Infographics: ಭಾರತದಲ್ಲಿ ವಿದ್ಯುತ್ ಬಿಕ್ಕಟ್ಟಿಗೆ ಕಾರಣವೇನು?
ನವದೆಹಲಿ, ಅಕ್ಟೋಬರ್ 12: ದೇಶದಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಬಿಕ್ಕಟ್ಟಿನದೇ ಮಾತು. ವಿದ್ಯುತ್ ಬಿಕ್ಕಟ್ಟು ಎಂದರೇನು?, ಯಾಕಾಗಿ ಈ ಬಿಕ್ಕಟ್ಟು ಸಂಭವಿಸಿದೆ ಎನ್ನುವ ಮಾಹಿತಿ ಇಲ್ಲಿದೆ.
ಉತ್ಪಾದನಾ ಹಾಗೂ ಇತರೆ ವಲಯಗಳಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಬೇಡಿಕೆ ಹೆಚ್ಚಿದೆ, ಆರ್ಥಿಕ ವಲಯದ ಸುಧಾರಣೆಯು ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ವೇಗ ಪಡೆದುಕೊಂಡಿದ್ದರಿಂದ ಈ ವಲಯಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದೆ ಎಂಬುದನ್ನು ತಜ್ಞರು ವಿವರಿಸಿದ್ದಾರೆ.
ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ ಹಾಗೂ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಲ್ಲಿದ್ದಲು ಪೂರೈಕೆ ಪ್ರಮಾಣ ಇಳಿಕೆಯಾಗಿದೆ.
ಕಲ್ಲಿದ್ದಲು ಆಮದು ಪ್ರಮಾಣ ಕೂಡ ಶೇ.40ರಷ್ಟು ಇಳಿಕೆಯಾಗಿದೆ.
ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಕಲ್ಲಿದ್ದಲಿನ ದರವು ಮಾರ್ಚ್ 2021ರಲ್ಲಿ ಪ್ರತಿ ಟನ್ಗೆ 60 ಡಾಲರ್ ಇದ್ದರೆ ಅದು ಈಗ 160 ಡಾಲರ್ಗೆ ತಲುಪಿದೆ. ಇದು ಪರಿಸ್ಥಿತಿ ವಿಕೋಪಕ್ಕೆ ಹೋಗಲು ಮತ್ತೊಂದು ಕಾರಣವಾಗಿದೆ.

ಅನಿಲ ಬೆಲೆಯಲ್ಲೂ ಏರಿಕೆಯಾಗಿರುವುದರಿಂದ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳು ಕೂಡ ವಿದ್ಯುತ್ ಉತ್ಪಾದನಾ ಪ್ರಮಾಣವನ್ನು ಇಳಿಕೆ ಮಾಡಿವೆ.
ವಿದ್ಯುತ್ ಸ್ಥಾವರಗಳ ಕೆಲವು ಘಟಕಗಳನ್ನು ನಿರ್ವಹಣೆಗಾಗಿ ಬಂದ್ ಮಾಡಿರುವುದು ಕೂಡ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಮೇಲೆ ತೀವ್ರ ಪ್ರಭಾವವನ್ನು ಬೀರಿದೆ.
ಕಲ್ಲಿದ್ದಲು ಕೊರತೆಯಿಂದಾಗಿ ಪಂಜಾಬ್ನಲ್ಲಿರುವ ಮೂರು ಥರ್ಮಲ್ ಕೇಂದ್ರಗಳನ್ನು ಮುಚ್ಚಲಾಗಿದೆ. ಅದೇ ರೀತಿ ಕೇರಳದಲ್ಲಿ ನಾಲ್ಕು ಥರ್ಮಲ್ ಕೇಂದ್ರಗಳಿಗೆ ಬೀಗ ಜಡಿಯಲಾಗಿದೆ.
