ಅಕ್ಟೋಬರ್ 1ರಂದು ಧನುರ್ ಲಗ್ನದಲ್ಲಿ ದಸರಾಗೆ ಚಾಲನೆ
ಮೈಸೂರು, ಸೆಪ್ಟೆಂಬರ್ 29: ನಾಡ ಹಬ್ಬ ಮೈಸೂರು ದಸರಾಕ್ಕೆ ಅಕ್ಟೋಬರ್ 1ರ ಬೆಳಗ್ಗೆ 11.40ಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ಚಾಮುಂಡಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ದಸರೆ ಉದ್ಘಾಟನೆಗಾಗಿ ಡಾ.ಚೆನ್ನವೀರ ಕಣವಿ ಅವರು ಸೆ.29ರಂದು ಮೈಸೂರಿಗೆ ರೈಲಿನಲ್ಲಿ ಬಂದಿದ್ದು, ಸಂಸದ ಪ್ರತಾಪ ಸಿಂಹ ಆಹ್ವಾನಿಸಿದ್ದಾರೆ. ಅ.11ರ ಮಧ್ಯಾಹ್ನ 2.16ಕ್ಕೆ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಧ್ವಜ ಪೂಜೆ ನೆರವೇರಿಸಲಿದ್ದು, 2.45ಕ್ಕೆ ಅರಮನೆ ಮುಂಭಾಗ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಮಕರ ಲಗ್ನದಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಲಾಗುವುದು ಎಂದು ತಿಳಿಸಿದರು.[ದಸರಾಗೆ ಕೈ ಬೀಸಿ ಕರೆಯುತ್ತಿದೆ ಸಿಂಗಾರಗೊಂಡ ಅರಮನೆ ನಗರಿ]

ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ 36 ಸ್ತಬ್ಧ ಚಿತ್ರಗಳು ಮತ್ತು 30 ಕಲಾತಂಡಗಳು ಭಾಗವಹಿಸಲಿವೆ. ಅದೇ ದಿನ ರಾತ್ರಿ 8 ಗಂಟೆಗೆ ಬನ್ನಿಮಂಟಪದಲ್ಲಿ ನಡೆಯಲಿರುವ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ಡಾ.ವಜೂಭಾಯಿ ರೂಢಭಾಯಿ ವಾಲಾ ಗೌರವ ವಂದನೆ ಸ್ವೀಕರಿಸಲಿದ್ದಾರೆ.[ಮೈಸೂರು ದಸರಾ: ಅ.1ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ]
ಅಂದು ನಡೆಯುವ ಪಂಜಿನ ಕವಾಯತು ಪ್ರದರ್ಶನವನ್ನು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ದೊಡ್ಡ ಎಲ್ಇಡಿ ಪರದೆ ಮೂಲಕ ನೇರಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಿದರು.












Click it and Unblock the Notifications