ಕನೆಕ್ಟಿಕಟ್ ಕನ್ನಡ ಕೂಟದಲ್ಲಿ ಯುಗಾದಿ ಕಲರವ
ಅಂದು ಸಂಜೆ 3.30ಗಂಟೆಗೆ ಆರಂಭವಾದ ಸಮಾರಂಭದಲ್ಲಿ 200ಕ್ಕೂ ಅಧಿಕ ಮಂದಿ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. ಮೊದಲಿಗೆ ಗಜಾನನ ಪ್ರಾರ್ಥನೆಯನ್ನು ಸ್ತುತಿಸಿದವರು ಇಂದು ದೊಡ್ಡಮನೆ.
ರಂಗಲಕ್ಷ್ಮಮ್ಮ ಹಾಗೂ ಭಾಗ್ಯ ಕೋಮರ್ಲ ಅವರು ದೀಪ ಬೆಳಗಿ, ಬೇವು-ಬೆಲ್ಲವನ್ನು ವಿತರಿಸಿ ಸಮಾರಂಭವನ್ನು ಉದ್ಘಾಟಿಸಿದರು. ಸ್ವಾಗತ ಭಾಷಣದಲ್ಲಿ ಶ್ರೀನಿವಾಸ್ ಅವರು ಎಲ್ಲರಿಗೂ ಆತ್ಮೀಯವಾಗಿ ಶುಭಾಶಯ ಕೋರಿ, ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವ ಸಭಿಕರಿಗೆ ಧನ್ಯವಾದಗಳನ್ನು ತಿಳಿಸಿದರು. ಕನ್ನಡ ಕೂಟದ ನಾಮಕರಣದ ಬಗ್ಗೆ ತಿಳಿಸಿ, ಸಭಿಕರಿಗೆ ಹೆಸರನ್ನು ನೊಂದಾಯಿಸುವಂತೆ ಕೋರಿದರು.
ಕಾರ್ಯಕ್ರಮ ನಿರೂಪಕರಾದ ಹರ್ಷವರ್ಧನ ಅವರು ತಮ್ಮ ಅಚ್ಚ ಕನ್ನಡದಿಂದ ಚೊಕ್ಕವಾಗಿ ಸಭಿಕರನ್ನು ತಮ್ಮೊಡನೆ ಸಂಭಾಷಣೆಗೆ ತೊಡಗುವಂತೆ ಮಾಡಿದರು. ಆಗಾಗ ಯುಗಾದಿ ಚುಟುಕು, ಕೈಲಾಸಂರವರ ನಗೆಚಟಾಕಿ ಹಾರಿಸುತ್ತ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದ ಶೈಲಿ ಮನರಂಜಿಸಿತು. ಅವರ ಹೋಳಿಗೆ ಕಣಕದ ಬಗ್ಗೆ ರಸಪ್ರಶ್ನೆ ಸ್ವಾರಸ್ಯಕರವಾಗಿತ್ತು. ಕುಮಾರಿ ಸಿರಿಶಾಸ್ತ್ರಿ, ದಿವ್ಯಾ ಕೀರ್ತಿ, ಅಮಿತಾ ಶಾಸ್ತ್ರಿ, ರೂಪ ಧಾರವಾಡ್ ಅವರುಗಳು, ಬೇಂದ್ರೆ ಕವನ ‘ಯುಗ ಯುಗಾದಿ ಕಳೆದರು...’ ಹಾಡಿದರು. ಶ್ರೇಯ ಹರ್ಷವರ್ಧನ, ಸಾಯೀಶ ವೆಂಕಟಗಿರಿ ಮನಸ್ವಿನಿ ರಾವ್, ಅಪರ್ಣಾ ಅತ್ರೇಯ, ಅರ್ಚಿಷಾ ಮೂರ್ತಿ, ಆನರ್ಘ್ಯ ಮೂರ್ತಿ, ಪ್ರಣತಿ ಸಂತೋಷ್, ರೇಶಮ್ ಗೌಡ, ಅನಘ ಗಿರೀಶ್, ನಿಶಿತ ಕುಮಾರ್ ಸೇರಿದಂತೆ ವಿವಿಧ ಪುಟಾಣಿಗಳು ಪ್ರಸ್ತುತಪಡಿಸಿದ ‘ಚುಕು ಬುಕು ರೈಲು ಬಂತು’ ಎಂಬ ನೃತ್ಯ ಮುದನೀಡುವಂತಿತ್ತು. ಪುಟಾಣಿ ಮನಸ್ವಿನಿರಾವ್ ಕೀಲಿಮ ಣೆಯಲ್ಲಿ ವರವೀಣಾ ಮೃದುಪಾಣಿ ಹಾಗೂ ಲಂಬೋಧರ ಲಕುಮಿಕರ....ಕೃತಿಗಳನ್ನು ಮಧುರವಾಗಿ ಮೂಡಿಸಿದಳು. ‘ಆಡಿದನೋ ರಂಗ’ ಎಂಬ ಪುರಂದರದಾಸರ ಕೃತಿಗೆ ಭರತನಾಟ್ಯ ಪ್ರಸ್ತುತ ಪಡಿಸಿದವರು ಅಭಿಜಿತ್ ಹಾಗು ಅನಘ ನಾಗರಾಜ್. ಮಾ।। ಶಿವ ಮಂಜುನಾಥ್ ಹಾಗು ಮಾ।। ಜೇಕಬ್ ಝೇಂಡರ್ಮನ್ ಅವರ ಮ್ಯಾಜಿಕ್ ಪ್ರದರ್ಶನ ಮಕ್ಕಳನ್ನೂ ಹಾಗು ಹಿರಿಯರನ್ನು ಛ್ಹೂ ಮಂತ್ರಿಸಿತು. ಕುಮಾರಿಯರಾದ ಮನಸ್ವಿನಿ ರಾವ್, ಅಮಿತಾ ಶಾಸ್ತ್ರಿ, ವರ್ಷಾ ವಿಜಯ್ುಕುಮಾರ್, ಅನರ್ಘ್ಯ ಮೂರ್ತಿ, ಮಹತಿ ಕುಮಾರ್, ರೂಪ ದಾರ್ವಾರ್ ಅವರುಗಳು ಜಿ.ಪಿ.ರಾಜರತ್ನಂರವರ ‘ರಂಗವಲ್ಲಿ ಇಕ್ಕುತಾರೆ’ ಗೀತೆಗೆ ನೃತ್ಯ ರೂಪಕವನ್ನು ರಮಣೀಯವಾಗಿ ಪ್ರಸ್ತುತಪಡಿಸಿದರು. ಮಕ್ಕಳಿಂದ ಯೋಗ ಪ್ರದರ್ಶನ ಅಮೃತ್ ಅವರ ನಿರ್ದೇಶನದಲ್ಲಿ ನಡೆಯಿತು. ಯುಗಾದಿ ಹಾಗು ಯೋಗದ ನಡುವೆ ಇರುವ ಸಂಬಂಧವನ್ನು ಪ್ರೇಕ್ಷಕರಿಗೆ ತಿಳಿಸಿದರು. ಈ ಯೋಗ ಕಾರ್ಯಕ್ರಮದಲ್ಲಿ ಸುಕೃತ್ ವೆಂಕಟಗಿರಿ, ಅಭಿಷೇಕ್ ಗೋಸಾವಿ, ಪುನೀತ್ ಕುಮಾರ್, ನೇಹ ಕುಮಾರ್, ಅಮಿತ ಶಾಸ್ತ್ರಿ, ವರ್ಷ ವಿಜಯಕುಮಾರ್, ರಾಹುಲ್, ರೂಪ ಹಾಗೂ ಮಹತಿ ಕುಮಾರ್ ಸೇರಿದಂತೆ ವಿವಿಧ ಮಕ್ಕಳು ಪಾಲ್ಗೊಂಡಿದ್ದವು. ‘ಚೈತ್ರನ ಚಿತ್ತಾರ ಮೆಚ್ಚಿಕೊ...’, ‘ಸಾಗಿತೋ ತೇಲಿತೋ...’, ‘ಕಾಲದ ಕಡಲಲಿ... ’ ಎಂಬ ಮೂರು ವೃಂದಗಾನಗಳನ್ನು ಸುಶ್ರಾವ್ಯವಾಗಿ ಹಾಡಿದವರು; ಡಾ।।ಪ್ರಕಾಶ್ ಪುರಾಣಿಕ್(ತಬಲ), ಡಾ।।