ಮುಂದೆ ಉಂಟಾಗಬಹುದಾದ ವಿದ್ಯುತ್ ಬಿಕ್ಕಟ್ಟಿನ ಭಯದಿಂದಾಗಿ ಕರ್ನಾಟಕ ಹಾಗೂ ಪಂಜಾಬ್ ಮುಖ್ಯಮಂತ್ರಿಗಳು ರಾಜ್ಯಗಳಿಗೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಇಂಧನ ಇಲಾಖೆಯು ವಿದ್ಯುತ್ ಉಳಿತಾಯ ಮಾಡುವಂತೆ ನಾಗರಿಕರನ್ನು ವಿನಂತಿಸಿದೆ. ಕೇರಳ ಸರಕಾರವು ಲೋಡ್ ಶೆಡ್ಡಿಂಗ್ನ ಮೊರೆ ಹೋಗುವ ನಿರ್ಧಾರ ಕೈಗೊಂಡಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಖುದ್ದು ಪ್ರಧಾನಿಯವರೇ ಈ ಸಮಸ್ಯೆಗಳಿಗೆ ಸಮಂಜಸ ಪರಿಹಾರ ಒದಗಿಸಬೇಕು ಹಾಗೂ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದು ಇದರಿಂದ ವಿದ್ಯುತ್ ಸರಬರಾಜು ಮಾಡುವ ಸ್ಥಾವರಗಳಿಗೆ ಕಲ್ಲಿದ್ದಲು ಹಾಗೂ ಅನಿಲವನ್ನು ವರ್ಗಾಯಿಸಬಹುದು ಎಂಬ ನಿಟ್ಟಿನಲ್ಲಿ ಪ್ರಧಾನಿಯವರ ಮಧ್ಯಸ್ಥಿಕೆಯನ್ನು ಸೂಚಿಸಿದ್ದಾರೆ.
ಇದರ ನಡುವೆ ಕೇಂದ್ರ ವಿದ್ಯುತ್ ಸಚಿವರಾದ ಸಚಿವ ಆರ್ ಕೆ ಸಿಂಗ್ ಯಾವುದೇ ವಿದ್ಯುತ್ ಕೊರತೆ ಇಲ್ಲ ಮತ್ತು ಕಲ್ಲಿದ್ದಲು ಪೂರೈಕೆ ಮುಂದುವರಿಸಲಾಗುವುದು ಎಂದು ಭರವಸೆ ನೀಡಿದ್ದು ದೇಶವು ದಿನಕ್ಕೆ ಸರಾಸರಿ ಕಲ್ಲಿದ್ದಲಿನ ಅಗತ್ಯಕ್ಕಿಂತ ನಾಲ್ಕು ದಿನಗಳು ಮುಂದಿದ್ದು ಕಲ್ಲಿದ್ದಲಿನ ಕೊರತೆಯಲ್ಲಿ ಅನಗತ್ಯ ಭಯ ಸೃಷ್ಟಿಯಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಮಾಹಿತಿಯ ಪ್ರಕಾರ, ವಿದ್ಯುತ್ ಬಿಕ್ಕಟ್ಟಿಗೆ ಕಾರಣವಾಗಬಹುದಾದ, ಹಿಂದೆಂದೂ ಕಂಡಿರದ ಕಲ್ಲಿದ್ದಲು ಸಂಗ್ರಹದ ಕೊರತೆಯನ್ನು ಉಷ್ಣ ಸ್ಥಾವರಗಳು ಎದುರಿಸುತ್ತಿವೆ ಎಂದಾಗಿದೆ.
ಅಕ್ಟೋಬರ್ 5ರಂದು, ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲನ್ನು ಬಳಸುವ 135 ಥರ್ಮಲ್ ಪ್ಲಾಂಟ್ಗಳಲ್ಲಿ, 106 ಅಥವಾ 80% ಥರ್ಮಲ್ ಪ್ಲಾಂಟ್ಗಳು ನಿರ್ಣಾಯಕ ಅಥವಾ ತೀವ್ರ ಸಂಕಷ್ಟ ಹಂತದಲ್ಲಿವೆ, ಅಂದರೆ ಈ ಸ್ಟೇಶನ್ಗಳು ಮುಂದಿನ 6-7 ದಿನಗಳವರೆಗೆ ಮಾತ್ರ ಕಲ್ಲಿದ್ದಲು ಸ್ಟಾಕ್ಗಳನ್ನು ಹೊಂದಿವೆ ಎಂದಾಗಿದೆ.
