ಬೆಂಗಳೂರಲ್ಲಿ ಕೆಲಸ ಖಾಲಿ ಇದೆ; ಅಕ್ಟೋಬರ್ 1ರ ತನ ಅರ್ಜಿ ಹಾಕಿ
ಬೆಂಗಳೂರು, ಸೆಪ್ಟೆಂಬರ್ 24; ಅತ್ತಿಬೆಲೆಯಲ್ಲಿರುವ ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘ ನಿಯಮಿತ 8 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದೆ. ಆಸಕ್ತರು, ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಲು 1/10/2021ರ ಸಂಜೆ 5 ಗಂಟೆ ಕೊನೆಯ ದಿನವಾಗಿದೆ.
ರೈತರ ಸೇವಾ ಸಹಕಾರ ಸಂಘದಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಒಟ್ಟು 8 ಹುದ್ದೆಗಳಿದ್ದು, ಸಾಮಾನ್ಯ ವರ್ಗಕ್ಕೆ 4 ಮತ್ತು ಸಾಮಾನ್ಯ ವರ್ಗ ಮಹಿಳಾ ಮೀಸಲು 2 ಹುದ್ದೆಗಳು. ಪರಿಶಿಷ್ಟ ಪಂಗಡ 1, ಪ್ರವರ್ಗ 2 (ಎ) 1 ಹುದ್ದೆ ಮೀಸಲಾತಿ ನಿಗದಿಯಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ 21,400 ರಿಂದ 42,000 ರೂ. ತನಕ ವೇತನ ನಿಗದಿ ಮಾಡಲಾಗಿದೆ. ನೇಮಕಾತಿಯನ್ನು ಯಾವುದೇ ಕಾರಣವನ್ನೂ ನೀಡದೆ ಮುಂದೂಡುವ, ರದ್ದುಪಡಿಸುವ, ನಿಬಂಧನೆಗಳನ್ನು ಬದಲಾವಣೆ ಮಾಡುವ, ಷರತ್ತುಗಳನ್ನು ವಿಧಿಸುವ ಸಂಪೂರ್ಣ ಹಕ್ಕನ್ನು ಸಂಘವು ಕಾಯ್ದಿರಿಸಿಕೊಂಡಿದೆ.

ವಿದ್ಯಾರ್ಹತೆ ವಿವರ; ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಎ/ ಬಿಎಸ್ಸಿ/ ಬಿಸಿಎ/ ಬಿಕಾಂ/ ಬಿಬಿಎಂ/ ಬಿಬಿಎ ಇವುಗಳಲ್ಲಿ ಯಾವುದಾದರೂ ಪದವಿಯನ್ನು ಕನಿಷ್ಠ ಶೇ 50ರಷ್ಟು ಹಾಗೂ ಹೆಚ್ಚಿನ ಅಂಕಗಳೊಂದಿಗೆ ಪೂರೈಸಿರಬೇಕು. ಅರ್ಜಿ ಸಲ್ಲಿಸುವವರು ಕನ್ನಡ ಭಾಷಾ ಜ್ಞಾನ ಹೊಂದಿರಬೇಕು. ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ ತರಬೇತಿ ಜ್ಞಾನವನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ತುಂಬಿರಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಪ್ರವರ್ಗ -1ರ ಅಭ್ಯರ್ಥಿಗಳಿಗೆ 40, ಹಿಂದುಳಿದ ವರ್ಗದ ಪ್ರವರ್ಗಗಳಿಗೆ 38, ಸಾಮಾನ್ಯ ವರ್ಗಕ್ಕೆ 35 ವರ್ಷದ ಗರಿಷ್ಟ ವಯೋಮಿತಿ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?; ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘ ನಿಯಮಿತ ಸಂಘದ ಕೇಂದ್ರ ಕಚೇರಿಯಲ್ಲಿ ಅರ್ಜಿಗಳನ್ನು ಕಚೇರಿ ವೇಳೆಯಲ್ಲಿ ಪಡೆಯಬಹುದು. ಅರ್ಜಿ ಪಡೆಯಲು ಸಿ.ರೈ.ಸೇ.ಸ.ಸಂಘ ನಿಯಮಿತ, ಅತ್ತಿಬೆಲೆ ಇವರ ಹೆಸರಿನಲ್ಲಿ ರೂ. 1000 ಡಿಡಿಯನ್ನು ನೀಡಬೇಕು. ಈ ಹಣವನ್ನು ವಾಪಸ್ ನೀಡುವುದಿಲ್ಲ.
