Get Updates
Get notified of breaking news, exclusive insights, and must-see stories!

ಮಹಾಶಿವರಾತ್ರಿ ವಿಶೇಷ: ರಾಜ್ಯಾದ್ಯಂತ ಶಿವನ ದರ್ಶನ ಪಡೆದು ಪುನೀತರಾದ ಭಕ್ತರು

ಬೆಂಗಳೂರು, ಮಾರ್ಚ್ 11: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿಗೆ ಭಕ್ತರ ದಂಡು ಹರಿದುಬರುತ್ತಿದೆ. ಹಂಪಿಯ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಭಕ್ತರು, ನಂತರ ವಿರೂಪಾಕ್ಷ ದೇವರ ದರ್ಶನ ಪಡೆದರು. ಹಂಪಿಗೆ ಸ್ಥಳೀಯರು ಮತ್ತು ಸುತ್ತಮುತ್ತಲಿನ ಜಿಲ್ಲೆ, ಹೊರರಾಜ್ಯದ ಭಕ್ತರು ಸಹ ಆಗಮಿಸಿದ್ದಾರೆ.

ಮಹಾಶಿವರಾತ್ರಿ ನಿಮಿತ್ತ ಪ್ರಸಿದ್ಧ ಹಂಪಿಯ ವಿರೂಪಾಕ್ಷೇಶ್ವರ ದೇವರ ವಿಗ್ರಹಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿತ್ತು. ವಿರೂಪಾಕ್ಷೇಶ್ವರ ದೇವರಿಗೆ ಮೂರು ಬಾರಿ ಅಭಿಷೇಕ ಹಾಗೂ ಹೋಮ ಪೂಜೆಯನ್ನು ನೆರವೇರಿಸಲಾಯಿತು. ಬಳಿಕ ನಾನಾ ಹೂಗಳಿಂದ ಅಲಂಕಾರ ಮಾಡಲಾಯಿತು. ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯ ನೀಡಿರುವ ಚಿನ್ನದ ಕೀರಿಟವನ್ನು ವಿರೂಪಾಕ್ಷೇಶ್ವರನಿಗೆ ತೊಡಿಸಲಾಗಿದೆ.

ವಿಜಯನಗರ ವರದಿ

ವಿಜಯನಗರ ವರದಿ

ವಿರೂಪಾಕ್ಷೇಶ್ವರ ದರ್ಶನ ಪಡೆಯಲು ಸಹಸ್ರ ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನವನ್ನು ಪಡೆದರು. ದೇವರಿಗೆ ಹೂ, ಹಣ್ಣು ಸಮರ್ಪಿಸಿದರು. ಇದಕ್ಕೂ ಮುನ್ನ ಭಕ್ತರು ನದಿಯಲ್ಲಿ ಸ್ನಾನ ಮಾಡಿ, ಬಳಿಕ ದೇವರ ದರ್ಶನವನ್ನು ಪಡೆದರು.ರಾಜ್ಯದ ನಾನಾ ಜಿಲ್ಲೆ ಹಾಗೂ ಆಂಧ್ರಪ್ರದೇಶದ, ತೆಲಂಗಾಣ ರಾಜ್ಯದಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.

ಹಜ್ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ‌ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಂದೆ ಪೃಥ್ವಿರಾಜ್ ಸಿಂಗ್ ರವರು ಶ್ರೀವಿರೂಪಾಕ್ಷೇಶ್ವರ ದರ್ಶನ ಪಡೆದರು.

ಮೈಸೂರು ವರದಿ

ಮೈಸೂರು ವರದಿ

ನಾಡಿನೆಲ್ಲೆಡೆ ಮಹಾಶಿವರಾತ್ರಿ ಆಚರಣೆ ನಡೆಯುತ್ತಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನ ಅಂಬಾವಿಲಾಸ ಅರಮನೆಯ ತ್ರಿನೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು.

