ಅಧರ್ಮದ ಹಾದಿ ಹಿಡಿದವನು ಎಂದೂ ಗುರಿ ತಲುಪಲಾರ: ಏಕೆ ಗೊತ್ತಾ?
ಮಗುವಿಗೆ ಜನ್ಮನೀಡುವ ತಾಯಿ ಅದನ್ನು ಲಾಲನೆ, ಪೋಷಣೆ ಮಾಡಿ ಬೆಳೆಸುತ್ತಾಳೆ. ಹೀಗೆ ಹೆತ್ತವರ ಆರೈಕೆಯಲ್ಲಿ ಬೆಳೆಯುವ ಮಗು ಅವರ ಆಚಾರ, ವಿಚಾರ, ನಡೆ, ನುಡಿಯನ್ನು ಅನುಕರಣೆ ಮಾಡುತ್ತದೆ. ತದ ನಂತರ ಸುತ್ತಲಿನ ಪರಿಸರ, ಬೆಳೆಯುತ್ತಿರುವ ವಾತಾವರಣ ಎಲ್ಲವೂ ಅದರ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಪ್ರೌಢಾವಸ್ಥೆಗೆ ಕಾಲಿಟ್ಟಾಗ ಅಥವಾ ಒಬ್ಬ ವ್ಯಕ್ತಿಯಾಗಿ ಬೆಳೆದು ನಂತರದ ಬದುಕನ್ನು ಸಾಗಿಸುವಾಗ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವರ ಮುಂದಿನ ಜೀವನ ರೂಪಿತವಾಗುತ್ತದೆ.
ಬಹಳಷ್ಟು ಸಲ ಬಾಲ್ಯದಿಂದಲೇ ಧರ್ಮದ ಬಗ್ಗೆ ಅರಿತು ಸುಸಂಸ್ಕೃತ ಮನೆತನದಲ್ಲಿಯೇ ಬೆಳೆದಿದ್ದರೂ ಕೆಲವೊಮ್ಮೆ ಸಹವಾಸ ದೋಷದಿಂದಲೋ ಏನೋ ಅಧರ್ಮದ ಹಾದಿ ಹಿಡಿಯಬಹುದು. ನಂತರ ಮನವರಿಕೆಯಾಗಿ ತಾನು ಮಾಡಿದ್ದು ತಪ್ಪು ಎಂಬುದು ಅರಿವಾದಾಗ ಅದನ್ನು ದೂರ ತಳ್ಳಿ ಸನ್ಮಾರ್ಗದತ್ತ ಸಾಗಲೂ ಬಹುದು. ಹಲವು ಜನರ ವಿಚಾರಗಳಲ್ಲಿ ಇದು ಸುಳ್ಳಾಗಿದ್ದು ಇದೆ. ಒಮ್ಮೆ ಅಧರ್ಮದ ಹಾದಿ ಹಿಡಿದವನು ಅದರ ಹಿಡಿತದಿಂದ ಅಷ್ಟು ಸುಲಭವಾಗಿ ಹೊರ ಬರಲಾರ ಎಂಬುದು ಅಷ್ಟೇ ಸತ್ಯ.

ಏಕೆಂದರೆ ಅದು ನೀಡುವ ಸುಖ ಮತ್ತೆ, ಮತ್ತೆ ಅತ್ತ ಸೆಳೆಯುವಂತೆ ಮಾಡುತ್ತದೆ. ಆದರೆ ಅದು ಹೆಚ್ಚು ದಿನ ಉಳಿಯದ, ಬದುಕನ್ನೇ ನಾಶಗೊಳಿಸುವ ಸುಖ ಎಂಬುದು ಆ ಕ್ಷಣಕ್ಕೆ ನಮಗೆ ತಿಳಿಯಲಾರದು. ಹಾಗೆ ತಿಳಿಯುವ ವೇಳೆಗೆ ಬದುಕು ಸರ್ವ ನಾಶದ ಅಂಚಿಗೆ ಬಂದು ತಲುಪಿರುತ್ತದೆ. ಮತ್ತೆ ಸನ್ಮಾರ್ಗದಲ್ಲಿ ಆತ ನಡೆದರೂ ಸಮಾಜ ಅವನನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಆತ ಜೀವಂತವಾಗಿದ್ದರೂ ಸತ್ತಂತೆ ಬದುಕ ಬೇಕಾಗುತ್ತದೆ.
