ದಕ್ಷಿಣ ಕನ್ನಡದಲ್ಲಿ ಕೆಲಸ ಖಾಲಿ ಇದೆ; ನ.6ರ ತನಕ ಅರ್ಜಿ ಹಾಕಿ
ದಕ್ಷಿಣ ಕನ್ನಡ, ಅಕ್ಟೋಬರ್ 19: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ 'ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕ' ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ 6 ನವೆಂಬರ್ 2023.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಸೇವಾ) ನಿಯಮಗಳು-2022ಅನ್ನು ಜಾರಿಗೊಳಿಸಲಾಗಿದೆ. ಅಧಿಸೂಚನೆಯಲ್ಲಿರುವಂತೆ ಜಾರಿಯಲ್ಲಿರುವ ನಿಯಮಗಳಡಿಯಲ್ಲಿ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಒಪ್ಪಿಗೆ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 16 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಸದರಿ ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಪ್ರಸ್ತುತ ಖಾಲಿ ಇರುವ ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಒಟ್ಟು 16 ಮತ್ತು ನಿವೃತ್ತಿಯಿಂದ ತೆರವಾದ 1 ಹುದ್ದೆ ಸೇರಿ ಒಟ್ಟು 17 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ವೆಬ್ ಸೈಟಿನಲ್ಲಿ zpdk.karnataka.gov.in ರಲ್ಲಿ Online ಮೂಲಕ ಭರ್ತಿ ಮಾಡಿ ಅರ್ಜಿಯನ್ನು ಅಗತ್ಯ ದೃಢೀಕರಿಸಿದ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಯಾಗಿರತಕ್ಕದ್ದು. ಪರಂತು ಸಂಬಂಧಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿ ಲಭ್ಯತೆ ಇಲ್ಲದೆ ಇದ್ದಲ್ಲಿ ಆಯಾ ತಾಲೂಕು ವ್ಯಾಪ್ತಿಯಲ್ಲಿನ ಬೇರೆ ಗ್ರಾಮ ಪಂಚಾಯತಿಯ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು. ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರವಾದ ತಹಶೀಲ್ದಾರ್ ಇವರಿಂದ ವಾಸಸ್ಥಳ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸತಕ್ಕದ್ದು.
ವಿದ್ಯಾರ್ಹತೆ ವಿವರ; ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣ ಪತ್ರ ಪಡೆದಿರತಕ್ಕದ್ದು ಹಾಗೂ ಕನಿಷ್ಠ 03 ತಿಂಗಳು ಕಂಪ್ಯೂಟರ್ ಕೋರ್ಸ್ನಲ್ಲಿ ಉತ್ತೀರ್ಣರಾಗಿರಬೇಕು.
ಒಂದು ವೇಳೆ ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸದಿದ್ದಲ್ಲಿ ಪಿ.ಯು.ಸಿ. ಪರೀಕ್ಷೆಯಲ್ಲಿ ಅಭ್ಯರ್ಥಿಯು ಗಳಿಸಿದ ಅಂಕಗಳನ್ನು ಆಧರಿಸಿ ಅಧಿಸೂಚಿಸಿದ ಖಾಲಿ ಹುದ್ದೆಗಳಿಗೆ ಮೀಸಲಾತಿ ಬಿಂದುವಿನಂತೆ ಆಯ್ಕೆಗೆ ಪರಿಗಣಿಸಲಾಗುವುದು.
