ಬಜೆಟ್ 2022; ಉದ್ಯೋಗ ಸೃಷ್ಟಿ ಜೊತೆಗೆ ಕೌಶಲ್ಯ ತರಬೇತಿಗೆ ಆದ್ಯತೆ
ನವದೆಹಲಿ, ಜನವರಿ 13; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಅವರು ಮಂಡನೆ ಮಾಡುತ್ತಿರುವ 4ನೇ ಬಜೆಟ್ ಆಗಿದ್ದು, ಎರಡು ವರ್ಷದ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಬಜೆಟ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಕೋವಿಡ್ ಪರಿಸ್ಥಿತಿಯಲ್ಲಿ ಸಿಲುಕಿದ್ದ ಜನರಿಗೆ ಕಳೆದ ವರ್ಷದ ಬಜೆಟ್ ಕೊಂಚ ರಿಲೀಫ್ ನೀಡಿತ್ತು. ಈ ವರ್ಷದ ಬಜೆಟ್ ಮೇಲೆ ಸಹ ಸಾಕಷ್ಟು ನಿರೀಕ್ಷೆ ಇದೆ. ಕೃಷಿ, ವ್ಯಾಪಾರ ಸೇರಿದಂತೆ ವಿವಿಧ ವಲಯಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿವೆ.
ಕೊರೊನಾ ಪರಿಸ್ಥಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಇದೇ ಮಾದರಿಯಲ್ಲಿ ನಗರದಲ್ಲಿ ಉದ್ಯೋಗ ಸೃಷ್ಟಿಗೆ ಬಜೆಟ್ನಲ್ಲಿ ಆದ್ಯತೆ ನೀಡುವ ಸಾಧ್ಯತೆ ಇದೆ.

ನಗರದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಘೋಷಣೆ ಭವಿಷ್ಯದ ದೃಷ್ಟಿಯಿಂದ ಸಹಾಯಕವಾಗಲಿದೆ. ಬಜೆಟ್ನಲ್ಲಿ ಇದಕ್ಕೆ ಆದ್ಯತೆ ನೀಡಿದರೆ ಉದ್ಯೋಗ ಆರಸಿ ನಗರಕ್ಕೆ ಬರುವ ಕೋಟ್ಯಾಂತರ ಜನರಿಗೆ ಅನುಕೂಲವಾಗಲಿದೆ. ಇದರ ಜೊತೆಗೆ ಕೌಶಲ್ಯ ತರಬೇತಿ ನೀಡುವುದು ಸಹ ಇದರಲ್ಲಿ ಒಳಗೊಂಡಿದೆ.
ಬದಲಾಗುತ್ತಿರುವ ಔದ್ಯೋಗಿಕ ವಾತಾವರಣ, ಉದ್ಯೋಗ ಕ್ಷೇತ್ರದಲ್ಲಿನ ತಂತ್ರಜ್ಞಾನದ ಬಳಕೆ ಹಿನ್ನಲೆಯಲ್ಲಿ ಕೌಶಲ್ಯ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಸಿಐಐ ಹೇಳಿದೆ. ಕೌಶಲ್ಯ ತರಬೇತಿ ಪಡೆದವರಿಗೆ ಹೆಚ್ಚಿನ ಅವಕಾಶಗಳು ತೆರದುಕೊಳ್ಳುತ್ತಿವೆ.
ಕೋವಿಡ್ ಪರಿಸ್ಥಿತಿ ಬಳಿಕ ಹಲವಾರು ಕಠಿಣ ಸವಾಲುಗಳನ್ನು ಭಾರತದ ಉದ್ಯಮ ಸಂಸ್ಥೆಗಳು ಎದುರಿಸುತ್ತಿವೆ. ಉದ್ಯೋಗಕ್ಕೆ ಹೊಸದಾಗಿ ಸೇರುವವರು ಡಿಜಿಟಲ್ ಸಾಕ್ಷರತೆ, ಭಾಷಾ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ಬಯಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಗರದದಲ್ಲಿನ ಉದ್ಯೋಗ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿವೆ.
