ಶಂಕಿತ ಮಕ್ಕಳ ಕಳ್ಳರ ಹತ್ಯೆ : ಅಮಾನವೀಯತೆಗೆ ಕೊನೆ ಎಂದು?
ಬೆಂಗಳೂರು, ಜುಲೈ 06 : ನೀವು ಯಾವುದೇ ಊರಿಗೆ ಅಪರಿಚಿತ ವ್ಯಕ್ತಿಯಾದರೂ ಅಪರಿಚಿತರಂತೆ, ಸಂಶಯ ಬರುವಂತೆ ಅಡ್ಡಾಡುವಂತಿಲ್ಲ, ಗುರುತು ಪರಿಚಯವಿಲ್ಲದ ಮಕ್ಕಳನ್ನು ಮಾತಾಡಿಸುವಂತಿಲ್ಲ, ಅವರಿಗೇನೂ ನೀಡುವಂತಿಲ್ಲ, ಗುರುತು ಪರಿಚಯವಿದ್ದ ಮಕ್ಕಳೊಂದಿಗೂ ಅಸಭ್ಯವಾಗಿ ನಡೆದುಕೊಳ್ಳುವಂತಿಲ್ಲ...
ಹೀಗೇನಾದರೂ ಆದರೆ ಅವರ ಕಥೆ ಫಿನಿಷ್! ಅದೆಲ್ಲಿಂದ ಸುದ್ದಿ ಹಬ್ಬುತ್ತಿದೆಯೋ, ಅದ್ಯಾರು ವೈರಲ್ ಮಾಡುತ್ತಿದ್ದಾರೋ, ಅದ್ಯಾಕೆ ಜನರು ಸಮೂಹ ಸನ್ನಿಗೆ ಒಳಗಾದವರಂತೆ ಹೀಗೆ ವರ್ತಿಸುತ್ತಿದ್ದಾರೋ... ಉತ್ತರವಿಲ್ಲ. ಆದರೆ, ಕಳೆದ 1 ವರ್ಷದಲ್ಲಿ, 9 ರಾಜ್ಯಗಳಲ್ಲಿ, 15 ಪ್ರಕರಣಗಳಲ್ಲಿ 'ಮಕ್ಕಳ ಕಳ್ಳರು' ಎಂಬ ಗಾಳಿಸುದ್ದಿಗೆ ಬಲಿಯಾದವರು 27 ಜನರು.
ಗುಂಪುಗೂಡಿ ನಿರುದ್ದೇಶವಾಗಿ ಹಲ್ಲೆ ಮಾಡಿದರೂ ಅಪರಾಧ: ಸುಪ್ರೀಂ ಕೋರ್ಟ್
ಇದಕ್ಕೆ ಕರ್ನಾಟಕವೂ ಹೊರತಲ್ಲ. ಬೆಂಗಳೂರಿನ ಕಾಟನ್ ಪೇಟೆಯಲ್ಲಿ ರಾಜಸ್ತಾನ ಮೂಲದ ವ್ಯಕ್ತಿಯನ್ನು ಬಡಿದು ಕೊಲ್ಲಲಾಗಿದೆ. ಪೊಲೀಸರಿಗೂ ತಿಳಿಸದೆ ಸಾರ್ವಜನಿಕರು ಕಾನೂನನ್ನು ಕೈಗೆ ತೆಗೆದುಕೊಳ್ಳುವ ವಿದ್ಯಮಾನ ಆಸ್ಸಾಂನಿಂದ ತಮಿಳುನಾಡಿನವರೆಗೆ ಇಡೀ ದೇಶದಲ್ಲಿ ಆವರಿಸಿಕೊಂಡಿದೆ, ಭಯವನ್ನು ಹುಟ್ಟುಹಾಕಿದೆ.
ಇತ್ತೀಚೆಗೆ ಮಕ್ಕಳ ಕಳ್ಳ ಎಂದು ಕಾರವಾರದಲ್ಲಿಯೂ ಮಾತು ಬಾರದ ವ್ಯಕ್ತಿಯ ಮೇಲೆ ಬರ್ಬರವಾಗಿ ಹಲ್ಲೆ ಮಾಡಲಾಗಿತ್ತು. ಆದರೆ, ಅದೃಷ್ಟವಶಾತ್ ಆತ ಸಾವಿಗೀಡಾಗಲಿಲ್ಲ. 'ಮಕ್ಕಳನ್ನು ಕಳ್ಳತನ' ಮಾಡಲಾಗುತ್ತಿದೆ ಎಂಬ ಪುಕಾರುಗಳು ಬಾಯಿಂದ ಬಾಯಿಗೆ, ವಾಟ್ಸಾಪಿನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಕ್ಷಣಾರ್ಧದಲ್ಲಿ ಹಬ್ಬಿಕೊಳ್ಳುತ್ತಿರುವುದೇ ಇದಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಮಹಾರಾಷ್ಟ್ರದ ಧುಲೆ ಎಂಬ ಜಿಲ್ಲೆಯಲ್ಲಿ ಮಕ್ಕಳ ಅಪಹರಣ ಮಾಡುತ್ತಿದ್ದಾರೆಂದು 5 ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮತ್ತೊಂದು ಘಟನೆಯಲ್ಲಿ ಮತ್ತೆ ಐವರು ಸಾವಿಗೀಡಾಗಬೇಕಾಗಿತ್ತು ಮಹಾರಾಷ್ಟ್ರದಲ್ಲಿ. ಆದರೆ, ಪೊಲೀಸರು ಸಕಾಲಕ್ಕೆ ಆಗಮಿಸಿದ್ದರಿಂದ ಅವರು ಬಚಾವಾಗಿದ್ದಾರೆ. ಈ ಘಟನೆಗಳಿಗೆ ಮೂಲ ಕಾರಣ ವಾಟ್ಸಾಪ್. ಇಂಥ ಸುದ್ದಿಗಳನ್ನು ಹಬ್ಬಿಸಲು ಇಂಟರ್ನೆಟ್ ಬಳಸುವವರಿಗೆ ಎಷ್ಟು ಸಮಯ ಬೇಕು?
ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನ ತಂದೆಯನ್ನೇ ಥಳಿಸಿದ ಸಾರ್ವಜನಿಕರು
ಈ ಹಿನ್ನೆಲೆಯಲ್ಲಿ ವಾಟ್ಸಾಪ್ ಗೆ ಕೇಂದ್ರ ಪತ್ರ ಬರೆದಿದ್ದು, ಮಕ್ಕಳ ಕಳ್ಳತನ ಆಗುತ್ತಿದೆ ಎಂಬಂಥ ಸುಳ್ಳು ಅಥವಾ ಗಾಳಿಸುದ್ದಿಗಳು ಹಬ್ಬದಂತೆ, ಇಂಥ ಸುದ್ದಿಗಳಿಗೆ ಕಡಿವಾಣ ಹಾಕುವಂತೆ ನಿರ್ದೇಶನ ನೀಡಿದೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಅಪರಾಧವಾಗಿದ್ದರೂ, ಹಬ್ಬುತ್ತಿರುವ ಸುದ್ದಿ ನಿಜವೋ ಅಥವಾ ಸುಳ್ಳೋ ಎಂದು ತಿಳಿದುಕೊಳ್ಳುವಷ್ಟು ಕೂಡ ತಾಳ್ಮೆ ಆಕ್ರೋಶಭರಿತ ಜನರಲ್ಲಿ ಇರುವುದಿಲ್ಲ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಪೊಲೀಸರ ನಿಷ್ಕ್ರಿಯತೆ. ಪೊಲೀಸರಿಗೆ ಸುದ್ದಿ ತಿಳಿದು ಅವರು ಸ್ಥಳಕ್ಕೆ ಬರುವ ಹೊತ್ತಿಗೆ, ಅಮಾಯಕರ ಚಟ್ಟ ಕೂಡ ರೆಡಿಯಾಗಿರುತ್ತದೆ. ಇಲ್ಲಿ, ವಾಸ್ತವಿಕತೆಯನ್ನು ಪರಾಮರ್ಶೆ ಮಾಡುವಷ್ಟು ಕೂಡ ಜನರಲ್ಲಿ ವ್ಯವಧಾನ ಇರುವುದಿಲ್ಲ. ಪೊಲೀಸರು ಬರುವುದರೊಳಗೆ ಅವರ ಮಾರಣಹೋಮ ಆಗಿರಬೇಕಷ್ಟೆ.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಆಸ್ಸಾಂ, ಛತ್ತೀಸಘಡ, ತೆಲಂಗಾಣ, ಜಾರ್ಖಂಡ್, ತ್ರಿಪುರಾ ಮುಂತಾದ ರಾಜ್ಯಗಳಲ್ಲಿ 'ಮಕ್ಕಳ ಅಪಹರಣಕಾರರು' ಎಂಬ ಹಣೆಪಟ್ಟಿ ಹಚ್ಚಿಸಿಕೊಂಡವರನ್ನು ಅಮಾನವೀಯವಾಗಿ ಹತ್ಯೆಗೈಯಲಾಗಿದೆ. ಆಯಾ ರಾಜ್ಯಗಳಿಗೆ ಮಾತ್ರವಲ್ಲ ಕೇಂದ್ರ ಸರಕಾರಕ್ಕೂ ಇದು ಭಾರೀ ತಲೆನೋವಾಗಿ ಪರಿಣಮಿಸಿದೆ.
ಕೆಲ ಘಟನೆಗಳಲ್ಲಿ ಪೊಲೀಸರು ಮೂಕಪ್ರೇಕ್ಷಕರಂತೆ ವರ್ತಿಸಿದ್ದಾರೆ. ಜಾರ್ಖಂಡ್ ನಲ್ಲಿ ಪೊಲೀಸ್ ಜೀಪಿನಲ್ಲಿದ್ದ ವ್ಯಕ್ತಿಯನ್ನೇ ಹೊರಗೆಳೆದು ಹತ್ಯೆಗೈಯಲಾಗಿದೆ. ರೌದ್ರಾವತಾರ ತಾಳಿರುವ ಗುಂಪಿನ ನಡುವೆ ಬೆರಳೆಣಿಕೆಯಷ್ಟಿರುವ ಪೊಲೀಸರಾದರೂ ಏನು ಮಾಡಲು ಸಾಧ್ಯವಿದೆ. ಇದಕ್ಕೆ ಪರಿಹಾರವೆಂದರೆ, ಜನರು ಕಾನೂನು ಕೈಗೆ ತೆಗೆದುಕೊಳ್ಳದಂತೆ ಪೊಲೀಸರಿಗೇ ನಿಭಾಯಿಸಲು ಅವಕಾಶ ಮಾಡಿಕೊಡಬೇಕು. ಶಂಕಿತ ವ್ಯಕ್ತಿಯನ್ನು ವಿಚಾರಣೆಗಾಗಿ ಪೊಲೀಸರಿಗೆ ಒಪ್ಪಿಸಬೇಕು.