50 ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಬಿಎಂಆರ್ಸಿಎಲ್
ಬೆಂಗಳೂರು, ಡಿಸೆಂಬರ್ 08; ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಣೆ ಮಾಡಲು ಅರ್ಹ, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಸ್ಟೇಷನ್ ಕಂಟ್ರೋಲರ್/ ರೈಲು ನಿರ್ವಾಹಕರ 50 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಅರ್ಜಿ ಸಲ್ಲಿಸುವವರು ಮಾಜಿ ಸೈನಿಕರಾಗಿರಬೇಕು.
5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಣೆ ಮಾಡಲು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 25 ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಮಾಜಿ ಸೈನಿಕರಾಗಿದ್ದು, ವಯೋಮಿತಿ 45 ವರ್ಷ ಮೀರಿರಬಾರದು. ಆಯ್ಕೆಯಾದ ಅಭ್ಯರ್ಥಿಗಳಿಗೆ 33,040 ರಿಂದ 63,490 ರೂ. ವೇತನ ನಿಗದಿ ಮಾಡಲಾಗಿದೆ.
ಅಂಚೆ ಜೀವ ವಿಮೆ ಏಜೆಂಟರ್ ನೇಮಕಾತಿ; ಕಲಬುರಗಿ ವಿಭಾಗದ ಅಂಚೆ ಇಲಾಖೆಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ (ಅಂಚೆ ಜೀವ ವಿಮೆ ಏಜೆಂಟರ್) ನಿಯೋಜನೆಗಾಗಿ ನೇರ ಸಂದರ್ಶನ ನಡೆಸಲಾಗುತ್ತಿದೆ.
ಡಿಸೆಂಬರ್ 11ರಂದು ಬೆಳಗ್ಗೆ 10 ಗಂಟೆಗೆ ಕಲಬುರಗಿ ವಿಭಾಗದ ವರಿಷ್ಠ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ ಎಂದು ಕಲಬುರಗಿ ವಿಭಾಗದ ವರಿಷ್ಠ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳ ವಯೋಮಿತಿ 18 ರಿಂದ 50 ವರ್ಷಗಳು. ಅಭ್ಯರ್ಥಿಗಳ ವಿದ್ಯಾರ್ಹತೆ ಕನಿಷ್ಠ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರಬೇಕು. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ವಾಸಸ್ಥಳ ಪ್ರಮಾಣ ಪತ್ರ ಹೊಂದಿರಬೇಕು.
ಬೇರೆ ಯಾವುದೇ ವಿಮಾ ಸಂಸ್ಥೆ, ಕಂಪನಿ ಅಥವಾ ಸಂಘಗಳ ನೇರ ಪ್ರತಿನಿಧಿಯಾಗಿರಬಾರದು. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ಯಾವುದೇ ವೇತನ ಅಥವಾ ಭತ್ಯೆ ಇರುವುದಿಲ್ಲ. ಜೀವ ವಿಮೆಗಳ ವ್ಯವಹಾರವನ್ನಾಧರಿಸಿ ಸೂಕ್ತ ಕಮಿಷನ್ ನೀಡಲಾಗುತ್ತದೆ.
ಅಭ್ಯರ್ಥಿಗಳು ತಮ್ಮ ಜನ್ಮ ದಿನಾಂಕದ ಪ್ರಮಾಣಪತ್ರ, ಶೈಕ್ಷಣಿಕ ಪ್ರಮಾಣಪತ್ರಗಳ ಝೆರಾಕ್ಸ್ ಪ್ರತಿ ಹಾಗೂ ಇತ್ತೀಚಿನ ಭಾವಚಿತ್ರಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು. ನೇರ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು 5000 ರೂ.ಗಳ ಎನ್.ಎಸ್.ಸಿ. ಅಥವಾ ಕೆವಿಪಿ ಖರೀದಿಸಿ ವರಿಷ್ಠ ಅಂಚೆ ಅಧೀಕ್ಷಕರು, ಕಲಬುರಗಿ ವಿಭಾಗ ಇವರ ಹೆಸರಿನಲ್ಲಿ ಪ್ಲೇಡ್ಜ್ ಮಾಡಬೇಕು.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಕರೆ ಮಾಡಲು ದೂರವಾಣಿ ಸಂಖ್ಯೆ 08472-263800 ಹಾಗೂ 9886248554.
ಸಾಲ ಸೌಲಭ್ಯಕ್ಕೆ ಅರ್ಜಿ ಹಾಕಿ; ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2021-22ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ಈ ಕುರಿತು ಮಾಹಿತಿ ನೀಡಿದ್ದಾರೆ. ಅರ್ಜಿ ಸಲ್ಲಿಸುವವರು ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿರಬೇಕು. ಜಾತಿ ಮತ್ತು ಆದಾಯ ಪ್ರಮಾಣಪತ್ರ ನಮೂನೆ-ಜಿ ಯಲ್ಲಿ ಪಡೆದಿರಬೇಕು.
ಈ ಪ್ರಮಾಣಪತ್ರವು ಚಾಲ್ತಿಯಲ್ಲಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು. ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು. ಈಗಾಗಲೇ ಬೇರೆ ಯಾವುದೇ ನಿಗಮಗಳ ಯೋಜನೆಗಳಲ್ಲಿ ಅಥವಾ ಈ ನಿಗಮದಲ್ಲೇ ಈ ಹಿಂದೆ ಸಾಲ ಪಡೆದಿದ್ದಲ್ಲಿ ಅಂತಹ ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರಿಗೆ ಸಾಲ ಸೌಲಭ್ಯ ಪಡೆಯಲು ಅರ್ಹರಲ್ಲ.
ಅರ್ಹ ಅಭ್ಯರ್ಥಿಗಳು ಅವಶ್ಯಕ ದಾಖಲಾತಿಗಳೊಂದಿ http://www.kacdc.karnataka.gov.in ವೆಬ್ಸೈಟ್ದಲ್ಲಿ ಆನ್ಲೈನ್ ಮೂಲಕ 2022ರ ಜನವರಿ 18ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್ಸೈಟ್ ಅನ್ನು ಕೇಂದ್ರ ಕಚೇರಿಯ ಸಹಾಯವಾಣಿ ಸಂಖ್ಯೆ 9448451111 ಅಥವಾ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08472-278635.












Click it and Unblock the Notifications