ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ!
ಮಂಗಳೂರು,ಸೆಪ್ಟೆಂಬರ್ 25: ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳ ಭರ್ತಿಗೆ ಸರ್ಕಾರ ಬದ್ಧವಾಗಿದೆ. ಒಳ ಮೀಸಲಾತಿ ಸಲುವಾಗಿ ನೇಮಕಾತಿ ಪ್ರಕ್ರಿಯೆ ತಡವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಚಾಯತ್ರಾಜ್ ಇಲಾಖೆ ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ಶೀಘ್ರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಕೆಇಎ ಮೂಲಕ ಮಾಡಿದ ನೇಮಕಾತಿ ಪೂರ್ಣವಾಗಿದ್ದು, ಕೆಪಿಎಸ್ನಿಂದಲೇ ಸಮಸ್ಯೆ ಹೆಚ್ಚಾಗಿದೆ
ನಮ್ಮಲ್ಲಿ ಕೆಪಿಎಸ್ ಇ ಇರುವ ತನಕ ಜನರಿಗೆ ಉದ್ಯೋಗ ಸಿಗಲ್ಲ. ಕೆಪಿಎಸ್ಇ ವಿಸರ್ಜನೆ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಕೊಟ್ಟಿದ್ದೇವೆ. 2.5 ಲಕ್ಷ ಖಾಲಿ ಹುದ್ದೆಗಳು ಇದ್ದು, ಸಾಂವಿಧಾನಿಕ ಸಂಸ್ಥೆ ಎನ್ನುವ ಕಾರಣಕ್ಕೆ ಹಸ್ತಕ್ಷೇಪ ಮಾಡಲು ಆಗುತ್ತಿಲ್ಲ. ಮುಂದೆ ಎಲ್ಲವೂ ಕೆಇಎಗೆ ನೀಡಲು ಯೋಚಿಸಿದ್ದೇವೆ. ಪಿಡಿಒಗಳ ವರ್ಗಾವಣೆ ಕೌನ್ಸೆಲಿಂಗ್ ಅನ್ನು ಪಾರದರ್ಶಕವಾಗಿ ಮಾಡಲಾಗಿದೆ. 12 ವರ್ಷಗಳಿಂದ ಬಾಕಿ ಉಳಿದಿರುವ ಸೀನಿಯರ್ ಪಿಡಿಒಗಳಿಒಗೆ ಬಡ್ತಿ ನೀಡುವ ವಿಚಾರ ಕೋರ್ಟ್ನಲ್ಲಿತ್ತು. ಅಫಿಡವಿಟ್ ಸಲ್ಲಿಕೆ ಮಾಡಿದ್ದು, ಕೋರ್ಟ್ ಆದೇಶದ ಬಳಿಕ ಬಡ್ತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಅತಿ ದೊಡ್ಡ ಟೆಕ್ ಪಾರ್ಕ್ ನಿರ್ಮಾಣದ ಪ್ರಸ್ತಾವ ಗುರುವಾರ ಅಥವಾ ಮುಂದಿನ ವಾರ ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಬರಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಮಂಗಳೂರಿನಲ್ಲಿ 3.25 ಎಕರೆ ಭೂಮಿಯಲ್ಲಿ ಟೆಕ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು 3.5 ಲಕ್ಷ ಚದರ ಅಡಿ ವಿಸ್ತೀರ್ಣದ ಕಟ್ಟಡ ಮತ್ತು 3,500 ಕೋಟಿ ರೂ.ಗಳ ಕಾರ್ಯಕಾರಿ ಬಂಡವಾಳದೊಂದಿಗೆ ಟೆಕ್ ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು, ಮುಂದಿನ ಐದು ವರ್ಷದೊಳಗೆ ಮಂಗಳೂರನ್ನು ಐಟಿ ಕ್ಷೇತ್ರದಲ್ಲಿ ಮತ್ತೊಂದು ಬೆಂಗಳೂರು ಆಗಿ ರೂಪಿಸಲು ಪ್ರಯತ್ನವಾಗಲಿದೆ.
