚುಗೆ ವೈಯಕ್ತಿಕ ನೆಲೆಯಿಂದ ಸಾರ್ವಜನಿಕರ ಬಲೆಗೆ ಬಂದು ಬಿದ್ದಿವೆ. ಐ ವಾಂಟ್ ಟು ಗೋ ವಿದ್ ದಿ ಆಡಿಯನ್ಸ್... ಅನ್ನುವ ಮಾತನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ಇವತ್ತು ಎಲ್ಲವನ್ನೂ ಪಬ್ಲಿಕ್ ಒಪಿನಿಯನ್ ನಿರ್ಧರಿಸುತ್ತದೆ. ಹೀಗಾಗಿ ಎಲ್ಲರಿಗೂ ಅಚ್ಚುಮಚ್ಚಾಗಿರುವ ಸಂಗತಿಗಳೇ ವ್ಯಕ್ತಿಗೆ ಇಷ್ಟವಾಗುತ್ತಿವೆ.