ಗುರುವಾರ ಮುಂಜಾನೆ 5 ಗಂಟೆಯಿಂದಲೇ ಶಿವನಿಗೆ ವಿಶೇಷ ಪೂಜೆ ಆರಂಭವಾಗಿದ್ದು, ನಗುಸ್ಯಾನ ಪೂರ್ವಕ, ರುದ್ರಾಭಿಷೇಕ, ಪಂಚಾಮೃತಭಿಷೇಕ ಪೂಜೆ ಹಾಗೂ ತ್ರಿನೇಶ್ವರನಿಗೆ ಚಿನ್ನದ ಕೊಳಗ ಧಾರಣೆ ಮಾಡಲಾಯಿತು. ಚಿನ್ನದ ಕೊಳಗ ಧರಿಸಿದ ಶಿವನನ್ನು ನೋಡಲು ಭಕ್ತಸಾಗರವೇ ಹರಿದು ಬಂದಿತು.

ಮುಂಜಾನೆ 6 ಗಂಟೆಯಿಂದಲೇ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದೆ. ಸರತಿ ಸಾಲಿನಲ್ಲಿ ನಿಂತು ಚಿನ್ನದ ಮುಖವಾಡ ಧರಿಸಿದ ಶಿವನನ್ನ ಭಕ್ತರು ಕಣ್ತುಂಬಿಕೊಳ್ಳುತ್ತಿದ್ದು, ದೇವಸ್ಥಾನದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೂ ಪೂಜೆ ನಡೆಯಲಿದೆ. ಬಳಿಕ ಅಂತಿಮವಾಗಿ ಪ್ರಕಾರೋತ್ಸವದ ಮೂಲಕ ಶಿವರಾತ್ರಿ ಪೂಜೆ ಸಮಾಪ್ತಿಯಾಗಲಿದೆ.

ಕೋಲಾರ ವರದಿ

ಕೋಲಾರ ವರದಿ

ಇಂದು ಮಹಾಶಿವರಾತ್ರಿ ಅಂಗವಾಗಿ ಮುಂಜಾನೆಯಿಂದಲೇ ಕೋಲಾರ ಜಿಲ್ಲೆಯಲ್ಲಿ ವಿವಿಧ ಶಿವನ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕೋಲಾರದ ಅಂತರಗಂಗೆಯಲ್ಲಿರುವ ಕಾಶಿ ವಿಶ್ವನಾಥ ಹಾಗೂ ಸೋಮೇಶ್ವರ ದೇವಾಲಯ ಸೇರಿದಂತೆ ಏಕ ಕಾಲದಲ್ಲಿ ಕೋಟಿ ಶಿವಲಿಂಗಗಳ ದರ್ಶನ ನೀಡುವ ಕೋಟಿಲಿಂಗ ಕ್ಷೇತ್ರದಲ್ಲಿ ಇಂದು ವಿಶೇಷ ಪೂಜೆಗಳು ನಡೆಯುತ್ತಿದೆ.

ಇನ್ನು ಶಿವನ ದರ್ಶನ ಪಡೆಯಲು ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಜನಸ್ತೋಮವೇ ಹರಿದು ಬರುತ್ತಿದೆ. ವಿಶ್ವದ ಏಕೈಕ ಸ್ಥಳ ಕೋಟಿ ಶಿವಲಿಂಗಗಳನ್ನು ಏಕಕಾಲದಲ್ಲಿ ತಮ್ಮ ಕಣ್ತುಂಬಿಕೊಳ್ಳುವ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಕಮ್ಮಸಂದ್ರ ಗ್ರಾಮದ ಬಳಿ ಇರುವ ಅಪೂರ್ವ ಕೋಟಿಲಿಂಗ ಕ್ಷೇತ್ರ. ಮಹಾಶಿವರಾತ್ರಿ ಅಂಗವಾಗಿ ಕೋಟಿಲಿಂಗೇಶ್ವರದಲ್ಲಿ ವಿಶೇಷ ಪೂಜೆ ಹಾಗೂ ಮುಂಜಾನೆಯಿಂದಲೇ ಅಲ್ಲಿನ 108 ಅಡಿಯ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಹಾಗೂ ಅಲಂಕಾರವನ್ನು ಮಾಡಲಾಗಿದೆ.