ದುರ್ಮಾರ್ಗದ ಹಾದಿ ದಡ ಸೇರಿಸಲಾರದು
ಹಾಗೆ ನೋಡಿದರೆ ಪ್ರತಿ ವ್ಯಕ್ತಿಯೂ ಏಳು-ಬೀಳುಗಳನ್ನು ಬದುಕಿನಲ್ಲಿ ಕಂಡಿರುತ್ತಾನೆ. ಧರ್ಮದ ಹಾದಿಯಲ್ಲಿ ಹೊರಟವನಿಗೆ ತಕ್ಷಣಕ್ಕೆ ಜಯವಾಗಲೀ, ಸುಖವಾಗಲೀ ಸಿಗಲಾರದು. ಆದರೆ ನೆಮ್ಮದಿಗೆ ಎಂದೂ ಕೊರತೆ ಬಾರದು. ಬಹಳಷ್ಟು ಮಂದಿ ಸುತ್ತಲಿನವರು ಏಳಿಗೆಯಾದ ಬಗ್ಗೆ ತಮ್ಮಲ್ಲಿಯೇ ಹೀಗಳೆದುಕೊಳ್ಳುತ್ತಾರೆ. ನಾನೇನು ಮಾಡಿದ್ದೇನೆ? ಧರ್ಮದ ಹಾದಿ ಹಿಡಿದು ನಾನು ಸಾಧಿಸಿದ್ದೇನು? ಹೀಗೆ ಸಮಯ ಸಿಕ್ಕಾಗ ತಮ್ಮಷ್ಟಕ್ಕೆ ತಾವೇ ಅಂದುಕೊಳ್ಳುತ್ತಾರೆ.
ತಮ್ಮ ಬದುಕಿನಾವಧಿಯಲ್ಲಿ ಏನು ಸಂಪಾದಿಸಿದ್ದೇವೆ ಎನ್ನುವುದು ಮುಖ್ಯವಲ್ಲ. ಹೇಗೆ ಬದುಕಿದ್ದೇವೆ ಎನ್ನುವುದೇ ಮುಖ್ಯವಾಗಿರುತ್ತದೆ. ಅನೈತಿಕ ಮಾರ್ಗದಿಂದ ಗಳಿಸಿದ ಸಂಪತ್ತಿಗೆ ಕ್ರಮೇಣ ದೊಡ್ಡ ಮೊತ್ತದ ಕಂದಾಯ ಕಟ್ಟಬೇಕಾಗಬಹುದು ಎಂಬುದನ್ನು ನಾವು ಮರೆಯಬಾರದು. ಸತ್ಯಮೇವ ಜಯತೇ ಎಂಬ ವಾಕ್ಯದ ಪರಿಪಾಲನೆಯಲ್ಲಿ ನಡೆದರೆ ಶೀಘ್ರವಾಗಿ ಪ್ರಾಪ್ತಿ ದೊರೆಯದಿದ್ದರೂ, ಮಂದಗತಿಯ ಬರಡು ಬದುಕು ಸಿಕ್ಕರೂ ಆತ್ಮ ಸಂತೋಷ ಸದಾ ಉಳಿದಿರುತ್ತದೆ.
ಸನ್ಮಾರ್ಗದ ಹಾದಿಯಿಂದ ಪಡೆಯಬೇಕು
ದುರ್ಮಾರ್ಗದಲ್ಲಿ ಹೊರಟವನಿಗೆ ಹೊರಗಿನ ಬೆಡಗಿನ ಪ್ರಪಂಚದ ಎಲ್ಲ ಸುಖಗಳು ದೊರೆತರೂ ಅಂತರಂಗದ ಅತೃಪ್ತಿ ಸದಾ ತಾಂಡವವಾಡುತ್ತಿರುತ್ತದೆ. ಹೀಗಾಗಿ ಮನಃಶಾಂತಿಯಿಲ್ಲದೆ, ಕೊರಗಿನಲ್ಲಿಯೇ ದಿನ ಕಳೆಯಬೇಕಾಗುತ್ತದೆ. ಅಥವಾ ಎಲ್ಲದಕ್ಕೂ ಕಂದಾಯ ಕಟ್ಟಬೇಕಾದ ಕಾಲ ಬಂದರೂ ಬರಬಹುದು.