ಮಂಗಳೂರಿನ ಅಭಿವೃದ್ಧಿಯ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಜತೆಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಕರೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರಕಾರದ ವೀಕ್ಷಿತ್ ಭಾರತ್, ಮೇಕ್ ಇನ್ ಇಂಡಿಯಾ ಮೊದಲಾದ ಕಾರ್ಯಕ್ರಮಗಳಿಗೆ ರಾಜ್ಯ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧವಿದ್ದು, ಸಂಸದರು ಈ ಬಗ್ಗೆ ಕಾರ್ಯಪ್ರವೃತ್ತರಾಗುವಂತೆ ಮನವಿ ಮಾಡಿದರು.ಕರ್ನಾಟಕದ ಜಾಗತಿಕ ಸಾಮರ್ಥ್ಯ ಕೇಂದ್ರ(ಜಿಸಿಸಿ)ಗಳ ನೀತಿಯು ಮಹಾತ್ವಾಕಾಂಕ್ಷೆಯಿಂದ ಕೂಡಿದ್ದು, 2029ರೊಳಗೆ ರಾಜ್ಯದ್ಲಿ 500 ಹೊಸ ಜಿಸಿಸಿಗಳನ್ನು ಆಕರ್ಷಿಸುವ ಗುರಿ ಹೊಂದಿರುವುದಾಗಿ ಹೇಳಿದರು. ಈ ಮೂಲಕ 3.5ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದ್ದು, ಇದಕ್ಕಗಾಗಿ ಮುಂದಿನ ತಿಂಗಳು ಸರಕಾರವು ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ನೀತಿಯನ್ನು ರೂಪಿಸಲಿದೆ ಎಂದವರು ಹೇಳಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನ ಅಧ್ಯಕ್ಷ ಬಿ.ವಿ. ನಾಯ್ಡು, ಕೇಂದ್ರ ಸರಕಾರದಿಂದ ಕರ್ನಾಟಕದಲ್ಲಿ ಗಿಫ್ಟ್ ಸಿಟಿ ಘೋಷಣೆಗೆ ಪ್ರಯತ್ನಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕದಿಂದ ಈಗಾಗಲೇ ಕೇಂದ್ರಕ್ಕೆ ಸಲ್ಲಿಕೆಯಾದ ಬೇಡಿಕೆ ತಿರಸ್ಕರಿಸಲ್ಪಟ್ಟಿದೆ. ದೇಶಕ್ಕೆ ಒಂದೇ ಗಿಫ್ಟ್ ಸಿಟಿ ಹಬ್ ನೀಡಲು ಸಾಧ್ಯ ಎಂದು ಹೇಳಿ ಅದನ್ನು ಗುಜರಾತ್ ಗೆ ಮಾನ್ಯ ಮಾಡಲಾಗಿದೆ. ಆದರೆ, ಯುವ ಸಂಸದ ಬ್ರಿಜೇಶ್ ಚೌಟ ಅಂತಹವರು ಈ ಬಗ್ಗೆ ಒತ್ತು ನೀಡಿ ಕೇಂದ್ರದ ಮನವೊಲಿಸಿದರೆ ಸಾಧ್ಯವಾಗಬಹುದು. ಕರ್ನಾಟಕದ ಎಲ್ಲಾ ಸಂಸದರು ಈ ಬಗ್ಗೆ ಕೇಂದ್ರದ ಹಣಕಾಸು ಸಚಿವರು ಹಾಗೂ ಪ್ರಧಾನಿ ಜೊತೆ ಮಾತನಾಡಿ ಒತ್ತಡ ಹೇರಬೇಕಾಗಿದೆ ಎಂದವರು ಹೇಳಿದರು.












Click it and Unblock the Notifications