ಉತ್ತರ ಕನ್ನಡ ವರದಿ

ಉತ್ತರ ಕನ್ನಡ ವರದಿ

ರಾಜ್ಯದ ದಕ್ಷಿಣ ಕಾಶಿ ಖ್ಯಾತಿಯ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲೂ ಸಹ ಶಿವರಾತ್ರಿ ವೈಭವ ಕಳೆಕಟ್ಟಿದೆ. ಶಿವನ ಆತ್ಮಲಿಂಗವಿರುವ ಕ್ಷೇತ್ರವಾಗಿರುವ ಹಿನ್ನಲೆ ಶಿವರಾತ್ರಿಯಂದು ನಾನಾ ಭಾಗಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಆದರೆ ಈ ಬಾರಿ ಕೊರೊನಾ ಅಬ್ಬರದಿಂದಾಗಿ ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಹೆಚ್ಚಿನ ಜನಜಂಗುಳಿ ಇಲ್ಲದೇ ಶಿವರಾತ್ರಿ ಆಚರಣೆ ನಡೆದಿದೆ.

ಮುಂಜಾನೆ 3 ಗಂಟೆಯಿಂದಲೇ ದೇವಸ್ಥಾನದಲ್ಲಿ ಅಷ್ಟೋತ್ತರ ಬಿಲ್ವಾರ್ಚನೆ, ಕುಂಭಾಭಿಷೇಕ, ಕ್ಷೀರಾಭಿಷೇಕ, ಪಂಚಾಮ್ರುತಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನ ಕೈಗೊಳ್ಳಲಾಯಿತು. ಭಕ್ತರಿಗೆ ಸರತಿ ಸಾಲಿನಲ್ಲಿ ಆಗಮಿಸಿ ಆತ್ಮಲಿಂಗವನ್ನ ಸ್ಪರ್ಶಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಯಿತು. ಇನ್ನು ದೇವರ ದರ್ಶನದ ಬಳಿಕ ಭಕ್ತರು ಸಮುದ್ರಸ್ನಾನ ಮಾಡಿ ತೀರದಲ್ಲಿಯೇ ಮರಳಿನ ಶಿವಲಿಂಗವನ್ನ ಮಾಡಿ ಭಜನೆ ಮಾಡುತ್ತಾ ಪೂಜೆ ಸಲ್ಲಿಸಿದರು. ಈ ರೀತಿ ಮಾಡಿದಲ್ಲಿ ಕಷ್ಟಗಳು ದೂರಾಗುತ್ತವೆ ಎನ್ನುವ ನಂಬಿಕೆ ಇದ್ದು, ನೂರಾರು ಭಕ್ತರು ಸಮುದ್ರಸ್ನಾನ ಮಾಡಿ ಸಂತೃಪ್ತರಾದರು.

ಮಡಿಕೇರಿ ವರದಿ

ಮಡಿಕೇರಿ ವರದಿ

ಮಡಿಕೇರಿ ನಗರದ ಓಂಕಾರೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ 'ಶ್ರೀ ರುದ್ರ ಹೋಮ' ಶ್ರದ್ಧಾಭಕ್ತಿಯಿಂದ ನಡೆಯಿತು. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಸಹಯೋಗದಲ್ಲಿ ಬೆಳಗ್ಗಿನಿಂದಲೇ ವಿವಿಧ ಪೂಜಾ ವಿಧಿವಿಧಾನಗಳು ಜರುಗಿದವು. ಮಧ್ಯಾಹ್ನ ಪೂರ್ಣಾಹುತಿ ನಂತರ ಮಹಾಮಂಗಳಾರತಿ ನಡೆಯಿತು. ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು. ಮಹಾಶಿವರಾತ್ರಿ ಪ್ರಯುಕ್ತ ರಾತ್ರಿ ದೇವಾಲಯದಲ್ಲಿ ಬೆಳಗಿನಜಾವದ ಪೂಜೆ ನೆರವೇರಲಿದೆ.

ಶೇಜವಾಡದ ಶೆಜ್ಜೇಶ್ವರನಿಗೂ ವಿಶೇಷ ಪೂಜೆ

ಶೇಜವಾಡದ ಶೆಜ್ಜೇಶ್ವರನಿಗೂ ವಿಶೇಷ ಪೂಜೆ

ಪಂಚಲಿಂಗ ಕ್ಷೇತ್ರಗಳಲ್ಲೊಂದಾದ ಕಾರವಾರ ತಾಲೂಕಿನ ಶೇಜವಾಡದ ಶೆಜ್ಜೇಶ್ವರ ದೇವಾಲಯದಲ್ಲಿ ಕೂಡ ಶಿವರಾತ್ರಿಯ ವಿಶೇಷ ಪೂಜಾವಿಧಿಗಳು ನಡೆದವು. ಬೆಳಿಗ್ಗೆಯಿದ ಸಂಜೆಯವರೆಗೆ ಪಂಚಾಮೃತ ಅಭಿಷೇಕ, ಲೋಕ ಕಲ್ಯಾಣಾರ್ಥವಾಗಿ ಶತರುದ್ರಾಭಿಷೇಕ, ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ರಾತ್ರಿವರೆಗೂ ಶಿವಲಿಂಗದ ದರ್ಶನ ಪಡೆದರು.