ಸಂಘದಿಂದ ಪಡೆದ ಮೂಲ ಅರ್ಜಿಯನ್ನು ಭರ್ತಿ ಮಾಡಿ, ಪೂರಕ ದಾಖಲೆಗಳ ಸ್ವಯಂ ದೃಢೀಕರಿಸಿದ ನಕಲು ಪ್ರತಿಗಳ ಅಗತ್ಯ ದಾಖಲೆ ಸೇರಿಸಿ ಅಂಚೆ, ಕೋರಿಯರ್, ಖುದ್ದಾಗಿ ಸಲ್ಲಿಕೆ ಮಾಡಬಹುದಾಗಿದೆ.
ವಿಳಾಸ; ಸದಸ್ಯ ಕಾರ್ಯದರ್ಶಿ, ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಸಿಂಡಿಕೇಟ್ ರೈತರ ಸೇವಾ ಸಹಕಾರ ಸಂಘ ನಿಯಮಿತ, ಅತ್ತಿಬೆಲೆ 562107. 1/10/2021ರ ಸಂಜೆ 5 ಗಂಟೆಯೊಳಗೆ ಅರ್ಜಿ ತಲುಪಬೇಕು.
ಲಗತ್ತಿಸಬೇಕಾದ ದಾಖಲೆ; ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಸಹಿ ಇರುವ ಪಾಸ್ ಪೋರ್ಟ್ ಅಳತೆಯ 2 ಫೋಟೋ ಅಂಟಿಸಬೇಕು. ಆಧಾರ್/ ವೋಟರ್/ ಪಾನ್/ ಪಾಸ್ ಪೋರ್ಟ್ ಲಗತ್ತಿಸಬೇಕು. ವಯಸ್ಸು ದೃಢೀಕರಣಕ್ಕಾಗಿ 10ನೇ ತರಗತಿ ಅಂಕಪಟ್ಟಿ/ ಶಾಲಾ ವರ್ಗಾವಣೆ ಪತ್ರ ಲಗತ್ತಿಸಬೇಕು. ವಿದ್ಯಾರ್ಹತೆಗಾಗಿ ಪದವಿಯ ಎಲ್ಲಾ ಅಂಕಪಟ್ಟಿ ಲಗತ್ತಿಸಬೇಕು. ಕಂಪ್ಯೂಟರ್ ತರಬೇತಿ ಪಡೆದಿರುವ ಪ್ರಮಾಣ ಪತ್ರ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದ ಇತ್ತೀಚಿನ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
ಷರತ್ತುಗಳು; ಪೂರ್ಣವಿವರ ಸಲ್ಲಿಸದ, ಸ್ಪಷ್ಟವಾಗಿ ಬರೆಯದ, ಸಹಿ ಮಾಡದಿರುವ, ಅಗತ್ಯ ದಾಖಲೆ ಇಲ್ಲದ, ತಡವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷಗಳ ಅವಧಿಯ ಪರೀಕ್ಷಾರ್ಹ ಸೇವೆಯಲ್ಲಿರುತ್ತಾರೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಲಿಖಿತ ಪರೀಕ್ಷೆ ದಿನಾಂಕ, ಸ್ಥಳದ ವಿವರಗಳನ್ನು ಕಚೇರಿಯ ಸೂಚನಾ ಫಲಕದಲ್ಲಿ ತಿಳಿಸಲಾಗುತ್ತದೆ. ರಿಜಿಸ್ಟರ್ ಪೋಸ್ಟ್ ಮೂಲಕ ಅಭ್ಯರ್ಥಿಗೆ ಮಾಹಿತಿ ನೀಡಲಾಗುತ್ತದೆ. ಅಭ್ಯರ್ಥಿಗೆ ಅಂಚೆ ತಲುಪದಿದ್ದರೆ ಸಂಘ ಜವಾಬ್ದಾರಿಯಲ್ಲ.
ನೇಮಕಗೊಂಡ ಅಭ್ಯರ್ಥಿ 5 ವರ್ಷದೊಳಗೆ ಸಂಘದ ಸೇವೆಯನ್ನು ಬಿಟ್ಟು ಹೋದರೆ 1 ಲಕ್ಷ ರೂ. ತರಬೇತಿ ವೆಚ್ಚವನ್ನು ಸಂಘಕ್ಕೆ ತುಂಬಬೇಕು. ಅಭ್ಯರ್ಥಿಯ ಮೂಲ ದಾಖಲೆಗಳನ್ನು ಪರೀಕ್ಷಾ ಅವಧಿ ಪೂರ್ಣಗೊಳ್ಳುವ ತನಕ ಸಂಘದ ಭದ್ರತೆಯಲ್ಲಿ ಇಡಲಾಗುತ್ತದೆ.












Click it and Unblock the Notifications