ಭಾರತ ಸರ್ಕಾರದ ಹೊಸ ಶಿಕ್ಷಣ ನೀತಿಯು ಕೌಶಲ್ಯ ತರಬೇತಿ ನೀಡುವ ದಿಕ್ಕಿನಲ್ಲಿ ಹಲವು ಅಂಶಗಳನ್ನು ಒಳಗೊಂಡಿದೆ. ಶಾಲೆಗಳು ಮತ್ತು ಕಾಲೇಜುಗಳಲ್ಲಿಯೇ ವೃತ್ತಿಪರ ತರಬೇತಿ ಒಳಗೊಂಡಿರುತ್ತವೆ ಮತ್ತು ವಿದೇಶಿ ಭಾಷೆಗಳಿಗೆ ಮಾನ್ಯತೆ ನೀಡಲಾಗುತ್ತದೆ.
ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡುತ್ತಿವೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಬಜೆಟ್ನಲ್ಲಿ ಇಂತಹ ಕಾರ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನಿರೀಕ್ಷೆ ಮಾಡಲಾಗಿದೆ.
ಗ್ರಾಮೀಣ ಉದ್ಯೋಗಗಳು; ಸಿಐಐ ಗ್ರಾಮೀಣ ಮಟ್ಟದಲ್ಲಿನ ಉದ್ಯೋಗಗಳ ಬಗ್ಗೆಯೂ ಹಲವಾರು ಅಂಶಗಳನ್ನು ಪ್ರಸ್ತಾಪಿಸಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳಿಗೆ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಹಂಚಿಕೆಗೆ ಸಲಹೆ ನೀಡಿದೆ.
ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಹೆಚ್ಚಿನ ಕಾರ್ಮಿಕರು ಇರುವ ವಲಯಗಳ ಮೇಲೆಯೂ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದೆ. ಮಾರಾಟ ಮತ್ತು ಸೇವಾ ಜಾಲವನ್ನು ಬಲಪಡಿಸಲು ವಿಶೇಷ ಒತ್ತು ನೀಡುವ ಅಗತ್ಯವಿದೆ ಎಂದು ತಿಳಿಸಿದೆ.
ಉದ್ಯೋಗ ನೀತಿಗಳನ್ನು ಸರಳೀಕರಿಸುವುದು, ಅಪ್ರೆಂಟಿಸ್ಗಳ ನೇಮಕ, ತರಬೇತಿ ಪಡೆದವರಿಗೆ ಅಲ್ಲೇ ಕೆಲಸ ನೀಡುವುದು ಸೇರಿದಂತೆ ವಿವಿಧ ಬದಲಾವಣೆಗಳು ಉದ್ಯೋಗ ವಲಯದಲ್ಲಿ ಅಗತ್ಯವಿದೆ. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸ್ನೇಹಿ ನೀತಿಗಳು ಅಗತ್ಯ ಇದೆ ಎಂದು ಹೇಳಿದೆ.
ಬಜೆಟ್ನಲ್ಲಿ ಪ್ರವಾಸೋದ್ಯಮ, ಬ್ಯಾಂಕಿಂಗ್, ಹಣಕಾಸು, ವಿಮೆ, ಆರೋಗ್ಯ, ನಿರ್ಮಾಣ, ಜವಳಿ ಮತ್ತು ಉಡುಪು ಸೇರಿದಂತೆ ವಿವಿಧ ವಲಯಗಳಿಗೆ ಆದ್ಯತೆ ನೀಡಬೇಕು ಮತ್ತು ಶಿಕ್ಷಣ ಸೇರಿದಂತೆ ಹೆಚ್ಚು ಬೆಳವಣಿಗೆಯ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಸಿಐಐ ತಿಳಿಸಿದೆ.












Click it and Unblock the Notifications