ಶೇಜವಾಡ ಗೋಕರ್ಣದಷ್ಟೇ ಪುರಾಣ ಪ್ರಸಿದ್ಧ ಸ್ಥಳ. ಇಲ್ಲಿ ಶಿವನ ಸಾಕ್ಷಾತ್ ಆತ್ಮಲಿಂಗದ ಭಾಗವಿದೆ. ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಗೋಕರ್ಣದಲ್ಲಿ ಲಭಿಸುವಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಪುರಾಣದಲ್ಲಿ ಉಲ್ಲೇಖಿಸಿರುವಂತೆ ರಾವಣನಿಂದ ನಾಲ್ಕು ದಿಕ್ಕಿಗೆ ಎಸೆಯಲ್ಪಟ್ಟ ಆತ್ಮಲಿಂಗದ ಒಂದು ಭಾಗ ಇಲ್ಲಿ ನೆಲೆಗೊಂಡಿದೆ. ಉಳಿದ ಭಾಗಗಳು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ, ಗುಣವಂತೇಶ್ವರ ಹಾಗೂ ಧಾರೇಶ್ವರದಲ್ಲಿದ್ದು, ಇಲ್ಲೂ ಮಹಾಶಿವರಾತ್ರಿ ಪೂಜಾವಿಧಿಗಳು ನಡೆದವು.

ದಾವಣಗೆರೆ ವರದಿ

ದಾವಣಗೆರೆ ವರದಿ

ಗುರುವಾರ (ಮಾ.11)ದಂದು ಮಹಾ ಶಿವರಾತ್ರಿ ಅಂಗವಾಗಿ ದಾವಣಗೆರೆ ನಗರದ ಶಿವನ ದೇವಾಲಯಗಳಲ್ಲಿ ವಿಶೇಷಪೂಜೆ, ಮಹಾಭಿಷೇಕಗಳು ಜರುಗಿದವು. ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ಭಕ್ತಿ ಸಮರ್ಪಿಸಿದರು.

ನಗರದ ಹೊಂಡದ ವೃತ್ತದ ಪಾತಾಳಲಿಂಗೇಶ್ವರ ದೇವಸ್ಥಾನ, ಪಿಜೆ ಬಡಾವಣೆಯ ಕಾಶಿ ವಿಶ್ವನಾಥ ದೇವಸ್ಥಾನ, ಅಶೋಕ ಚಿತ್ರಮಂದಿರದ ಬಳಿಯಿರುವ ಲಿಂಗೇಶ್ವರ ದೇವಸ್ಥಾನ, ಪಿ.ಬಿ ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನ, ವಿದ್ಯಾನಗರದ ಈಶ್ವರ ಪಾರ್ವತಿ ದೇವಾಲಯ ಸೇರಿದಂತೆ ವಿವಿಧ ಧಾರ್ಮಿಕ ಮಂದಿರಗಳಲ್ಲಿ ಗಂಟೆಯ ಸದ್ದಿನ ಜತೆಗೆ "ಓಂ ನಮಃ ಶಿವಾಯ' ಶಿವನಾಮ ಸ್ಮರಣೆ ಮೊಳಗಿತು. ಭಕ್ತರು ಶಿವನಿಗೆ ಹೂವು, ಗಂಧ, ಬಿಲ್ವಪತ್ರೆ, ಪ್ರಸಾದ, ಹಣ್ಣು-ಕಾಯಿ ನೈವೇದ್ಯ ಮಾಡಿ ಭಕ್ತಿ ಸಮರ್ಪಿಸಿ ಪುನೀತಭಾವ ಅನುಭವಿಸಿದರು. ಬಿಲ್ವಪತ್ರೆ ಪ್ರಿಯ ಶಿವನಿಗೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ, ಮಜ್ಜಿಗೆ ವಿತರಣೆ ಮಾಡಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+