ನಾವು ಹಿಡಿದ ಮಾರ್ಗ ಸನ್ಮಾರ್ಗದಾಗಿದ್ದು, ಅದರಿಂದಲೇ ಸಾಧಿಸಬೇಕು. ಸಾಧಿಸಿದ್ದು, ಅದು ವಿದ್ಯೆಯೂ ಅಥವಾ ಇನ್ಯಾವುದೋ ಆಗಿರಲಿ ಅದನ್ನು ತುಂಬಾ ಜಾಗ್ರತೆಯಿಂದ ರಕ್ಷಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಹೆಚ್ಚು ಕಾಲ ನಮ್ಮೊಂದಿಗಿದ್ದು, ನಮ್ಮನ್ನು ಕಾಪಾಡುತ್ತವೆ. ಇಲ್ಲಾಂದ್ರೆ ಸಾಧನೆ, ಯಶಸ್ಸು, ಶ್ರೇಯಸ್ಸು, ಹಣ, ಸಂಪತ್ತು, ಎಲ್ಲವೂ ನಮ್ಮಿಂದ ನಿರ್ಗಮಿಸಲು ಹೆಚ್ಚು ಕಾಲವಿರಲಾರದು.
ಆ ತಪ್ಪು ಕಲ್ಪನೆ ದೂರ ಮಾಡಿ
ಇವತ್ತು ಬಹಳಷ್ಟು ಜನರಲ್ಲೊಂದು ತಪ್ಪು ಕಲ್ಪನೆಯಿದೆ. ಅದು ಏನೆಂದರೆ ಹಣವಿದ್ದರೆ ಅಧಿಕಾರ ಬರುತ್ತದೆ. ಅಧಿಕಾರವಿದ್ದರೆ ಎಲ್ಲವನ್ನು ನಾವಂದುಕೊಂಡಂತೆ ಪಡೆದುಕೊಳ್ಳಬಹುದು ಎಂಬುದಾಗಿದೆ. ಹೀಗಾಗಿ ಹಣ ಸಂಪಾದನೆಯತ್ತ ಗಮನಹರಿಸುತ್ತಾರೆ. ಹಣವನ್ನು ಎರಡು ಮಾರ್ಗಗಳಲ್ಲಿ ಗಳಿಸಬಹುದಾಗಿದ್ದು, ಒಂದು ಸನ್ಮಾರ್ಗ ಮತ್ತೊಂದು ದುರ್ಮಾರ್ಗ. ಇದೆರಡರಲ್ಲೂ ಹಣ ಬರುತ್ತದೆ.
ದರ್ಮಾರ್ಗದಲ್ಲಿ ಎಲ್ಲವೂ ತುಸು ಬೇಗವೇ ಎಲ್ಲವೂ ಸಿಗಬಹುದು. ಆದರೆ ಅದು ಯಾವಾಗ ಬೇಕಾದರೂ ಕೈಬಿಟ್ಟು ಹೋಗಬಹುದು. ಅಷ್ಟೇ ಅಲ್ಲದೆ, ಹೋಗುವಾಗ ನಮ್ಮ ಮಾನ, ಮರ್ಯಾದೆ, ಘನತೆ ಗೌರವವನ್ನು ಕಳೆದುಕೊಂಡು ಹೋಗಬಹುದು. ಹೀಗಾಗಿಯೇ ಹಿರಿಯರು ಸನ್ಮಾರ್ಗದಲ್ಲಿ ನಡೆಯುವಂತೆ ಉಪದೇಶ ಮಾಡುತ್ತಾ ಬಂದಿದ್ದಾರೆ. ಅದನ್ನು ಅರಿತು ನಡೆದರೆ ನೆಮ್ಮದಿಯುತ ಜೀವನ ಸಾಗಿಸಲು ಅನುಕೂಲವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications