ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿಗಳ ನೇಮಕ
ಬಳ್ಳಾರಿ, ಆಗಸ್ಟ್ 31; "ಪಶುಸಂಗೋಪನಾ ಇಲಾಖೆಯಲ್ಲಿ ಶೇ 50ರಷ್ಟು ಹುದ್ದೆಗಳು ಖಾಲಿ ಇದ್ದು,ಅವುಗಳ ಭರ್ತಿಗೆ ಶೀಘ್ರ ಕ್ರಮವನ್ನು ಕೈಗೊಳ್ಳಲಾಗುತ್ತದೆ" ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
ಮಂಗಳವಾರ ಬಳ್ಳಾರಿ ನಗರದ ಮುನಿಸಿಪಾಲಿಟಿ ಮೈದಾನದ ಒಳಕ್ರೀಡಾಂಗಣ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಸಚಿವರು ಮಾಧ್ಯಮಗಳ ಜೊತೆ ಮಾತನಾಡಿದರು.
"ಅನೇಕ ವರ್ಷಳಿಂದ ಶೇ 50ರಷ್ಟು ಹುದ್ದೆಗಳು ಖಾಲಿ ಇದ್ದು,ಅವುಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಲಾಗುವುದು ಮತ್ತು ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸಲಾಗುವುದು" ಎಂದು ಸಚಿವರು ಭರವಸೆ ನೀಡಿದರು.

"ಕಲ್ಯಾಣ ಕರ್ನಾಟಕ ಅಡಿ 83 ಪಶು ವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 32 ಪಶು ವೈದ್ಯಕೀಯ ಪರೀಕ್ಷಕರು ಮತ್ತು 27 ಪಶು ವೈದ್ಯಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ" ಎಂದು ಸಚಿವರು ವಿವರಣೆ ನೀಡಿದೆ.
"ಇಲಾಖೆಯಲ್ಲಿ ಕಳೆದ 12 ವರ್ಷಗಳಿಂದ ಬಡ್ತಿ ಸಮಸ್ಯೆ ಎದುರಿಸುತ್ತಿದ್ದ ಅನೇಕರಿಗೆ ಸಹಾಯಕ ನಿರ್ದೇಶಕ, ಉಪನಿರ್ದೇಶಕ ಮತ್ತು ಜಂಟಿ ನಿರ್ದೇಶಕ ಹುದ್ದೆಗಳಿಗೆ ಬಡ್ತಿ ನೀಡಲಾಗಿದೆ" ಎಂದು ಸಚಿವರು ಹೇಳಿದರು.
"ಪಶುಮೇಳದಂತೆಯೇ ಎಲ್ಲ ತಳಿಗಳ ಪಶುಗಳು ನೋಡುವುದಕ್ಕೆ ಲಭ್ಯವಾಗುವ ಪಶುಲೋಕವನ್ನು 100 ಎಕರೆ ಪ್ರದೇಶದಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ. ಗೋಮಾತೆ ಕಸಾಯಿಖಾನೆಗೆ ಹೋಗಬಾರದು ಎನ್ನುವ ಸದುದ್ದೇಶದಿಂದ ಹೊಸ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ತಂದು ಕಾನೂನು ಬಿಗಿಗೊಳಿಸಲಾಗಿದೆ" ಎಂದರು.
"ನಾನು ಅಧಿಕಾರಕ್ಕೆ ಬಂದಾಗಿನಿಂದ ಗೋಹತ್ಯೆ ನಿಷೇಧ ಕಾಯ್ದೆ, ಪ್ರತಿ ಜಿಲ್ಲೆಗೊಂದು ಗೋಶಾಲೆ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ರಚನೆ, ಪಶುಸಂಜೀವಿನಿ ಅಂಬ್ಯುಲೆನ್ಸ್, ಬೆಂಗಳೂರಿನಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಆರಂಭ, ಸಿಬ್ಬಂದಿ ಬಡ್ತಿಗೆ ಕ್ರಮ, ಪ್ರಾಣಿ ಕಲ್ಯಾಣ ಸಹಾಯವಾಣಿ, ಪಶುಲೋಕ, ಅಮೃತ ಸಿರಿ, ಅಮೃತ ಧಾರೆ ಯೋಜನೆಗಳನ್ನು ಜಾರಿಗೆ ತರಲಾಗಿದೆ ಮತ್ತು ದೇಶಿ ತಳಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ" ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಮುಂತಾದವರು ಸಚಿವರ ಜೊತೆಗಿದ್ದರು.












Click it and Unblock the Notifications