ಕರ್ನಾಟಕದಲ್ಲಿ ಕೂಡ ಕಲ್ಲಿದ್ದಲು ಕೊರತೆಯಿಂದ ಮುಂದೆ ಸಂಭವಿಸಬಹುದಾದ ವಿದ್ಯುತ್ ಅಭಾವ ನೀಗಿಸಲು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದ ಚಂದ್ರಾಪುರ ಮತ್ತು ಒಡಿಶಾದ ಮಹಾನದಿ ಕೋಲ್ಫೀಲ್ಡ್ಸ್ ಲಿಮಿಟೆಡ್ನ ಗಣಿಗಳಿಂದ ಕರ್ನಾಟಕವು ಕಲ್ಲಿದ್ದಲು ಹಂಚಿಕೆ ಪಡೆದುಕೊಂಡಿದೆ ಮತ್ತು ಎರಡೂ ಯೋಜನೆಗಳಿಗೆ ಅನುಮತಿ ಬೇಕು ಎಂದು ತಿಳಿಸಿದ್ದಾರೆ. ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ.
ಅಧಿಕ ಮಳೆಯು ಕಲ್ಲಿದ್ದಲು ಸಾಗಾಟಕ್ಕೆ ತಡೆಯೊಡ್ಡಿದ್ದು ಹಾಗೂ ಹೆಚ್ಚಿನ ಬೆಲೆಗಳಿಂದಾಗಿ ಆಮದು ಮಾಡಿದ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ತಮ್ಮ ಸಾಮರ್ಥ್ಯಕ್ಕಿಂತ ಕಡಿಮೆ ವಿದ್ಯುತ್ ಉತ್ಪಾದನೆ ಮಾಡುತ್ತಿವೆ.
ವಿದ್ಯುತ್ ಬಿಕ್ಕಟ್ಟಿಗೆ ಇಂಧನ ಸಚಿವಾಲಯ ನೀಡಿರುವ ಕಾರಣಗಳೇನು?
-ಆಮದು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಪೂರೈಕೆಯಾಗಬೇಕಾದ ಆಮದು ಕಲ್ಲಿದ್ದಲಿನ ದರ ಹಿಂದೆಂದೂ ಕಾಣದ ರೀತಿಯಲ್ಲಿ ಏರಿಕೆಯಾಗಿರುವುದರಿಂದ ದೇಶಿ ಕಲ್ಲಿದ್ದಲಿನ ಮೇಲೆ ಅವಲಂಬನೆಯಾಗುವಂತಾಗಿರುವುದು.
-ಆರ್ಥಿಕತೆಯ ಪುನಶ್ಚೇತನದ ಹಿನ್ನೆಲೆಯಲ್ಲಿ ವಿದ್ಯುತ್ಗೆ ಅಭೂತಪೂರ್ವ ಬೇಡಿಕೆ ಹೆಚ್ಚಳವಾದ ಕಾರಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ಸಂಗ್ರಹ ಕುಸಿತವಾಗಿರುವುದು.
-ಮುಂಗಾರು ಆರಂಭಕ್ಕೂ ಮುನ್ನ ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ಸಂಗ್ರಹಗಳನ್ನು ಮಾಡಿಕೊಳ್ಳದೆ ಇರುವುದು.
-ಸೆಪ್ಟೆಂಬರ್ 2021ರಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ವಿಪರೀತ ಮಳೆ ಸುರಿದಿರುವುದರಿಂದ ಗಣಿಗಳಿಂದ ಕಲ್ಲಿದ್ದಲನ್ನು ಉತ್ಪಾದಿಸುವ ಮತ್ತು ರವಾನಿಸುವ ಕಾರ್ಯಕ್ಕೆ ತೀವ್ರ ಹೊಡೆತ ನೀಡಿರುವುದು.












Click it and Unblock the Notifications