ಈ ವಿದ್ಯಾರ್ಹತೆಯನ್ನು ಅಧಿಸೂಚನೆ ಹೊರಡಿಸುವ ದಿನಾಂಕಕ್ಕೆ ಮುಂಚಿತವಾಗಿ ಹೊಂದಿರಬೇಕು. ವಿದ್ಯಾರ್ಹತೆಯ ದಾಖಲಾತಿಗಳ ನೈಜತೆ ಬಗ್ಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ದೃಢಪಡಿಸಿಕೊಂಡ ನಂತರ ನೇಮಕಾತಿ ಆದೇಶ ನೀಡಲಾಗುವುದು. ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತತ್ಸಮಾನ ವಿದ್ಯಾರ್ಹತೆ ಹೊಂದಿದಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಅರ್ಜಿಗಳನ್ನು ಸಲ್ಲಿಕೆ ಮಾಡುವ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು 500 ರೂ., ಪ್ರವರ್ಗ 2(ಎ), 2 (ಬಿ), 3(ಎ), 3 (ಬಿ)ಗೆ ಸೇರಿದ ಅಭ್ಯರ್ಥಿಗಳು 300 ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 200 ರೂ. ಮತ್ತು ಎಲ್ಲಾ ವಿಧಗಳ ವಿಕಲಚೇತನ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ.
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 06/11/2023ಕ್ಕೆ ಅಭ್ಯರ್ಥಿಯು 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಹಾಗೂ ಗರಿಷ್ಠ ವಯೋಮಿತಿಯು ಸಾಮಾನ್ಯ ವರ್ಗ 35, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 40 ವರ್ಷ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) 38 ವರ್ಷ ನಿಗದಿ ಮಾಡಲಾಗಿದೆ.
ಸಾಮಾನ್ಯ ಸೂಚನೆಗಳು
* ಕನಿಷ್ಠ 3 ತಿಂಗಳ ತರಬೇತಿ ಹೊಂದಿದ ಬಗ್ಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಗಣಕಯಂತ್ರ ತರಬೇತಿ ಪ್ರಮಾಣ ಪತ್ರ ಸಲ್ಲಿಸುವುದು.
* ಕಾನೂನು ಬಾಹಿರ/ ನೀತಿ ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು ಕಂಡು ಬಂದಿದ್ದಲ್ಲಿ ನೇಮಕಾತಿಗೆ ಅನರ್ಹರಾಗಿರುತ್ತಾರೆ.
* ಅರ್ಜಿಯಲ್ಲಿ ತಪ್ಪು/ ಸುಳ್ಳು ಮಾಹಿತಿ ನೀಡಿ ಉದ್ಯೋಗ ಪಡೆಯುವ ಅಭ್ಯರ್ಥಿಗಳನ್ನು ಯಾವುದೇ ಸಮಯದಲ್ಲಾದರೂ ವಜಾ ಮಾಡಲಾಗುತ್ತದೆ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
* ಅರ್ಜಿಯಲ್ಲಿ ನೀಡುವ ವಿಳಾಸ ಮತ್ತು ಮೊಬೈಲ್ ಸಂಖ್ಯೆಯೇ ಅಂತಿಮವಾಗಿದ್ದು, ಎಲ್ಲಾ ಪತ್ರ ವ್ಯವಹಾರಗಳನ್ನು ಅದೇ ವಿಳಾಸಕ್ಕೆ ಕಳುಹಿಸಿ ಕೊಡಲಾಗುವುದು. ನಂತರದಲ್ಲಿ ವಿಳಾಸ ಬದಲಾವಣೆ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನು ಪರಿಗಣಿಸಲಾಗುವುದಿಲ್ಲ.
* ಅಭ್ಯರ್ಥಿಗಳ ಅರ್ಹತೆಯ ವಿಷಯದಲ್ಲಿ ಆಯ್ಕೆ ಪ್ರಾಧಿಕಾರದ ನಿರ್ಧಾರವೇ ಅಂತಿಮವಾಗಿರುತ್ತದೆ.
ಅಭ್ಯರ್ಥಿಯ ಹೆಸರು ಅಂತಿಮ ಆಯ್ಕೆ ಪಟ್ಟಿಯಲ್ಲಿ ಬಂದಿದೆ ಎಂಬುದರ ಆಧಾರದ ಮೇಲೆ ಅಭ್ಯರ್ಥಿಗೆ ನೇಮಕಾತಿಯ ಯಾವುದೇ ಹಕ್ಕು ದೊರೆಯುವುದಿಲ್ಲ.
* ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ನೌಕರಿ ಸೇವೆಯಲ್ಲಿ ಇರುವ ಅಭ್ಯರ್ಥಿಗಳು ತಮ್ಮ ಇಲಾಖೆಯ ಮುಖ್ಯಸ್ಥರ ನಿರಾಕ್ಷೇಪಣಾ ಪತ್ರವನ್ನು ಹೊಂದಿರತಕ್ಕದ್ದು.
* ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಸಂದರ್ಭದಲ್ಲಿ ಮುಂದೂಡುವ, ರದ್ದುಗೊಳಿಸುವ ಮತ್ತು ನಿರ್ಬಂಧನೆಗಳನ್ನು ಬದಲಾಯಿಸುವ ಅಧಿಕಾರವನ್ನು ನೇಮಕಾತಿ ಪ್ರಾಧಿಕಾರ ಹೊಂದಿರುತ್ತದೆ.
* ಈಗಾಗಲೇ ಪುರುಷ ಮತ್ತು ಮಹಿಳಾ ವ್ಯಕ್ತಿಯು ಎರಡನೆಯ ಮದುವೆಯಾಗಿದ್ದರೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿಯನ್ನು ಪಡೆಯದಿದ್ದರೆ ಅಂತಹ ನೇಮಕಾತಿಗೆ
ಅರ್ಹರಾಗಿರುವುದಿಲ್ಲ.
* ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸುವುದು. ಅಂಚೆ ಅಥವಾ ಮುದ್ದಾಂ ಸಲ್ಲಿಸಲು ಅವಕಾಶವಿರುವುದಿಲ್ಲ. ಕೊನೆಯ ದಿನಾಂಕ ಮುಗಿದ ನಂತರ ಸಲ್ಲಿಸುವ ಯಾವುದೇ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
* ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾಗುವ ಅಭ್ಯರ್ಥಿಗಳಿಗೆ ಅಂಚೆ ಹಾಗೂ ಇ-ಮೇಲ್/ ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡಲಾಗುವುದು. ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸಿದ ಎಲ್ಲಾ ಮೂಲ ದಾಖಲೆಗಳನ್ನು ಸಲ್ಲಿಸತಕ್ಕದ್ದು.
* ನಿಗದಿಪಡಿಸಿದ ದಿನಾಂಕದಂದು ದಾಖಲಾತಿಗಳ ಪರಿಶೀಲನೆಗೆ ಹಾಜರಾಗದೇ ಇರುವ ಅಭ್ಯರ್ಥಿಗಳು ಅನರ್ಹಗೊಳ್ಳುತ್ತಾರೆ ಹಾಗೂ ಅವರ ಹೆಸರನ್ನು ನೇಮಕಾತಿ ಪ್ರಕ್ರಿಯೆಯಿಂದ ಕೈಬಿಡಲಾಗುವುದು.
* ಅರ್ಜಿಯಲ್ಲಿ ಕೇಳಿರುವ ಪೂರ್ಣ ಮಾಹಿತಿಯನ್ನು ಭರ್ತಿ ಮಾಡಿಲ್ಲದೇ ಇರುವ ಅಭ್ಯರ್ಥಿಗಳ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ತಿರಸ್ಕರಿಲಾಗುವುದು.
* ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಒದಲು, ಬರೆಯಲು ಮತ್ತು ಅರ್ಥ ಮಾಡಿಕೊಳ್ಳುವ ಜ್ಞಾನದ ಅವಶ್ಯಕತೆ ಕಡ್ಡಾಯವಾಗಿರುತ್ತದೆ ಹಾಗೂ ಸರ್ಕಾರಿ ನಿಯಮಾನುಸಾರ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ತೇರ್ಗಡೆಯಾಗುವುದು.












Click it and Unblock the Notifications