ಜಯಶ್ರೀ (ಕೀಲೀಮಣೆ) , ಡಾ।। ವೆಂಕಟೇಶ್, ಹರ್ಷವರ್ಧನ, ಬಸು ಚಂದ್ರಶೇಖರ್, ಗಿರೀಶ್, ಗಾಯತ್ರಿಭಟ್, ಡಾ।।ಸಂಧ್ಯಾ ಕಾನಡೆ, ಭಾಗ್ಯ ಕೋಮರ್ಲ, ಪದ್ಮಾ ಹರ್ಷವರ್ಧನ, ಸುಮನ ಕೀರ್ತಿ, ರೂಪ ಬಸವರಾಜು, ಪೂರ್ಣಿಮಾ ಶಾಸ್ತ್ರಿ, ಸಿರಿ ಶಾಸ್ತ್ರಿ. ತನ್ಮಧ್ಯೆ ಸಭಿಕರು ಬ್ಯಾಲೆಟ್ ಮೂಲಕ ಚುನಾಯಿಸಿದ ಕನೆಕ್ಟಿಕಟ್ ಕನ್ನಡ ಕೂಟದ ನಾಮಕರಣವನ್ನು ‘ಹೊಯ್ಸಳ’ ಎಂದು ಮಾಡಲಾಯಿತು. ಮಲ್ಲಿಸಣ್ಣಪ್ಪನವರ ಚುಟುಕುಗಳು ಎಲ್ಲರನ್ನು ನಗೆಗಡಲಿನಲ್ಲಿ ಮುಳುಗಿಸಿತು. ಅಶ್ವಿನಿ ಅವರು ಕೋಡಗನ ಕೋಳಿ ನುಂಗಿತ್ತಾ ಜನಪದ ಗೀತೆ ಹಾಡಿದರು. ಸಂಧ್ಯಾಮಂಜುನಾಥ್ ಅವರು ‘ಬಾರಯ್ಯ ರಂಗ’’ ಎಂಬ ಪುರಂದರ ದಾಸರ ಕೃತಿಯನ್ನು ಪ್ರಸ್ತುತ ಪಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮಕ್ಕಳಿಗೆಲ್ಲಾ ನೀಲಕಂಠಯ್ಯನವರಿಂದ ಮೆಚ್ಚುಗೆ ಪತ್ರ ವಿತರಿಸಲಾಯಿತು. ‘ವೇಷ-ಸ್ನೇಹದ-ಸಮಾವೇಶ’ ಎಂಬ ನಗೆನಾಟಕವನ್ನು ರಮ್ಯವಾಗಿ ಪ್ರಸ್ತುತಪಡಿಸಲಾಯಿತು. ಪ್ರಸಾದ್ ಶಾಸ್ತ್ರಿ, ಪ್ರೇಮಾ ಕೇಶವಕುಮಾರ್, ಕೇಶವಕುಮಾರ್, ಶ್ರೀನಿವಾಸ್ ಕೋಮರ್ಲ, ನಾರಾಯಣ್, ಸರೋಜಾ ನಾರಾಯಣ್, ಸುಬ್ಬರಾಮು ಕಣಿವೆ, ಬಸು ಚಂದ್ರಶೇಖರ್ , ರೂಪಾ ಬಸು, ಗಿರೀಶ್, ಅರುಣ್ ದಾರ್ವಾರ್, ಸಿರೀಶ್ ವೆಂಕಟಗಿರಿ, ಪೂರ್ಣಿಮಾ ಶಾಸ್ತ್ರಿ, ಕು।। ಅಮಿತಾ ಶಾಸ್ತ್ರಿ ಮಾ।। ಸುನೀತ್ ಕೀರ್ತಿ ಅಭಿನಯ ಚೆನ್ನಾಗಿತ್ತು. ಇಷ್ಟೆಲ್ಲಾ ಮನೋರಂಜನೆಗೆ, ಹಬ್ಬದ ಹೋಳಿಗೆ ಭೋಜನ, ಬಿಸಿಬೇಳೆಭಾತ್, ಮಜ್ಜಿಗೆಹುಳಿ, ಕೋಸಂಬರಿ ಸೇರಿದಂತೆ ಇನ್ನಿತರ ತಿನಿಸುಗಳು ಮೆರುಗು ನೀಡಿತ್ತು. ಅನಿವಾಸಿ ಕನ್ನಡಿಗರ ಈ ಯುಗಾದಿ ಸಮಾರಂಭ, ಎಲ್ಲರಿಗೂ ತವರಿನ ಯುಗಾದಿ ಸಂಭ್ರಮವನ್ನು ನೆನಪಿಗೆ ತಂದಿತ್ತು. |